Skip to main content

ಇಟ್ಟಿದ್ದು ಬಟ್ಟಾದರೆ ವಾಟೆಂದರೇನು ??

ಈ ವಾಕ್ಯ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಕೇಳಿದ್ದು . ಎಲ್ಲೋ ಅಕ್ಕನಿಂದಲೋ ಅಣ್ಣನಿಂದಲೋ ಕೇಳಿ ಬಾಯಿಪಾಟ ಹೊಡೆದು ಕ್ಲಾಸಿಗೆ ಬಂದು ಸುಮಂತ್ ಇಟ್ಟಿದ್ದು ಬಟ್ಟಾದರೆ ವಾಟೆಂದರೇನು? ಎಂದು ಗೆಳೆಯರು ಕೇಳಿದಾಗ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದ ನಾನು ಅದೇನೆಂದು ತಿಳಿಯಲು ತಿಪ್ಪರಲಾಗ ಹಾಕಿದ್ದೆ . ಆಮೇಲೆ it=ಇದು but=ಆದರೆ what ಅಂದರೆ ಏನು? ಅಂತ ತಿಳಿದಾಗ ಅಯ್ಯೋ ಇಷ್ಟೇನಾ? ಎಂದು ನಿಟ್ಟುಸಿರಿಟ್ಟಿದ್ದೆ. ಹೀಗೆ ಯಾವುದೇ ವಿಷಯವೇ ಆಗಲೀ ತಿಳಿಯುವ ಮೊದಲು ಏನೋ ಪರ್ವತದಂತೆ ಭಾಸವಾದರೂ ತಿಳಿದಮೇಲೆ ಪೀಚು ಪೀಚೆಂದೆನಿಸುವುದು ಸಹಜವೇ . ಇತ್ತೀಚೆಗೆ ದಿನಪತ್ರಿಕೆಯಲ್ಲಿ ಶತಾವಧಾನಿ ಆರ್. ಗಣೇಶ್ ಅವರ ಚಮತ್ಕಾರ ಕವಿತ್ವ ಓದಿದಾಗ ಇಂಥವೇ ಹಲವು ಸಮಸ್ಯಾ ಪೂರ್ತಿ ಶ್ಲೋಕ /ವಾಕ್ಚಾತುರ್ಯಗಳು ನೆನಪಿಗೆ ಬಂದವು . ಅಲ್ಲದೆ ಭಾಷಾ ಜ್ಞಾನವಿಲ್ಲದೇ ಆಗುವ ಅಭಾಸಗಳು ಆ ಸಂಧರ್ಭದಲ್ಲಿ ಪೇಚಿಗೆ ಸಿಲುಕಿಸಿದರೂ ಆಮೇಲೆ ಹಾಸ್ಯಕ್ಕೆ ಒಳ್ಳೆಯ ವಿಷಯಗಳಾಗುತ್ತವೆ. ಅವುಗಳ ಸಂಗ್ರಹವೇ ಈ ಲೇಖನ .
1) ನಮ್ಮ ಊರಿನಲ್ಲಿ ಯಾರಾದರೂ " ಏನಾಯ್ತೋ dull ಇದ್ದೀಯ? " ಎಂದಾಗ ನಾವು ಹೇಳುವುದು
"ದಶರಥನ ಸುತನರಸಿಯು ನಾಸಿಕದೊಳು ಪೊಕ್ಕು ಪೀಡಿಸುತಿಹಳು" ....
ಏನಿಲ್ಲ ಶೀತಕ್ಕೆ ಕುಂದಾಪುರ ಕನ್ನಡದಲ್ಲಿ ರಾಗದಿಂದ ಸೀತು/ಸೀತ ಅನ್ನುತ್ತಾರೆ . ಅದೆ ... ದಶರಥ ಸುತ -- ರಾಮ --ಅರಸಿ --- ಸೀತಾ ಮೂಗಿನಲ್ಲಿ ಸೇರಿ ಪೀಡಿಸುತ್ತಿದ್ದಾಳೆ . ಮೂಗಿನಲ್ಲಿ ಜೋಗ ಅನ್ನುವುದೇ ಇದರ ಅರ್ಥ .
2) ಹತ್ತುತಲೇ ಕೆಂಪಾದವನ ಆರುತಲೆ ಕಪ್ಪಾದವನ ಸಖನ ಸುತನ ಒಡೆಯನ ವೈರಿಯ ತಮ್ಮನ ಆಲಂಗಿಸಿಕೊಂಡವರಾರು?
ಇದು ವಾಕ್ಚಾತುರ್ಯ ಬರೆಯುವಾಗ ತಪ್ಪಾಗಿ ಕಾಣಬಹುದು . ಎಲ್ಲರೂ ಹತ್ತುತಲೇ ಎಂದೊಡನೆ ರಾವಣ ಎಂದುಕೊಂಡು ಉಳಿದ ಯೋಚನೆಗಳಿಗೆ ಬೀಗ-ಬಿಜಾಗ್ರಿ ಹಾಕಿ ಕೂರುತ್ತಾರೆ . ಆದರೆ ಅದು ಹೊತ್ತುತಲೇ (ಹೇಳುವಾಗ ಹಾಗೆ ಹೇಳಬಹುದು ) ಕೆಂಪಾದವನ ಆರುತಲೆ ಕಪ್ಪಾದವನ ಅಂದರೆ ಹೊತ್ತಿದ ಕೂಡಲೇ ಕೆಂಪಾದವ ( ಬೆಂಕಿ ) ಆರಿದಕೂಡಲೇ ಕಪ್ಪಾದವನ ( ಇದ್ದಿಲು ) ಅಂದರೆ ಅಗ್ನಿ ಸಖನ (ಗಾಳಿ) ಸುತನ (ಹನುಮಂತ ) ಒಡೆಯನ (ರಾಮ ) ವೈರಿಯ (ರಾವಣ ) ತಮ್ಮನ (ಕುಂಭಕರ್ಣ ) ಆಲಂಗಿಸಿಕೊಂಡವರು (ನಿದ್ದೆ ) ಹೀಗೆ ನಿದ್ದೆ ಎಂಬುದು ಇದರ ಉತ್ತರ .

3) "ದನವನ್ನು ಕಡಿಕಡಿದು ಭಗವಂತನಿಗೊಪ್ಪಿಸಿದರು "ಹೌಹಾರದಿರಿ. ಇದರ ಉತ್ತರ ಅವಧಾನಿಗಳು ಹೀಗೆ ಕೊಟ್ಟರು .
ಭಕುತರೆಲ್ಲರು ಬಂದು
ಊರದೇವರ ಪೂಜೆಗೆಂದು ಚಂ
ದನವನ್ನು ಕಡಿಕಡಿದು ಭಗವಂತನಿಗೊಪ್ಪಿಸಿದರು !!!
ಅದು ಚಂದನವನ್ನು ಎಂದು ತಿಳಿದಾಗ ಇಷ್ಟೇನಾ? ಎಂದು ಅನ್ನಿಸಲಿಲ್ಲವೇ?

4) ವ್ಯಾಕರಣ ಪಾಠ ಮಾಡುವಾಗ ಒಂದು ಶಬ್ದ ಓದುವಾಗ ಅದನ್ನು ಇಡಿಯಾಗಿ ಓದಬೇಕು ಅಕ್ಷರ ಸೇರಿಸುತ್ತಾ ಮಗ್ಗಿ ಲೆಕ್ಕ ಹಾಕಿ ಓದಿದರೆ ಅರ್ಥ ಆಗುವುದಿಲ್ಲ ಅಂದು ವಿವರಿಸಿ ಈ ವಾಕ್ಯ ಹೇಳಿದರು
ಅಕಬರಸಾ
ಹೇಬರುತ
ರತರತದ
ಕೋಳಿಗಳನುಸಾ
ಕಿದ್ದರು .
(ಅಕಬರ ಸಾಹೇಬರು ತರತರದ ಕೋಳಿಗಳನ್ನು ಸಾಕಿದ್ದರು) ಅಂದಾಗ ನಮಗೆ ಅಕ್ಷರ ಕಲಿತು ಶಬ್ದ ಓದಬೇಕೆಂದು ಮನದಟ್ಟಾಯಿತು.

5) ಹಿಡಿಂಬೆಯು ಸೆರಗು ಬೀಸಿ ಮಾವನನ್ನು ಕರೆಯುತ್ತಿದ್ದಾಳೆ .
( ಇದು ಸಂಸ್ಕೃತ ಸಮಸ್ಯಾಪೂರ್ತಿ ಶ್ಲೋಕದ ಅನುವಾದ )ಮೇಲ್ನೋಟಕ್ಕೆ ಸ್ವಲ್ಪ ಅಶ್ಲೀಲ ಅನ್ನಿಸಬಹುದು ಆದರೆ ನಿಜಾರ್ಥ ಬೇರೆಯೇ ಇದೆ .ಬೇಸಗೆಯ ಸುಡು ಬಿಸಿಲಿನಲ್ಲಿ ಸೆಖೆಯನ್ನು ತಾಳಲಾಗದೆ ಹಿಡಿಂಬೆಯು ಸೆರಗು ಬೀಸಿಕೊಂಡು ಮಾವ ( ಹಿಡಿಂಬೆಯ ಗಂಡ ಭೀಮ , ಭೀಮ ವಾಯುಪುತ್ರ ) ಅಂದರೆ ಗಾಳಿಯನ್ನು ಕರೆಯುತ್ತಿದ್ದಾಳೆ . ಅಂದರೆ ಸೆರಗನ್ನು ಬೀಸಿ ಗಾಳಿ ಹಾಕಿಕೊಳ್ಳುತ್ತಿದ್ದಾಳೆ ಎಂದರ್ಥ .

ಇನ್ನು ಬನ್ನಿ ಅಪಾರ್ಥಕ್ಕೆ !!!!
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೌ ( ಭಗವದ್ಗೀತೆ ಅಧ್ಯಾಯ ೧೫ ) ( ಎಲ್ಲರ ಹೃದಯದಲ್ಲೂ ನಾನು ನೆಲೆಸಿರುತ್ತೇನೆ ). ಎಂದು ಸ್ವಾಮಿಗಳು ಹೇಳಿ ಇದರ ಅರ್ಥ ಏನೆಂದು ಕೇಳಿದಾಗಸ್ಟವ್ ಮೇಲೆ ಮಾಡಿದ ಚಾ ಎಲ್ಲಕ್ಕಿಂತ ಒಳ್ಳೆಯದು ಎಂದು ನಮ್ಮ ಗುಂಡ ಕೂಗಿದನು .

" ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ " ( ನಮಗೆ ಅನೇಕ ವರಗಳನ್ನು ನೀಡಲು ಏಕದಂತ ಗಣಪತಿಯನ್ನು ಸ್ತುತಿಸುತ್ತೇನೆ" ) ಇದನ್ನು ಅನೇಕ ದಂತ ಅಂದರೆ 32 ಹಲ್ಲು ಇರುವ ಮನುಷ್ಯರು ಒಂದೇ ಹಲ್ಲಿರುವ ನಿನ್ನನ್ನು ಯಾಕೆ ಪೂಜೆ ಮಾಡುತ್ತಾರೆ? ಎಂದು ಅರ್ಥೈಸಬಹುದು .

ಹೃದಯಂಲು ಪ್ರೇಮಂ ಪೆಟ್ಕೋ ( ಹೃದಯದಲ್ಲಿ ಪ್ರೀತಿ ಇಟ್ಟುಕೊಳ್ಳಿ ) ಎಂದ ತೆಲುಗು ಭಾಷಿಗನೊಂದಿಗೆ ಕನ್ನಡದವನು " ಪ್ರೇಮಳ ಬರಿ ಬಂದರೆ ಪೆಟ್ಟು ಹೊಡೆಯುತ್ತೇನೆ" ಎಂದು ಭಾವಿಸಿ ಬಾಕ್ಸಿಂಗ್ ಗೆ ಇಳಿದರೆ?

ಕರ್ನಾಟಕದ ಜನರಲ್ಲಿ " ವಂದೇ ಮಾತರಂ " ನ ಅರ್ಥ ಏನು ಎಂದು ಕೇಳಿದರೆ ವಂದೇ ಎಂಬ ಪದವನ್ನು ನಮ್ಮ ಸಂಖ್ಯಾಶಾಸ್ತ್ರ ಪ್ರವೀಣರು ಒಂದೇ ಎಂದು ಭಾವಿಸಿ ಹತ್ತರಲ್ಲಿ ಏಳು ಮಂದಿ "ಒಬ್ಬಳೇ ತಾಯಿ " ಎಂದು ಹೇಳುತ್ತಾರೆ . ಆದರೆ ಅದು ತಾಯಿಗೆ ನಮಸ್ಕರಿಸುತ್ತೇನೆ ಎಂದರ್ಥ .

ರಾತ್ರಿ ಪಾರ್ಟಿಗೆ ಹೋಗಿ ಬಂದು ತುಂಬಾ ತಡವಾಗಿ ಮಲಗಿ ಬೇಗ ಎದ್ದು ಆಫೀಸ್ ಗೆ ಹೋದ ಮಲಯಾಳಂ ಯುವತಿ ಆಫೀಸ್ನಲ್ಲಿ ಎಲ್ಲರೂ ಯಾಕಮ್ಮ ಸುಸ್ತಾಗಿದ್ದೀಯಾ? ಎಂದಾಗ ಆಕೆ " ರಾದ್ರಿ ನಿದ್ದೆ ಇಲ್ಲೆ...... ಮಲಗುವಾಗ ಒಂದು ಗಂಡ ಏಳುವಾಗ ಐದು ಗಂಡ ( ಮಲಗುವಾಗ ಒಂದು ಗಂಟೆ ಏಳುವಾಗ ಐದು ಗಂಟೆ ) ಎಂದರೆ ಎಲ್ಲರಿಗೂ ಹೃದಯಾಘಾತ ಆಗದೆ?

ಹುಳಿ, ತೊವ್ವೆ ,ಸಾಂಬಾರು ಇತ್ಯಾದಿಗಳಲ್ಲಿ ಒಳ್ಳೆಯ ಪದಾರ್ಥ ಯಾವುದು? ಎಂದು ಕೇಳಿದಾಗ ರೀ !! ಎಲ್ಲಕ್ಕಿಂತ ಸಾರು ಒಳ್ಳೆಯದು . ನಿಮಗೆ ಗೊತ್ತಿಲ್ವ ಮೊನ್ನೆ 15 ನೇ ತಾರೀಕು TV ಯಲ್ಲಿ ಸುಮಾರು ಜನ ಹೇಳ್ತಾ ಇದ್ರು " ಸಾರೇ ಜಹಾಸೆ ಅಚ್ಚಾ" ಎಂದು ಅರ್ಧ ಹಿಂದಿ ಕಲಿತ ನನ್ನ ಶಾಂತಿ ಫರ್ಮಾಯಿಸಿದಳು .

ಇನ್ನು ಊರಿನಲ್ಲಿ ನಡೆಯುವ ಭಜನೆಗಳಲ್ಲಿ ಹಾಡುವ ಲೋಕಲ್ ಭೀಮಸೇನರು ಭಜನೆಯ ಅರ್ಥವನ್ನು ಬುಡ ಸಹಿತ ಕಿತ್ತು ಹಾಕುತ್ತಾರೆ .ಉದಾಹರಣೆಗೆ ಆಲಾಪನೆಯ ಚಟದಿಂದ ಒಬ್ಬ
" ವೈ ssssssssssssssssssss ಕುಂಟ ಪತಿಯ ಕಂಡೆನೋ ಎಂದು ಹಾಡಿದರೆ ನಮ್ಮ ವೈಕುಂಠಪತಿಯು ವೈಕುಂಠ ಬಿಟ್ಟು ಓಡಿ ಹೋಗನೆ?

ಇನೊಬ್ಬ ಚಿಂತೆಯಾತಕೋ? ಬರಿಯ ಭ್ರಾಂತಿ ಯಾತಕೋ? ದಾಸರ ಪದವನ್ನು
ಚಿಂತೆಯಾ sssssssssssssss ತಕೋ ಎಂದು ಎಂದು ಹಾಡಿದರೆ ದಾಸರು ಸ್ವರ್ಗದಿಂದ ಎದ್ದು ಬಂದು ಒದೆಯದೇ ಇರುವರೇ?

ಅಥವಾ ಅನ್ಯಭಾಷೆಯವನು ಅರ್ಥ - ಉಚ್ಚಾರ ಗೊತ್ತಿಲ್ಲದೇ
ಚಿಂದಿಯಾದಗೋ ಬರಿಯ ಬ್ರಾಂದಿಯದಗೋ? ಎಂದು ಹಾಡಿದರೆ? ಎಷ್ಟು ಸಿಟ್ಟು ಬರುವುದಿಲ್ಲ?

ಹೀಗೆ ನಿತ್ಯಜೀವನದಲ್ಲಿ ಇಂಥಹ ಹಲವಾರು ಮೋಜು / ಮುಜುಗರದ ಪ್ರಸಂಗಗಳು ನಮ್ಮೊಂದಿಗೆ ನಡೆಯುತ್ತಿರುತ್ತವೆ . ನನ್ನ ಮನಸ್ಸಿಗೆ ಬಂದ / ಓದಿದ / ಕೇಳಿದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ .

ವಂದನೆಗಳೊಂದಿಗೆ
ವಿಕಟಕವಿ

Comments

ವಿಕಟಕ
ವಿಗಳೇ ತುಂಬಾದಿ
ವಸಆ...
ಯಿತು ನಿಮ್ಮಲೇ..
ಖನ ಓದಿ. ಆಗಾಗ
ಬರೀ
ತಾ
ಇರಿ ...

ತುಂಬಾಚೆನ್ನಾ
ಗಿಬರೀ
ತಿರಾ

ತುಂಬಾ ಚೆನ್ನಾಗಿದೆ... :) :) :)
ಆವಾಗ ಇವಾಗ ನಮ್ಮ ಕೆಡೆನು ಹಾಯಿರಿ ..(ಬನ್ನಿ ಸ್ವಾಗತ ಸುಸ್ವಾಗತ. ನನ್ನ ಕೊಂಡಿ(Link).
http://haalusakkare.blogspot.com/ )
ಹಾ.. ಹಾ... ಲೇ ಶಾನುಬಾಗ... ನಿನ್ನ ಲೇಖನ ಓದ್ಕೋತ ಆ ಗಂಗಾವತಿ ಬೀಚಿ (ಪ್ರಾಣೇಶ) ನೆನಪು ಬಂತು. ಮತ್ತ ಭಾರಿ ಬರ್ದಿ. ಚಹಾ, ಕಾಫೀ ಯಾಕೋ ನೀ ಬಿಡಂಗ ಕಾಣುದಿಲ್ಲಾ...ಇರ್ಲಿ, ಹೊಡದಾಡು ಮಛಾ..
ಬಾಲು said…
ಇಟ್ಟಿದ್ದು ಬಟ್ಟಾಗಿ ಒಂದು ಸುಂದರ ಲೇಖನ ಆಯಿತು. ವಿಕಟ ಕವಿಗಳೇ ಚೆನ್ನಾಗಿ ಬರೆದಿರುವಿರಿ.
ನಾನು ಕೂಡ ಶತಾವದಾನಿ ಗಣೇಶ್ ಅವರ ಲೇಖನ ಹಾಗು ಮಾತು ಕೇಳಿ ನಿಮ್ಮ ಹಾಗೆ ಅಂದುಕೊಂಡಿದ್ದು ಇದೆ.
ಚೆನ್ನಾಗಿದೆ ಲೇಖನ.
PARAANJAPE K.N. said…
ಶಾನುಭೋಗರೆ,
ನಿಮ್ಮ ಭೋರ್ಗರೆವ ಬ್ಲಾಗಿನ ಪರಿಚಯ ಮಿತ್ರರೊಬ್ಬರಿ೦ದ ಆಯ್ತು, ಬಹಳ ಚೆನ್ನಾಗಿದೆ
ನಿಮ್ಮನ್ನು ವಿಕಟಕವಿ ಎನ್ನಲಡ್ಡಿಯಿಲ್ಲ, ಚೆನ್ನಾಗಿದೆ, ಪುರುಸೊತ್ತು ಆದಾಗ ಎಲ್ಲ ಬರಹಗಳನ್ನು ಓದುವೆ.
ನನ್ನ ಬ್ಲಾಗ್ ಮನೆಗೂ ಬರುತ್ತಿರಿ.
Chandru said…
ಬಾಲುಗೆ ಮೊದಲ ಥ್ಯಾಂಕ್ಸ್ ನಿಮ್ಮ ಬ್ಲಾಗ್ ಪರಿಚಯಿಸಿದ್ದಕ್ಕೆ.. ತುಂಬಾ ದಿವಸವಾಗಿತ್ತು ಈ ಥರ ವಿಭಿನ್ನ ಲೇಖನ ಓದಿ.. ಕೆಲವೊಂದು ಪದಗಳನ್ನು ಸ್ವಲ್ಪ ನಿಧಾನವಾಗಿ ಅರ್ಥ ಮಾಡಿಕೊಂಡೆ.. ವಿಭಿನಾರ್ಥಗಳ ಒಂದು ವಿವೆಚಾನಯುಕ್ತ ಲೇಖನ..
ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು .
ತಮ್ಮ ಪ್ರೋತ್ಸಾಹಕ್ಕೆ ಚಿರಋಣಿ .
ಲೇಖನದಲ್ಲಿ ತಪ್ಪುಗಳಿದ್ದರೆ ಅಥವಾ ಇನ್ನೂ ಚೆನ್ನಾಗಿ ಬರೆಯಲು ಸಲಹೆಗಳಿದ್ದರೆ ದಯವಿಟ್ಟು ನನ್ನ ಕಿವಿ ತಿರುಚಿ ಹೇಳಿ !!!!

ನಿಮ್ಮವ
ವಿಕಟಕವಿ

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ