Skip to main content

ನನ್ನ ಸ್ಟೈಲು ನನ್ನದು

ನೂರಾರು ಮತವಿಹುದು ಲೋಕದುಗ್ರಾಣದಲಿ

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್


ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ.


ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರಿಸಬಹುದು. ಹಾಗೆಯೇ ಸಾಹಿತ್ಯಲೋಕದಲ್ಲಿ ಇರುವ ನೂರಾರು ಪ್ರಾಕಾರಗಳಲ್ಲಿ ನಮಗೆ ಬೇಕಾದ ಮಾರ್ಗವನ್ನು ನಾವು ಅನುಸರಿಸಬಹುದು. ಪ್ರಾಸ-ಛಂದಸ್ಸು-ಅನುಭವ-ಹಾಸ್ಯ-ಅನುವಾದ-ಕವಿತೆ-ಕವನ-ಹನಿ-ಮಿನಿ ಒಂದೇ ?? ಎರಡೆ ?? .ಆದರೆ ಯಾವುದೇ ಶೈಲಿಯಲ್ಲಿ ಬರೆದರೂ ಅದು ಮನದ ಮಾತನ್ನು ಅಕ್ಷರದ ಮೂಲಕ ಓದುಗನಿಗೆ ತಲಿಪಿಸಬೇಕು. ನನ್ನ ಹಲವು ಮಿತ್ರರು ನನಗೆ ಆಂಗ್ಲಭಾಷೆಯಲ್ಲಿ ಬರೆಯಲು ಹೇಳಿದ್ದಾರೆ. ಆದರೆ ನನಗೆ ಅದು ಅಸಾಧ್ಯ.ಯಾವುದೇ ಲೇಖನ ಬರೆಯುವಾಗ ಮನಸ್ಸಿನಲ್ಲಿ ಏನೊ ಒಂದು ವಿಷಯ ಬಂದರೆ ಅದು ಬರಹಕ್ಕೆ ಇಳಿಸುವಾಗ ಶಬ್ದಗಳಿಗೆ ತಡಕಾಡಬಾರದು ಅದು ಮುಕ್ತವಾಗಿ ಹರಿಯಬೇಕು ಆಗ ಮಾತ್ರ ಬರೆಯುವುದು ಬರಹಗಾರನಿಗೆ ಸಂತೋಷ ಕೊಡುತ್ತದೆ. ನನಗೆ ಆಂಗ್ಲಭಾಷೆಯಲ್ಲಿ ಅಷ್ಟು ಹಿಡಿತವಿಲ್ಲ. ಈಗ ನನಗೆ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿ ಇಲ್ಲ ಎಂದು ಬರೆಯಬೇಕೆಂದುಕೊಳ್ಳಿ. ಕನ್ನಡದಲ್ಲಿ ಬರೆದರೆ ಅದಕ್ಕೆ "ಅಮ್ಮಾ... ಎಂದರೆ ಆ ಶಬ್ದ ಗಂಟಲಿನಿಂದ ಹೊರಡುವುದಿಲ್ಲ ಹೃದಯದಿಂದ ಬರುತ್ತದೆ ಎಂದೋ ಪ್ರಪಂಚದಲ್ಲಿ ಸಾಗರಕ್ಕಿಂತ ಆಳವಾದುದು ಪರ್ವತಕ್ಕಿಂತ ದೊಡ್ಡದು ಯಾವುದು ಎಂದರೆ ಅದು ತಾಯಿಯ ಪ್ರೀತಿ ಎಂದು ಕೊಂಬು ಬಾಲ ಸೇರಿಸಿ ಬರೆಯಬಹುದು. ಅದೇ ಆಂಗ್ಲ ಭಾಷೆಯಲ್ಲಾದರೆ "There is no realtive above mother and nothing tasteir than salt" ಎಂದು ಬರೆದರೆ ಓದುಗರು ಪಾದುಕೆಗಳನ್ನು ನಾ ಮುಂದು ತಾ ಮುಂದು ಎಂದೆನುತ ಎಸೆಯರೇ?? ಅದಕ್ಕೆ ಭಾಷೆಯ ಆಯ್ಕೆ ಮಾಡುವಾಗ ಯೋಚಿಸಬೇಕು. ಮತ್ತು ಶೈಲಿಯನ್ನು ಆರಿಸುವಾಗಲೂ ಯಾವುದರ ಬಗ್ಗೆ ಬರೆಯುತ್ತೇವೆ ಮತ್ತು ಆ ಶೈಲಿಯಲ್ಲಿ ನಾವು ಎಷ್ಟು ಹಿಡಿತ ಹೊಂದಿದ್ದೇವೆ ಎಂದು ಯೋಚಿಸಬೇಕಾಗುತ್ತದೆ. ಭಾರತ-ಪಾಕ್ ಗಡಿ ಬಿಕ್ಕಟ್ಟು ಬರೆಯಲು ಹನಿಗವನ ಬಳಸಿದರೆ ?? ಅಥವಾ ಪ್ರೇಮಪತ್ರವನ್ನು ಶಾರ್ದೂಲ ಛಂದಸ್ಸಿನಲ್ಲಿ ಬರೆದು ಪ್ರೇಯಸಿಗೆ ಕೊಟ್ಟರೆ?? ಅವಳದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನಿಮ್ಮ ತಲೆಕೂದಲು ನೆರೆಯದೆ ?? ಅಂದರೆ ಆ ಶೈಲಿಯು ಬೇಕಾದ ಭಾವನೆಗಳನ್ನು ತರುವುದಿಲ್ಲ.


ಇನ್ನು ಒಂದು ಕಾಲೇಜಿಗೆ ಹೋಗಿ ಬಂದ ಅನುಭವ ಬರೆಯಬೇಕಾದರೆ ಪ್ರಾಸದ ಹುಚ್ಚಿನಲ್ಲಿ

----------------------------------------
ಕ್ಲಾಸಿನಲಿ ಯಾರು ಕೇಳುವರು ಪಾಠ??

ಕ್ಯಾಂಟೀನಿನಲಿ ಮಾಡುವೆವು ಊಟ

ದಿನವಿಡೀ ಹುಡುಗಿಯರದ್ದೇ ನೋಟ

ಕೊಡುತ್ತೇವೆ ಅವರಿಗೆ ಕಾಟ

-------------------------------------------

ಎಂದು ಏನೋ ಕಾಟಾಚಾರಕ್ಕೆ ಬರೆದಂತೆ ಬರೆದರೆ ಎಷ್ಟು ಬಾಲಿಶ ಎಂದೆನಿಸುತ್ತದೆ. ಅಲ್ಲದೆ ಇಂಥ ಲೇಖನ/ಕವನ ಮುಂದೆ ಓದಲು ಮನಸ್ಸಾಗುತ್ತದೆಯೇ ನೀವೇ ಹೇಳಿ ? ಆದರೆ ಇದೆ ವಿಷಯವನ್ನು

----------------------------------------------------------
ನಿಜವ ಹೇಳಲೆ ನನ್ನ ಗೆಳೆಯರೆ

ಮೋಜು ಮಾಡುವ ಪ್ರಾಯದಲಿ ಕಾ

ಲೇಜು ತರಗತಿ-ಪಾಠ-ಪ್ರವಚನ ಯಾರು ಕೇಳುವರು ??

ಭೋಜನದ ಸಮಯದಲಿ ನೋಡಿದ

ರೋಜ ಹೂವಿನ ಹಾಗಿರುವ ಟೀ

ನೇಜು ಬಾಲೆಯರಂದವನು ನಾ ಹೇಗೆ ಬಣ್ಣಿಸಲಿ ??

-------------------------------------------------------
ಎಂದು ಷಟ್ಪದಿಯಲ್ಲಿ ಬರೆದರೆ ಏನೋ ಒಂದು ಕಚಗುಳಿ ಇಟ್ಟಂತಾಗುವುದಿಲ್ಲವೆ ?? ಇದು ಲೇಖನವನ್ನು ಮುಂದೆ ಓದಿಸಿಕೊಂಡು ಹೋಗುತ್ತದೆ.


ನಾನು ದ್ವಿತೀಯ ಪಿಯುಸಿಯಲ್ಲಿದ್ದಾಗ ಯಾವುದೊ ಕನ್ನಡ ಮ್ಯಾಗಜೀನ್ ನಲ್ಲಿ ಛಂದಸ್ಸಿನ ಬಗ್ಗೆ ಒಂದು ಸೊಗಸಾದ ಲೇಖನ ಓದಿದ್ದೆ. ಆ ಸಾಲುಗಳು. (ಲೇಖಕರಿಗೆ ಅನಂತ ಧನ್ಯವಾದಗಳು ).

---------------------------------------------------------------
ಸಿಟಿಯ ಬಸ್ಸಲಿ ಮಾಡಿ ಪಯಣವ

ಬೂಟುಗಾಲ ಮಹಾನುಭಾವನು

ಮೆಟ್ಟಿ ಕಾಲನು ಕ್ಷಮಿಸಿರೆಂದನು ನೋಡಲಿಲ್ಲೆನುತ

ಕೆಟ್ಟೆನೈ ನೊಡದೆಲೆ ಈತನು

ಇಷ್ಟು ತುಳಿದನು ಇನ್ನು ನೋಡಿದ

ರೆಷ್ಟನರ್ಥವೊ ಎನುತ ಕಾಲನು ಹಿಂದಕೆಳಕೊಂಡೆ (ಭಾಮಿನೀ ಷಟ್ಪದಿ)

---------------------------------------------------------
ಸೌತೆಕಾಯೇ ಬೇಕಂತಾಳೇ ಎನ್ಮಾಡ್ಲೀ ನನ್ಮಗ್ಳೂ

ಸೀಜನ್ನಲ್ಲಾ ಸಿಕ್ಕೋಲ್ಲಾಮ್ಮಾ ಅಂದ್ರೂನು ಬಿಡ್ಲಾರ್ಳೂ ( ಸರ್ವ ಗುರೂ).

----------------------------------------------------------


ಇದರ ನಂತರ ನಾನು ನನ್ನ ಮೊದಲ ಎರಡು ಕವನಗಳನ್ನು ಭಾಮಿನೀ ಷಟ್ಪದಿಯಲ್ಲಿ ಬರೆದೆ. ( ನಂಬಿ ಕೆಟ್ಟವರು ಮತ್ತು ನನ್ನ ಕಾಲೇಜಿನ ಬಗ್ಗೆ ). ಅದು ಸಂಪಾದಕ ಮಂಡಳಿಯ ಮೆಚ್ಚುಗೆ ಪಡೆದು ಮೊದಲ ಪುಟದಲ್ಲೇ ಅಚ್ಚಾಯಿತು . ಅದರಲ್ಲಿ "ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು" ಎಂದು ಒಂದು ಸಾಲು ಬರೆದಿದ್ದೆ. ಹಾಸ್ಟೇಲಿನ ಗೆಳೆಯರ ಮುಂದೆ ಓದಿ ಹೇಳಿದರೆ ಏನೋ ಋಗ್ವೇದದ ಒಂದು ಪಾದವನ್ನು ಓದಿದಂತೆ ಅವರ ಮುಖಚರ್ಯೆ. ಪ್ರಶ್ನಾರ್ಥಕ ,ಆಶ್ಚರ್ಯ ಸೂಚಕ ಚಿಹ್ನೆ ಗಳೊಳಗೊಂಡು ಎಲ್ಲಾ special charecter ಗಳು ಅವರ ಮುಖದ ಮೇಲಿತ್ತು. ನನಗೆ ಪಿಚ್ಚೆನಿಸಿತು. ಷಟ್ಪದಿಯ ಆರೂ ಪಾದಗಳನ್ನು ಮುರಿದು ಒಳಗಡೆ ಇಟ್ಟೆ.


ಚುಟುಕ :-ಹಾಸ್ಯ ರಸಕ್ಕೆ ಹೇಳಿ ಮಾಡಿಸಿದ ಶೈಲಿ. ಪ್ರಾಸವೇ ಮೂಲಮಂತ್ರ. ಓದುಗರನ್ನು ರಂಜಿಸುವುದರಲ್ಲಿ ಎತ್ತಿದ ಕೈ. ಮನಸ್ಸಿನ creative thinking ನ್ನು ಒರೆಗಲ್ಲಿಗೆ ಹಚ್ಚಬೇಕು. ಚುಟುಕ ಎಂದೊಡನೆ ನೆನಪಿಗೆ ಬರುವುದು ಚುಟುಕುಬ್ರಹ್ಮ ದಿನಕರ ದೇಸಾಯಿ ಮತ್ತು ಡುಂಡಿರಾಜ್ ಅವರು.ಅವರ ಒಂದೊಂದು ಹನಿಗಳು ದಿನವಿಡೀ ನಗಲಿಕ್ಕೆ ಸಾಕಾಗುತ್ತವೆ. ನನಗೆ ಹಿಡಿಸಿದ ಚುಟುಕಗಳು (ಲೇಖಕರ ಹೆಸರು ತಿಳಿದಿಲ್ಲ )


ಹುಡುಗಿ - ಪ್ರಿಯತಮಾ ಏಕೆ ನಿನ್ನ ಮುಖ ಹೀಗೆ ಕಪ್ಪಿಟ್ಟಿದೆ ??

ಹುಡುಗ-ಏನು ಮಾಡಲಿ ಪ್ರಿಯೆ ಎದುರಿಗೆ ನೀ ಮಾಡಿದ ಉಪ್ಪಿಟ್ಟಿದೆ!!!!

ಹುಡುಗಿ ನನ್ನ ಶಾಂತಿ ಬ್ರಾಂಡ್ ನವಳು ಎಂದು ತಿಳಿಯುತ್ತದೆ.

------------------------------------------------------------

ಹೊನ್ನು-ಹಣ ಸಾಕಷ್ಟು ಕೊಟ್ಟರೆ ಸೈ

ಹುಡುಗಿ ಹೇಗಿದ್ದರೂ ಹುಡುಗನಿಗೆ ಅವಳೇ ಐಶ್ವರ್ಯ ರೈ

-------------------------------------------------

ಏನು ?? ರಸ್ತೆಗಳಲ್ಲೆಲ್ಲಾ ಹೊಂಡ ಗುಂಡಿಯಾ ??

ಒಹೊ!! ಬಹುಷಃ ಅದು ಇಂಡಿಯಾ!!!!

-------------------------------------
ಮಾತು ಮಾತಿಗೆ ಲೈಟು ಟೇಬಲ್ಲು ರೂಮು

ಪೆನ್ನು ಪೇಪರು ಬುಕ್ಕು ಕರ್ಚೀಪು ಗೇಮು

ಮುಂದುವರಿದರೆ ಇಂತಹ ಶಬ್ದಗಳ ಧಾಳಿ

ಶೀಘ್ರದಲಿ ತೆರೆಯುವುದು ಕನ್ನಡ ದಿವಾಳಿ (ದೇಸಾಯಿ)
-----------------------------------------------


ಇಬ್ಬರು ಯುವಪ್ರೇಮಿಗಳು ಪುರೋಹಿತರ ಬಳಿ ಹೋಗಿ ಜಾತಕ ಕೊಟ್ಟರಂತೆ. ನೋಡಿದರೆ ಮಾನವ-ರಾಕ್ಷಸ ಗಣ ( ಮದುವೆ ಮಾಡಲೇ ಬಾರದು ಅಂಥ ಸ್ಥಿತಿ). ಹೇಳಿದರೆ ಈ ಪ್ರೇಮಿಗಳು ಕೇಳುತ್ತಿಲ್ಲ. ಎನಾದ್ರೂ ಮಾಡಿ ಪುರೊಹಿತರೇ ಎಂದರಂತೆ. ಫುರೊಹಿತರು ಕೇಳಿದರು.

ಹುಡುಗನ ಹೆಸರೇನು ??---- ರಾಮ

ಹುಡುಗಿಯ ಹೆಸರೇನು ??-- ಪ್ರೇಮ

ಸರಿಯಪ್ಪ ರಾಮ-ಪ್ರೇಮ ಪ್ರಾಸ ಸರಿ ಹೋಗುತ್ತೆ ಮದ್ವೆ ಮಾಡ್ಕೊಳ್ಳಿ ಎಂದರಂತೆ.

ಆದರೆ ಮೊದಲೇ ಹೇಳಿದಂತೆ ಪ್ರಾಸವನ್ನು ಸರಿಯಾಗಿ ಬಳಸಬೇಕು.ಇಲ್ಲದ್ದಿದ್ದರೆ ನಮ್ಮ ಗಂಗಾವತಿ ಪ್ರಾಣೇಶ್ ಅವರು ಹೇಳಿದಂತೆ ನಮ್ಮ ನವ್ಯಕವಿಯ "ತ್ರಿಕಾಲ ಸತ್ಯ" ದಂತಾಗುತ್ತದೆ. ಅವನು ಬರೆದನಂತೆ

-------------------------------------
ಆಕಾಶದಾಗೈತೆ ಚಂದ್ರಬಿಂಬ

ಎದ್ರಿನಾಗೈತೆ ಲೈಟಿನ್ ಕಂಬ

ಅವನು ಹೊಗ್ತಾ ಇದ್ದಾನೆ ಹಿಡ್ಕೊಂಡು ಸಂಡಾಸ್ ಚೊಂಬ!!!

----------------------------------------------------

ಹೀಗೆ ಪ್ರಾಸದ ಅಪಪ್ರಯೋಗ ಕಿರಿಕಿರಿ ಉಂಟುಮಾಡುತ್ತದೆ ಹಾಗೂ ಯಾವುದೇ ಒಂದು ಸಂದೇಶವನ್ನು ಕೊಡದೆ ವ್ಯರ್ಥವಾಗುತ್ತದೆ.


ಅನುವಾದ:-

ಅನುವಾದ ನನಗೆ ಸ್ವಲ್ಪ ಕಷ್ಟ ಎಂದು ಅನಿಸುತ್ತದೆ. ಇದರಲ್ಲಿ ಮೂಲ ಲೇಖಕನ ಭಾವನೆಗಳನ್ನು ಓದುಗರಿಗೆ ತಲುಪಿಸುವ ಕೆಲಸ ಅನುವಾದಕರದ್ದು. ಪರಕಾಯ ಪ್ರವೇಶ ಮಾಡಿದಂತೆ ಮೂಲ ಲೇಖಕನೊಳಗೆ ಪ್ರವೇಶಿಸಿ ಬರೆಯಬೇಕು.ನಾನು ಓದಿದ ಅನುವಾದಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ತುಂಬಾ ಹಿಡಿಸಿತು. ಕೆನೆತ್ ಆಂಡರ್ಸನ್ ಆಂಗ್ಲಭಾಷೆಯಲ್ಲಿ ಬರೆದ ಅವರ ಹುಲಿ ಬೇಟೆಯ ಅನುಭವಗಳನ್ನು ಮನೋಹರವಾಗಿ ಅನುವಾದಿಸಿದ್ದಾರೆ.ಓದಲು ಶುರು ಮಾಡಿದರೆ ಮುಗಿಯುವ ವರೆಗೆ ಪುಸ್ತಕ ಕೆಳಗಿಡಲಾಗದಂತಹ ಅನಿವಾರ್ಯತೆ ಬರುತ್ತದೆ.


ಆನುಭವ ಕಥನ:-ಅನುಭವ ಕಥನ ಹೇಗಿರಬೇಕೆಂದರೆ ಓದಿ ಮುಗಿಸಿದ ನಂತರ ಓದುಗನಿಗೆ ಅವನು ಸ್ವತಃ ಅನುಭವಿಸಿದಂತೆ ಅನ್ನಿಸಬೇಕು. ಓದುಗನನ್ನು ಕಲ್ಪನಾಲೋಕಕ್ಕೆ ಸೆಳೆದೊಯ್ಯಬೇಕು. ಇಡ್ಲಿ ತಿಂದ ಮೇಲೆ ಇಡ್ಲಿ ಚೆನ್ನಾಗಿತ್ತು ಅಂದರೆ ಅದರಲ್ಲೇನಿದೆ ? ಅನಿಸುತ್ತದೆ. ಅದೇ ಆಗ ತಾನೇ ಒಲೆಯಿಂದ ಕೆಳಗಿಳಿಸಿದ ಇಡ್ಲಿ ಅಟ್ಟದಿಂದ ಹಬೆಯಾಡುತ್ತಿದ್ದ ಇಡ್ಲಿ ನನ್ನ ಪ್ಲೇಟನ್ನು ಆಕ್ರಮಿಸಿದಾಗ ಬೆಳಿಗ್ಗಿನಿಂದ ಏನೂ ತಿನ್ನದ ನನ್ನ ಹೊಟ್ಟೆ ಇನ್ನೂ ಚುರುಕಾಯಿತು. ಬಿಸಿ ಬಿಸಿ ಇಡ್ಲಿಯ ಮೇಲೆ ಇಟ್ಟ ಬೆಣ್ಣೆ ಮುದ್ದೆ ಹಾಗೆ ಕರಗಿ ಕೆಳ ಜಾರುತ್ತಿರಲು ಇಂಗು-ತೆಂಗು-ಮೆಣಸನ್ನು ಹದವಾಗಿ ಅರೆದು ಕರಿಬೇವಿನ ಒಗ್ಗರಣೆ ಹಾಕಿ ತಯಾರಿಸಿದ ಕಾಯಿಚಟ್ನಿಯೊಳಗೆ ಇಡ್ಲಿಯನ್ನು ಅದ್ದಿ ಅದನ್ನು ನಾಲಗೆ ಮೇಲೆ ಇಟ್ಟಾಗ ನನ್ನ ಅಪ್ಪಣೆಗೆ ಕಾಯದೆ ಇಡ್ಲಿಯು ಹಾಗೆ ಕರಗಿ ಹೊಟ್ಟೆ ಸೇರಿತು. ಹೇಗೆ ಇಡ್ಲಿ ತಿಂದಂತೆ ಆಗಲಿಲ್ಲವೆ ?? ನೀವು ಇದನ್ನು ಒಮ್ಮೆ ಓದಿದ್ದರೆ ಇಪ್ಪತೈದು ರುಪಾಯಿ ಎರಡು ಬಾರಿ ಓದಿದರೆ ಐವತ್ತು ರೂಪಾಯಿ ನನ್ಗೆ ಕೊಡಬೇಕು.


ಹಾಸ್ಯ ಲೇಖನ-ಹಾಸ್ಯದ ವಿಚಾರದಲ್ಲಿ ನಾನು ಕಂಡುಕೊಂಡ ವಿಷಯ ಏನೆಂದರೆ ಮಾಂಸಾಹಾರಿ ಹಾಸ್ಯ (Non Veg Jokes) ಮಾಡಿ ನಗಿಸುವುದು ಸುಲಭ. ಸಮಾನಮನಸ್ಕ-ಸಮಾನಪ್ರಾಯದ ಜನರ ಗುಂಪು ಇದ್ದಾಗ ಇದು ನಗಿಸಬಹುದು. ಆದರೆ ಎಲ್ಲಾ ಬಗೆಯ ಜನರು ಇರುವಾಗ ಇದು ಸ್ವಲ್ಪ ಕಸಿವಿಸಿ-ಇರಿಸುಮುರಿಸಿನ ವಾತಾವರಣ ಸೃಷ್ಠಿಸುತ್ತದೆ. ಅಲ್ಲಿ ಎಲ್ಲರೂ ಒಬ್ಬರಿಗೊಬ್ಬರು ನೋಡಿಕೊಂಡು ನಗುವುದೊ? ಬೇಡವೋ?? ಎಂದು ಆಲೋಚಿಸುವಂತಾಗುತ್ತದೆ. ಅಲ್ಲದೇ ಇಂಥ ಹಾಸ್ಯಗಳ ಜೀವಿತಾವಧಿ ಅಲ್ಪ. ಆದರೆ ಸರಿಯಾದ ಸಂದರ್ಭದಲ್ಲಿ ಹೇಳಿದ ವಿವೇಚನಾಯುಕ್ತ ಹಾಸ್ಯ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಅಲ್ಲದೇ ಮುಂದೆ ಜನರು ಅದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರುತ್ತಾರೆ. ಇನ್ನು ಲೇಖನಕ್ಕೆ ಬಂದರೆ ಹಾಸ್ಯದಲ್ಲಿ ಲೇವಡಿ,ವಿಡಂಬನೆ,ಅನುಕರಣೆ ಹಾಗೂ ತಟಸ್ಥ ಹಾಸ್ಯ ಎಂದು ವಿಂಗಡಿಸಬಹುದು. ಕೆಲವು ಭಾವುಕ ಜೀವಿಗಳಿಗೆ ಲೇವಡಿ ನೊವುಂಟುಮಾಡುತ್ತದೆ. ಹಾಸ್ಯ ಮಾಡುವವನು ಎದುರಿಗಿರುವವನ ಮನೋಭಾವವನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ಹಾಸ್ಯ ಮಾಡದಿದ್ದಲ್ಲಿ ಹಾಸ್ಯವು ಅನಗತ್ಯ ಕಲಹಕ್ಕೆ ಕಾರಣವಾಗಬಹುದು. ಅಭಿನಯ/ಲೇಖನದ ಮೂಲಕ ಹಾಸ್ಯ ತಲುಪಿಸಲು ಸಾಧ್ಯ. ಅಭಿನಯದ ಮುಖಾಂತರ ಹಾಸ್ಯ ಮಾಡುವುದು ಸುಲಭ. ಈಗ ನೋಡಿ ಒಬ್ಬ ಅಂಗಡಿಯವನಿಗೆ ಫೊನ್ ಮಾಡಿ ನಿಮ್ಮ ಬಳಿ ಇಷ್ಟು ದೊಡ್ಡ ತೆಂಗಿನಕಾಯಿ ಇದೆಯಾ ?? ಎಂದು ಕೇಳುತ್ತಾನೆ. ಇದನ್ನು ಅಭಿನಯದಲ್ಲಿ ತೋರಿಸುವಾಗ ಅವನು ಇಷ್ಟು ದೊಡ್ಡ ಎಂಬುದನ್ನು ಕೈಗಲಲ್ಲಿ ತೋರಿಸಬಹುದು. ಆದರೆ ಲೇಖನದಲ್ಲಿ ಬರೆಯಲು ಹೇಳಿದರೆ ?? ಒಂದು ಹಾಸ್ಯ ಯಶಸ್ವಿಯಾಗಬೇಕಾದರೆ ಲೇಖಕನೊಂದಿಗೆ ಓದುಗನ ಕಲ್ಪನೆಯೂ ಅಗತ್ಯ.ಇನ್ನು ಕೆಲವು "ನಗದು" ಎಂದು ಬೋರ್ಡ್ ಹಾಕಿಕೊಂಡವರಂತೆ ಏನೇ ಮಾಡಿದರೂ ನಗದ ಡಿಫೆಕ್ಟಿವ್ ಮಾಡೆಲ್ ಗಳನ್ನು ನಗಿಸುವ ಪ್ರಯತ್ನ ವ್ಯರ್ಥ. ಲೇಖನದಲ್ಲಿ ಬರೆದ ಹಾಸ್ಯ ಓದುಗನಿಗೆ ಅರ್ಥವಾಗದಿದ್ದಲ್ಲಿ ಲೇಖಕನಿಗೆ ಆತ್ಮಹತ್ಯೆಯೊಂದೇ ಮಾರ್ಗ. ಸ್ವತಃ ಬರೆದ ಹಾಸ್ಯ ಲೇಖನದ ಹಾಸ್ಯವನ್ನು ಅದು ಏನೆಂದು ವಿವರಿಸುವ ದುರ್ಗತಿ ನನ್ನ ವೈರಿಗೂ ಬರದಿರಲೆಂದು ಆಶಿಸುತ್ತೇನೆ. ನಾನು ಬರೆದ ಹಾಸ್ಯಲೇಖನ ಓದುವಾಗ ಮುಖದಲ್ಲಿ ಕೊಂಚವೂ ನಗುವಿಲ್ಲದೆ ಷೇಕ್ಸ್ ಪಿಯರ್ ನ ದುರಂತ ನಾಟಕದಂತೆ ಭಾವನೆ ಕೊಟ್ಟರೆ ನನಗೆ ರಾತ್ರಿ ನಿದ್ದೆ ಹೇಗೆ ಬರುತ್ತದೆ ನೀವೇ ಹೇಳಿ.


ಈಗ ನಾನು ಬರೆದ ಈ ಲೇಖನ ಯಾವ ಪ್ರಕಾರದೆಂದು ನನಗೂ ತಿಳಿದಿಲ್ಲ. ಆದ್ರೆ ಇದರಲ್ಲಿ ನಗಲು ಲಾಯಕ್ಕಾದ ಸ್ವಲ್ಪ ಅಂಶ ಇದೆ ಎಂದು ಭಾವಿಸುತ್ತೇನೆ. ಏನು ?? ಹಾಸ್ಯ ಅರ್ಥ ಆಯಿತಾ ಅಥವಾ ಲೇಖಕನಾದ ನಾನು ಇತಿಶ್ರೀ ಹಾಡಲೊ??? ಲೇಖನಕ್ಕೆ ಸ್ವಾಮಿ!!

==========================ವಿಕಟಕವಿ===================


Comments

ಬಾಲು said…
ನಗಲಿಕ್ಕೆ ನಿಮ್ಮ ಲೇಖನದಲ್ಲಿ ಹಲವಾರು ಅಂಶ ಇದೆ. :) :)

ನಾನು ಸ್ವಲ್ಪ ದಿನಗಳ ಹಿಂದೆ ಒಂದು ಅನುವಾದ ದ ಕಾದಂಬರಿ ತಂದೆ. ಅದು ಇಂಗ್ಲಿಷ್ ನಲ್ಲಿ ಅತ್ಯಂತ ಯಶಸ್ವಿ ಕಾದಂಬರಿ. (Gone with the Wind) ಕನ್ನಡ ಅನುವಾದ ಓದಲು ಶುರು ಮಾಡಿದ ಮೇಲೆ ನಂಗೆ ಅನ್ನಿಸಿದ್ದು ಅಂದರೆ, ಅದರ ಅನುವಾದಕರಿಗೆ "ಪಾದುಕಾ ಪೂಜೆ" ಮಾಡಬೇಕು ಅಂತ. (ಪಾದುಕೆ ಎಸೆಯೋದರ ಮೂಲಕ) :)
ತುಂಬಾ ಚೆನ್ನಾಗಿದೆ :):)
ನಿಮ್ಮ ಎಲ್ಲ ಲೇಖನಗಳನ್ನು ನಾನು ಓದಿದ್ದೇನೆ. ಹಾಸ್ಯ ಹೇಗೆ ಸೃಷ್ಟಿ ಯಾಗುತ್ತೆ ಎಂದು ನಿಮ್ಮ ಲೇಖನದಿಂದಲೇ ನಾನು ತಿಳಿದಿದ್ದು.
ನೀವು ಒಬ್ಬ ಮಹಾನ್ ಬರಹಗಾರ ಆಗುವದರಲ್ಲಿ ನಿಸಂಶಯ.... ನೀವು ನಿಜವಾಗಿಯೂ ವಿಕಟಕವಿ ತೆನಾಲಿರಾಮನ ಪರಾವತಾರವೇ ...
ಚಾಯ ಗರಮ !!! - ಸೂಪರ್
ನಾನು ಮತ್ತು ನನ್ನ ಸಂಸಾರ - ಕ್ಷಮಿಸಿ ನೀವು ಮತ್ತೆ ನಿಮ್ಮ ಸಂಸಾರ ಅತ್ಯಂತ sum + ಸಾರ ದಿಂದ ಕೂಡಿದೆ.:)
ಕರ್ಣಕುಂಡಲ , ಸೌಂದರ್ಯೋಪಾಸನೆ ಎಲ್ಲವು ಸೂಪರ್... ಹೀಗೆ ಬರೆಯುತ್ತ ಇರಿ. :):) ಹಾಸ್ಯದ ಹೊನಲನ್ನು ಹರಿಸುತ್ತೀರಿ ಎಂದು ಆಶಿಸುತ್ತ ..
ವಂದನೆಗಳೊಂದಿಗೆ...
ತುಂಬಾ ಧನ್ಯವಾದಗಳು ಗೋಪಾಲ್ ,ಬಾಲು ಅವರೇ
ನಿಮ್ಮ ಪ್ರೋತ್ಸಾಹ ಸದಾ ಹೀಗೆ ನನ್ನೊಂದಿಗಿರಲಿ
Anonymous said…
ಚೆನ್ನಾಗಿದೆ ಸುಮಂತ್.
ಮೊನ್ನೆ ವಿ.ಕ.ದಲ್ಲಿ ಒಂದೆರಡು ಸಾಲಿನ ಕತೆ ಓದಿ ಖುಷಿಯಾಯ್ತು :-) ನಮ್ಮ ಕಾಲೇಜ್ ಹುಡುಗ ಬರೆದದ್ದು ಅಂತ ಎಲ್ಲರಿಗೂ ಓದ್ಲಿಕ್ಕೆ ಹೇಳಿದೀನಿ!
ಹೀಗೆ ಬರೀತಾ ಇರು ಮಾರಾಯ.
ತುಂಬಾ ಧನ್ಯವಾದಗಳು ಜ್ಯೋತಿ.

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ