Skip to main content

WELCOME TO KUNDAPUR !!!!!! - PART-II

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ||
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್||

ಮನೆಗೆ ತಲುಪಿದೊಡನೆ ಅಮ್ಮ-ಅಪ್ಪನೊಂದಿಗೆ ಮೊದಲ ಸುತ್ತಿನ ಸೆಂಟಿಮೆಂಟುಗಳು ಮುಗಿದ ಮೇಲೆ ಒಮ್ಮೆ ಹೊರಬಂದು ಪ್ರಾತಃಕಾಲದ ಕುಂದಾಪುರ ದರ್ಶನ  ಮಾಡಿ ಬಂದೆನು. ಆ ದರ್ಶನದ ರನ್ನಿಂಗ್ ಕಾಮೆಂಟರಿ.........
"ಪೆಟ್ರೋಲ್ ಬಂಕ್ ನಲ್ಲಿ ಟವೆಲ್ ಉಟ್ಟು ಬಸ್ ತೊಳೆಯುತ್ತಿರುವ ಕ್ಲೀನರ್, ಅಶ್ವಥ್ಥ ಮರಕ್ಕೆ ಸುತ್ತು ಹಾಕುತ್ತಿರುವ ಜನರೇಶನ್ 3 , ನಡೆದು ಬಾರಯ್ಯಾssss ಭವಕಡಲಿಗೇsss sಪ್ರತಿದಿನ ಇದನ್ನೇ ಹಾಡುವ ಬೊಬ್ಬರ್ಯ ಕಟ್ಟೆಯ ಕ್ಯಾಸೆಟ್ಟು ,ಹತ್ತಿದ ಸೈಕಲ್ಲನ್ನು ನಿಲ್ಲಿಸದೇ.... ನೆಲಕ್ಕೆ ಕಾಲು ತಾಗಿಸದೇ ಮನೆಯ ಬಾಗಿಲ ಬುಡಕ್ಕೇ ಪೇಪರ್ ಎಸೆಯುವ ಶಾರ್ಪ್ ಶೂಟರ್ ಪೇಪರಿನವನು, ಶಾಸ್ತ್ರಿ ಪಾರ್ಕಿನಲ್ಲಿ ಮುಂಜಾನೆ ಭಟ್ಕಳ ಬೆಂಗಳೂರಿನಿಂದ ಬಂದ ಹೂವಿಗೆ ನೀರು ಚಿಮುಕಿಸುತ್ತಿರುವ ಹೂವಿನ ವ್ಯಾಪಾರಿಗಳು,ಬಿಕೋ ಎನ್ನುತ್ತಿರುವ ರೋಡು ಹಾಗೂ ಅಂಗಡಿಯಲ್ಲಿ ಕೂತಿರುವ ನನ್ನ ಡ್ಯಾಡು. ಇಷ್ಟೇ."

ಒಂದು ನಾಲ್ಕೈದು ವರ್ಷಗಳ ನಂತರ ಕುಂದಾಪುರಕ್ಕೆ ಯಾರಾದರೂ ಬಂದರೆ ಒಂದು ಬಾರಿ ತಾನು ಯಾವ ಊರಿಗೆ ಬಂದೆ ಎಂದು ಬೆಚ್ಚಿ ಬೀಳುವುದು ಸಹಜ. ಶಾಸ್ತ್ರಿ ಪಾರ್ಕಿನ ಮಧ್ಯ ಕದಲದೇ ನಿಂತಿರುವ ಶಾಸ್ತ್ರಿಗಳೊಬ್ಬರೇ ಈ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿ. ಎಲ್ಲಿಯವರೆಗೆಂದರೆ ಶ್ರೀ ಬೊಬ್ಬರ್ಯನವರು ಕೂಡಾ ಹೊಸ RCC ಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದ ಈಜುಕೊಳಗಳಾಗಿದ್ದ ರಸ್ತೆಗಳು ಈಗ ಒನ್ ವೇ ಕಾಂಕ್ರೀಟು ರಸ್ತೆಗಳಾಗಿವೆ. ಹೊಸ ರನ್ನಿಂಗ್ ಟ್ರ್ಯಾಕ್  ಮಾಡಿರುವ ಗಾಂಧೀ ಮೈದಾನಕ್ಕೆ ಏಳು ಸುತ್ತಿನ ಕೋಟೆ ರಚಿಸಿ ಗೇಟು ಮುಚ್ಚಿ ಬೀಗ ಜಡಿದಿದ್ದಾರೆ.ಹೊಸ ಶಾಪಿಂಗ್ ಕಾಂಪ್ಲೆಕ್ಸುಗಳು ಅಂಗಡಿಗಳು ಹೀಗೆ  ಬದಲಾವಣೆಗಳ ಸರಮಾಲೆ ಒಂದೇ ಎರಡೇ?? ಇನ್ನು ಬೆಳಿಗ್ಗೆ ಗಾಂಧಿ ಮೈದಾನದ ಪಕ್ಕ ನಿಂತಿರುವ ದೊಡ್ಡ ಕಾರುಗಳು ಹಾಗು ಮೈದಾನದಲ್ಲಿ ವಾಕಿಂಗ್/ಜಾಗಿಂಗ್ ಮಾಡುತ್ತಿರುವವರ ದಂಡು ಕಂಡರೆ  ಬೆಂಗಳೂರಿನ ಯಾವುದೋ ಪ್ರಮುಖ ಬಡಾವಣೆಗೆ ಬಂದಂತೆ ಅನ್ನಿಸುವುದು ಸಹಜವೆ.

ಇನ್ನು ಸುಮಾರು ಎಂಟು ಒಂಭತ್ತು ಘಂಟೆ ಆಗುತ್ತಿದ್ದಂತೆ ಬಸ್ಸುಗಳ ಭರಾಟೆ ಶುರುವಾಗುತ್ತದೆ.ದುರ್ಗಾಂಬಾ,ಅನಂತ ಪದ್ಮನಾಭ ಮೋಟಾರ್ಸ್ ,ಅಂಬಿಕ ಇವು ಪ್ರಮುಖ ಬಸ್ಸುಗಳಾದರೆ ಇಂಗ್ಲೀಷ್ ವರ್ಣಮಾಲೆಯ ಯಾವುದೇ ಮೂರು ಅಥವಾ ನಾಲ್ಕು ಅಕ್ಷರಗಳನ್ನು  ಸೇರಿಸಿ ಕೊನೆಗೆ ಒಂದು ಮೋಟಾರ್ಸ್ ಅಥವಾ ಟ್ರಾವೆಲ್ಸ ಸೇರಿಸಿದರೆ ಆ ಹೆಸರಿನ ಬಸ್ಸು ಕುಂದಾಪುರದಲ್ಲಿದೆ. ಪ್ರತೀ ಹತ್ತು ನಿಮಿಷಕ್ಕೆ ಒಂದು ಉಡುಪಿಗೆ ಹೋಗುವ ಬಸ್ಸು ಸಿಗುತ್ತದೆ. ಬಸ್ ಸ್ಟಾಪಿನಲ್ಲಿ ಬಸ್ಸು ನಿಂತಾಗ ಉಡುಪಿ ಎನ್ನುವುದು ಬೇಡ  ಎಂದು ಉಲಿದರೆ ಸಾಕು ಅಷ್ಟೆಲ್ಲಾ ಯಾಕೆ ನಾಲ್ಕು ಜನ ಗುಂಪಿನಲ್ಲಿ ಮನೆಯ ಹೊರಗೆ ನಿಂತರೆ ಸಾಕು ಕಂಡಕ್ಟರ್ ಬಂದು ಬಾಜಾ ಬಜಂತ್ರಿ ಸಮೇತ ನಿಮ್ಮನ್ನು ಕರೆದೊಯ್ಯುವಷ್ಟು ಸ್ಪರ್ಧೆ-ಪೈಪೋಟಿ ಇದೆ. ಆದರೆ ಈ ಎಲ್ಲಾ ಪೈಪೋಟಿಯ ನಡುವೆಯೂ ಎಲ್ಲ ಬಸ್ಸುಗಳು ತುಂಬಿ ಚಲಿಸುವುದೇ ಒಂದು ಸೋಜಿಗದ ಸಂಗತಿ.!!

ಉಡುಪಿ ಎಕ್ಸಪ್ರೆಸ್...ಉಡುಪಿ ಎಕ್ಸಪ್ರೆಸ್....ಉಡುಪಿ ಎಕ್ಸಪ್ರೆಸ್ ....ಬನ್ನಿ ಅಮ್ಮ ....ಸೀಟು ಖಾಲಿ ಉಂಟು ...ಉಡುಪಿ ಎಕ್ಸಪ್ರೆಸ್ ಎಂದು ಯಮನ್ ರಾಗದಲ್ಲಿ ಪ್ರೀತಿಯಿಂದ ಕರೆಯುವಾಗ ನಿಮಗೆ ಕಾಳಾವರದಲ್ಲಿ ಕೆಲಸವಿದ್ದರೂ ಒಮ್ಮೆ ಉಡುಪಿಗೆ ಹೋಗುವ ಮನಸ್ಸಾಗುತ್ತದೆ.

ಕೋಟೇಶ್ವರ ಕುಂಭಾಶಿ ಆನೆಗುಡ್ಡೆ ತೆಕ್ಕಟ್ಟೆ ಕೋಟ ಸಾಲಿಗ್ರಾಮ ಸಾಸ್ತಾನ ಮಾಬುಕಳ ಹಂಗಾರಕಟ್ಟೆ ಬ್ರಹ್ಮಾವರ ಉಡುಪಿ ಲೈನ್ ಉಡುಪಿ ಲೈನ್ ......................

ವಿನಾಯಕಾ ಎಮ್ ಕೋಡೀ....ಕೋಡೀ....ಕೋಡೀ.............

ಕೋಣೀ ಬಸ್ರೂರು ಕಂಡ್ಲೂರು ಅಂಪಾರು ಹುಣ್ಸೆಮಕ್ಕಿ ಸಿದ್ದಾಪುರ ಶಂಕರನಾರಾಯಣ...............

ಇವು ನಮ್ಮ ಕಂಡಕ್ಟರುಗಳು ಒಂದೇ ಉಸಿರಿನಲ್ಲಿ ಕೂಗುವ ಡೈಲಾಗುಗಳು.

ಸರಕಾರೀ ಕೆಂಪು ಬಸ್ಸುಗಳು ದೂರದ ಉಡುಪಿ- ಮಂಗಳೂರು-ಧರ್ಮಸ್ಥಳ-ಸುಬ್ರಹ್ಮಣ್ಯ ಬಿಟ್ಟರೆ ಬೇರೆ ಹತ್ತಿರದ ಸ್ಥಳಗಳಿಗೆ ಇಲ್ಲ. ಇರುವ ಬಸ್ಸುಗಳು ಕೂಡ ಹೆಚ್ಚು ಕಡಿಮೆ ಖಾಲಿಯೇ ಚಲಿಸುತ್ತವೆ.ಯಾಕೆಂದರೆ ಒಂದೈದು ರುಪಾಯಿ ಹೆಚ್ಚು ಕೊಟ್ಟರೆ ಭೂಮಿಯ ಮೇಲೆ ಚಲಿಸುವ ವಿಮಾನದಂತಿರುವ ಖಾಸಗೀ ಬಸ್ಸುಗಳಿರುವಾಗ ಕೆಂಪು ಬಸ್ಸಿನಲ್ಲಿ ಯಾರು ಹೋಗುತ್ತಾರೆ ನೀವೇ ಹೇಳಿ.


ಆಹಾರ ಕ್ರಮ
==========
ದೋಸೆ ಬನ್ಸು ಪೂರಿ ಉಪ್ಪಿಟವಲಕ್ಕಿ ಇಡ್ಲಿ
ಎಲ್ಲ ಎದುರಿಗಿರಲು ನಾವು ಯಾವುದನ್ನು ಬಿಡ್ಲಿ ??
ಬೇಳೆಸಾರು ಕೋಳಿಸಾರು ಬಂಗ್ಡೆ ಮೀನಿನ್ ಗಶಿ
ಬಾಳೆ ಎಲೆಯ ಮೇಲೆ ಬಡಿಸೆ ತಿನ್ನಲೆಷ್ಟು ಖುಷಿ!!

ಪಾರಿಜಾತ ಐಸುಕ್ರೀಮು ಕಾವರ್ರಾಡಿ ಚಕ್ಲಿ
ತಿನ್ನುವಂತ ಯೋಗ ನಿಮಗೆ ಒಂದು ಸಾರಿ ಸಿಕ್ಲಿ
ರಾಗಿನೀರು ಎಳ್ಳುನೀರು ಗೋಲಿಸೋಡ ಬೊಂಡ (ಎಳನೀರು)
ಇವುಗಳೆದುರು ಪೆಪ್ಸಿ ಕೋಲಾ ಸ್ಪ್ರೈಟು ಎಲ್ಲ ದಂಡ


ಕುಂದಾಪುರದ ಆಹಾರ ಪದ್ಧತಿ ರುಚಿ ಹಾಗೂ ಪೌಷ್ಠಿಕತೆಯ ಸಮಾಗಮ ಎನ್ನಬಹುದು. ಬೆಳಿಗ್ಗೆ ಪಾವು-ಶೀರಾ-ಸಮೋಸ ಎಲ್ಲ ತಿಂದು ಹೊಟ್ಟೆಗೆ ಮೋಸ ಮಾಡಿಕೊಳ್ಳುವವರಲ್ಲ. ಇಡ್ಲಿ ದೋಸೆ ಉಪ್ಪಿಟ್ಟು ಅವಲಕ್ಕಿ ಯೊಂದಿಗೆ ಒಂದು ಚಾ ಕುಡಿದರೆ ಉಪಾಹಾರದ ಚಾಕರಿ ಮುಗಿದಂತೆ. ಮತ್ತೆ ಈ ಸಮೋಸ ವಡೆ ( ನಮ್ಮ ಭಾಷೆಯಲ್ಲಿ ಬಟಾಟಾಂಬೊಡೆ ) ಎಲ್ಲ ತಿಂಡಿ ಆದ ಮೇಲೆ ಟೈಮ್ ಪಾಸ್ ಗೆ ತಿನ್ನಲಡ್ಡಿಯಿಲ್ಲ. ಮುಂಬೈ ನಲ್ಲಿ ಸಿಗುವಂತಹ ಪಾವು ಊರಿನಲ್ಲಿ ನಾನೆಲ್ಲೂ ಕಂಡಿದ್ದಿಲ್ಲ. ಬ್ರೆಡ್ ಸಿಗುತ್ತದಾದರೂ ಅದು ಜ್ವರ ಬಂದಾಗ ಮಾತ್ರ ಅಥವ ಸ್ಯಾಂಡ್ವಿಚ್ ನಂತಹ ನಾಲಿಗೆ ರುಚಿ ತಿಂಡಿಗಳಿಗಷ್ಟೇ ಮೀಸಲು.ಚಪಾತಿ ವಾರಕ್ಕೋ ಹದಿನೈದು ದಿನಕ್ಕೊ ಒಮ್ಮೆ  ಮಾಡಿದರೆ ಆ ದಿನ ಏಕಾದಶಿಯೊ ಸಂಕಷ್ಟಹರ ಚತುರ್ಥಿಯೊ ಇರಬೇಕು. ಊಟಕ್ಕೆ ಅನ್ನ-ಸಾರು-ಪಲ್ಯ ಮಜ್ಜಿಗೆ ಅಷ್ಟೆ. ಸಸ್ಯಾಹಾರಿಗಳಿಗೆ ಅದು ಬೇಳೆ/ಕಾಳಿನ ಸಾರಾದರೆ( ತೊವ್ವೆ ) ಆದರೆ ಮಾಂಸಾಹಾರಿಗಳಿಗೆ ಮೀನು/ಕೋಳಿಯ ಸಾರು. ಮೀನು ಇಲ್ಲಿನ ಆಹಾರದಲ್ಲಿ ಅವಿಭಾಜ್ಯ ಅಂಗವಾಗಿದೆ. ಮಾಂಸಾಹಾರಿಗಳು ಅದನ್ನು ಮೀನೆಂದು ತಿಂದರೆ ಸಸ್ಯಾಹಾರಿಗಳು "ಸಮುದ್ರದ ಬಾಳೇಕಾಯಿ " ಎಂದು ತಿನ್ನುತ್ತಾರೆ. ಆದ್ದರಿಂದ ಇಲ್ಲಿ ನೀವು "ಬ್ರಾಹ್ಮಣರ ಮೀನು ಊಟದ ಹೋಟೇಲ್" ಕಂಡರೆ ಅಚ್ಚರಿಯೇನಿಲ್ಲ. :):)

Comments

aavottu horatavaru kundapurakke ivattu bandrya...

nice...:)
ಬಾಲು said…
chennaagide mahaswami nimma kundaapura nagara darshana.

allina ahara paddathi baggenu chennaagi barediddiri.
ಕಾವರಾಡಿ ನನ್ನತ್ತೆ ಮನೆ :-)
ಅದು ಚಕ್ಲಿಗೆ ಫೇಮಸ್ಸಾ?

Popular posts from this blog

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...