Skip to main content

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ??
ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ ||
ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ
ಅಪಾರ್ಥವಾದರೆ ಗತಿಯು ಕೋದಂಡರಾಮ ||

ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .

ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳುತ್ತಿದ್ದೀರಾ ??... ಆಗಿದ್ದಿಷ್ಟೆ .....ಓದಿ ಮತ್ತು ಹೀಗಾದರೆ ನಾನೇನು ಮಾಡ್ಲಿ ನೀವೇ ಹೇಳಿ ??

ಮೊದಲನೆಯವಳು ಐಶ್ವರ್ಯ . ನನ್ನ ಪಂಚಪ್ರಾಣದಲ್ಲಿ ಆರನೇಯವಳಾಗಿದ್ದಳು. ಎರಡು ಜೀವ ಒಂದು ದೇಹ .. ಕ್ಷಮಿಸಿ .. ಎರಡು ದೇಹ ಒಂದು ಜೀವ ಅನ್ನೋ ಥರ ಇದ್ವಿ . ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೆ .ಒಂದು ಸುಂದರ ಸಂಜೆ ಭೇಟಿ ಮಾಡಿದಾಗ ಲೋ.. ಸುಮ್ಮು .. ನಂಗೆ ಕಬ್ಬನ್ ಪಾರ್ಕ್ ನಲ್ಲಿ ಕಬ್ಬಿನ್ ಜ್ಯೂಸ್ ಕುಡಿಸು ರಾತ್ರಿ " ಮುಂಗಾರು ಮಳೆ " ಕರೆದುಕೊಂಡು ಹೋಗು ಅಂದಳು . ಅವಳು ಕೇಳುವ ಮೊದಲೇ ಬೆಳಿಗ್ಗೆ ರಂಜಿತ್ ಹತ್ರ ಬೈಕ್ arrange ಮಾಡಿದ್ದೆ ಹಾಗೂ ನನ್ನ ಜೇಬಿನಲ್ಲಿ ಬ್ಲಾಕ್ ನಲ್ಲಿ 250/- ಕೊಟ್ಟು ತಂದ ಎರಡು ಟಿಕೆಟ್ ಇತ್ತು . ಸುಮ್ಮನೆ ಕಾಲೆಳೆಯೋಣ ಅಂಥ " ನೋಡೇ .. ಜ್ಯೂಸ್ ಎಲ್ಲ ಕುಡಿಸಲ್ಲ ನಾನು ಕಂಜೂಸು ,,,,, ಮತ್ತೆ ಏನು ?? ಮುಂಗಾರು ಮಳೆನಾ ?? ಈಗ ಆಷಾಡಿ ಮಳೆ ಕೆಟ್ಟದಾಗಿ ಬರ್ತಾ ಇದೆ 8 ಗಂಟೆ ಬೇರೆ ಆಗಿ ಹೋಗಿದೆ . ರಿಕ್ಷಾ ದವನು ಒಂದೂವರೆ ಮೀಟರ್ ಚಾರ್ಜ್ ಕೇಳುತ್ತಾನೆ ... ಯಾಕೆ ಸುಮ್ನೆ ?? ನೋಡು ಪ್ರೀತಿಯಲ್ಲಿ ತಾಳ್ಮೆ ಇರಬೇಕು . ಇನ್ನು ಒಂದೆರಡು ತಿಂಗಳಿನಲ್ಲೇ ಉದಯ ಟೀವಿ ಯಲ್ಲಿ ಸೂಪರ್ ಹಿಟ್ ಚಲನಚಿತ್ರವಾಗಿ ಬರುತ್ತೆ ಆಗ ಒಟ್ಟಿಗೆ ಕೂತು ನೋಡೋಣ ಎಂದೆ . ಅವಳು ಏನೂ ಹೇಳಲಿಲ್ಲ ..... ಕೂಗಿದರೂ ತಿರುಗದೆ ನಾಗಮ್ಮನಂತೆ ಬುಸುಗುಡುತ್ತ ಓಡಿ ಹೋದಳು . ಮರುದಿನ ನನ್ನ ಕಪಾಳಕ್ಕೆ ಹೊಡೆದಂತೆ ಕಣ್ಣ ಮುಂದೆ ಆ ಶೆಟ್ರ ಮಗ ಸುಪ್ರೀತ್ ಜೊತೆ ಬೈಕ್ ನಲ್ಲಿ ಕೂತು ಹೋಗ್ತಾ ಇದ್ದಳು . ನಾನೇನು ಮಾಡ್ಲಿ ನೀವೇ ಹೇಳಿ??

ಇನ್ನು ಎರಡನೆಯವಳು ಶಶಿಕಲ . ಇವಳ ಬಗ್ಗೆ ಏನು ಹೇಳಲಿ ..... ಪ್ರೀತಿಯಿಂದ ನನ್ನನ್ನು 'ಸು ' ಎನ್ನುತ್ತಿದ್ದಳು ನಾನೂ ಕೂಡ ಪ್ರೀತಿಯಿಂದ 'ಶ್ಶ...' ಎಂದು ಕರೆಯುತ್ತಿದ್ದೆ . ಒಂದು ದಿನ " ಏನೋ ಸು ... ರೈಲು , ಹೋಟ್ಲು ಅಂಥ ಏನೇನೋ ಲೇಖನ ಬರೀತೀಯ . ನನ್ನ ಮೇಲೆ ಒಂದು ಕವನ ಬರೀಬಾರ್ದ ?? ಅಂದಳು . ಸರಿ ತೊಂಡೆ ಬೆಂಡೆ ಎಂದು ಒಂದು ನಾಲ್ಕು ತರಕಾರಿ ಹಾಕಿ ಕವನ ಬರೆದ್ರೆ ಆಯಿತು ಅಂದುಕೊಂಡೆ .ನೋಡು .. ಬರೆದ್ರೆ ಒಂದು ಥರಾ Different ಆಗಿ ಇರಬೇಕು ಅಂಥ Condition ಹಾಕಿದಳು .ಸರಿ 'ಶ್ಶ...' ನಾಳೆ ಕೊಡ್ತೀನಿ ಎಂದೆ . ರಾತ್ರಿಯಿಡೀ ಯೋಚಿಸಿ ಈ ಕವನ ಬರೆದೆ...

ಓ ನನ್ನ ಶನೀ.... ( ಅದು 'ಶ್ಶ.. + Honey = ಶನಿ ----> ಕಪಾಳಮೋಕ್ಷ ಸಂಧಿ )
ನಾನು ನಿನ್ನ ಪ್ರೇಮದ ಅಭಿಮಾನಿ
ಹಗಲಿರುಳೂ ಇರಲಿ ನಿನ್ನ ಒಲುಮೆ
ಅದೇ ನನ್ನ ಪಾಲಿನ ಜೀವ ವಿಮೆ ||

ನಿನ್ನ ನಡೆಯೋ ದಸರಾದ ಆನೆ |
ಕುಣಿತ ಮಂಗನಿಂದ ಕಲಿತಿದ್ದು ತಾನೆ ??
ಹಾಡಿದರೆ ಸತ್ತೆ ಓಡುವುದು ಕತ್ತೆ
ಹಾಡು ಕೇಳಿದ ಕೆಪ್ಪ ಇಂದು ನಾಪತ್ತೆ ||

ನಿನ್ನ ತುಟಿಯು ಮಟ್ಟಿಗುಳ್ಳ
ನಿನ್ನ ನಡುವೋ ಬೂದು ಗುಂಬ್ಳ ||
ಕಪ್ಪೆಯಂತೆ ನಿನ್ನ ಕಣ್ಣು
ನಿನ್ನ ಮುಖವೋ ಹಲಸಿನ ಹಣ್ಣು ||


ಮತ್ತೆ ನೋಡಿ ಆ ದಿನ ಮಾರ್ಕೆಟ್ ನಲ್ಲಿ ತೊಂಡೆಕಾಯಿ 5/- Kg ಮಟ್ಟಿಗುಳ್ಳ 30/- Kg . ಯಾಕೆ ನನ್ನವಳನ್ನು Cheap ತರಕಾರಿಗೆ ಯಾಕೆ ಹೋಲಿಸಲೆಂದು ತಮಾಷೆಗೆ ಮಟ್ಟಿಗುಳ್ಳಕ್ಕೆ ಹೋಲಿಸಿದೆನು .ಮತ್ತೆ ಮೀನಾಕ್ಷಿ ಎಂದು ಎಲ್ಲ ಕಡೆ ಕರೀತಾರೆ ಮೀನು ಮತ್ತು ಕಪ್ಪೆ ನೀರಿನಲ್ಲಿ ಅಕ್ಕ -ತಂಗಿ ಅಲ್ವಾ ?? ಅದಕ್ಕೆ ಹೀಗೆ ಬರೆದೆ .ನೀವು ಯಾರದ್ರೂ ಇಂಥ ಕವನ ಬರೆದಿದ್ರಾ ?? ಹೇಗೆ different ಆಗಿಲ್ವಾ ?? ಆದರೆ ಇಲ್ಲ .. ಮುಖ ಅರ್ಧ ಬೆಂದ ಆಲೂಗಡ್ಡೆ ಥರ ಮಾಡಿಕೊಂಡು ಅಡ್ರೆಸ್ ಕೂಡ ಕೊಡದೆ ಓಡಿ ಹೋದಳು . ನಾನೇನು ಮಾಡಲಿ ನೀವೇ ಹೇಳಿ??? .....

ಇನ್ನು ಮೂರನೆಯವಳು orkut ನಲ್ಲಿ ಸಿಕ್ಕಿದಳು . ಲತಾ ..... ಮೊದಲು ಸ್ವಲ್ಪ tragedy ಅನ್ನಿಸಿತು . ಎರಡನೇ ವಾರಕ್ಕೆ ಆಕೆಯಿಂದ "Dear" "Honey" ಸಂಬೋಧನೆ ಶುರುವಾಯಿತು . ಆಮೇಲೆ ಲವ್ ಅಂಥಾ ಏನೂ ಇಲ್ಲದಿದ್ದರೂ ಮಾತಿನಲ್ಲಿ ಸ್ವಲ್ಪ ಸಲುಗೆ ಬೆಳೆಯಿತು . ಒಮ್ಮೆ ಹೀಗೆ ಭೇಟಿ ಮಾಡೋಣ ಎಂದು ಅವಳ ಮನೆಗೆ ಹೋದೆನು . ಲತಾ .. ಬಂದಳು .... ಉಡುಪಿಯಲ್ಲಿ ರಥಬೀದಿ ತುಂಬಾ ರಂಪಾಟ ಮಾಡಿದ "ಲಕ್ಷ್ಮೀಶ " ನ ( ಆನೆ ) ಅಪರಾವತಾರದಂತಿದ್ದಳು. ಮನೆಯ ಗೋಡೆ ತುಂಬ ಇವಳ solo photo ಇತ್ತು . ಯಾಕೆ ಸರ್ ಎಲ್ಲ ಫೋಟೋ ದಲ್ಲಿ ಒಬ್ಳೇ ಇದ್ದಾಳೆ ಎಂದು ಅವಳ ಅಪ್ಪನನ್ನು ಕೇಳಿದೆ . ಇಲ್ಲಪ್ಪ ಅದು ಗ್ರೂಪ್ ಫೋಟೋ ನೆ ಆದ್ರೆ ಒಂದೇ ಫ್ರೇಮ್ ನಲ್ಲಿ ಎಲ್ಲರು ಬಂದಿಲ್ಲ , ಎಂಟು ಮಂದಿ ಅವಳ ಹಿಂದೆ ನಿಂತಿದ್ದಾರೆ ಅಂದರು . Corner ನಲ್ಲಿ ಅವಳ ಮತ್ತು ಅವಳ ತಾಯಿಯ ಫೋಟೋ ನೋಡಿ ಅದು ಹೇಗೆ ಸರ್ ... ಕೇಳಿದೆ.... ಅದಾ ?? adobe Photoshop ನಲ್ಲಿ edit ಮಾಡಿ ಪ್ರಿಂಟ್ ಹೊಡೆಸಿದ್ದು ಅಂದರು . ಇವಳ ತಾಯಿ ಗರ್ಭಿಣಿ ಇರಬೇಕಾದರೆ ಬಸ್ಸಿನಲ್ಲಿ ಒಂದೂವರೆ ಟಿಕೆಟ್ ತೆಗೊತಿದ್ರಂತೆ . ಸರಿ ಎಂದು ಅವಳ ಅಪ್ಪನಿಗೆ ಕಿಟ್ಟೆಲ್ ಡಿಕ್ಷನರಿ ಗಿಫ್ಟ್ ಕೊಟ್ಟು (ಕೂಷ್ಮಾಂಡ ಅಂಥ ಹೆಸರಿಡೋದು ಬಿಟ್ಟು ಲತಾ ಅಂಥ ಹೆಸರು ಇಟ್ಟಿದ್ದಾನೆ ) ಅವಳಿಗೆ ಮನದಲ್ಲೇ ಒಂದು ಸೌತೆಕಾಯಿ ಬೆಲ್ಲದ ಅಚ್ಚು ಮತ್ತು ಐದು ರುಪಾಯಿ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆದು ಹೊರಡಲನುವಾದೆ . ಕೂರಪ್ಪ ..... ಮೊದಲನೆ ಬಾರಿ ಬಂದಿದ್ದೀಯಾ ಮನೆಗೆ.... ಏನು ತೆಗೊತೀಯಾ ?? ಎಂದರು . ಸರ್ ನಿಮ್ಮ ಮಗಳನ್ನ ಬಿಟ್ಟು ಬೇರೆ ಏನು ಕೊಟ್ರು ತೆಗೊತೀನಿ ಎಂದು ಹೇಳಿ ಕಹಿ ಕಾಪಿ ಕುಡಿದು ಗೂಡು ಸೇರಿಕೊಂಡೆ . ನಾನೇನು ಮಾಡಲಿ ನೀವೇ ಹೇಳಿ?? .....

ಇರಲಿ ಈಗ ಫೆಬ್ರವರಿ ೧೪ ಹತ್ರ ಬರುತ್ತಿದೆ . ನನ್ನ ಜಾತಕ ನೋಡಿದ ಪುರೋಹಿತರು " ಈ ವರ್ಷ ಚಾನ್ಸ್ ಇದೆ " ಎಂದಿದ್ದಾರೆ.ಮನಸ್ಸು ಕನಸಿನ ಗೋಪುರ ಕಟ್ಟಲು ಆರಂಭಿಸಿದೆ . ಕಾತರ ಕಳವಳಗಳೊಂದಿಗೆ ಫೆಬ್ರವರಿ 14 ನ್ನು ಎದುರು ನೋಡುತ್ತಿದ್ದೇನೆ .ಸಲಹೆಗೆ ನಿಮ್ಮನ್ನು ಸಂಪರ್ಕಿಸುತ್ತೇನೆ ಆಗ ನಾನೇನು ಮಾಡ್ಲಿ ನೀವೇ ಹೇಳಿ ಹಾಗೆ ಮಾಡುತ್ತೇನೆ ಆಯ್ತಾ ??
==========================ವಿಕಟಕವಿ =======================

Comments

Anonymous said…
ಚೆನ್ನಾಗಿದೆ ಸರ್‍..

ನೀವು ದೇವದಾಸನ ಕಾದಂಬರಿ ಬರೆದರೆ ಅದರಲ್ಲಿ ಬಾರಿನಲ್ಲಿ ಬಿಯರ್ ಕುಡಿಯುವ ಸನ್ನಿವೇಶಗಳಿರಲ್ಲ.ಪ್ರೇಮ ಭಗ್ನವಾದಾಗ ಮಜವಾಗಿ ಜ್ಯೂಸ್ ಕುಡಿಯುತ್ತಾ ಶಾಸ್ತ್ರಿ ಪಾರ್ಕಿನಲ್ಲಿ ಅಡ್ಡಾಡುವ ಭಂಡಾರ್ಕರ್ಸ್ ಕಾಲೇಜಿನ ಯುವತಿಯರಿಗೆ ಲೈನ್ ಹೊಡೆಯುವ ದೃಶ್ಯಗಳಿರಬಹುದೇನೋ ಅನ್ನಿಸುತ್ತದೆ..;)
Unknown said…
good,kapalamoksha sandhi concept was too good,but never heard about "sutta aloogadde" till now
ಮಛಾ.. ಹಾಸ್ಯ ಅಂದರೇ ಏನು ಅಂಕಾ ತೋರಿಸಿದ್ದೀಯಾ. ಈ ಸಲಾ ನಿನ್ನ ಗದ್ಯದ ಜೂಡಿ ಪದ್ಯ ಸುದೇಕ್ ಅರ್ಥ ಆತು. ನಮಗ ಸಾಲಿ ಪಠ್ಯ ಪುಸ್ತಕದಾಗ ಹಿಂತಾ ಪಾಠ ಇದ್ದಿದ್ರ ಖಂಡಿತ ಕನ್ನಡಾ ಕ್ಲಾಸಿಗೇ ಓಡೋಡಿ ಹೋಗ್ತಿದ್ವಿ.

ಇದನ್ನ ಓದುಮುಂದ ನಾ ಅಂತ್ರೂ ಬಿದ್ದ ಬಿದ್ದ ನಗ್ಲಿಕತ್ತಿದ್ದೇ.

ಕಪಾಲಮೋಕ್ಷ ಸಂಧಿ ಅಂತ್ರೂ ಎಂದೂ ಮರಿಯುದಿಲ್ಲಾ. ಹಿಂಗೇ ಬರೀತಿರು ಮಛಾ.

ಇವನ್ನ ಯಾವುದರೇ ಮ್ಯಾಗಝಿನ್ ಅಥವಾ ಯಾವುದರೇ ಪತ್ರಿಕೇಗೋ ಕಳಸ್ತೀ ಏನ್ ನೋಡು. ಅಷ್ಟು ಲಾಯಕ್ ಅದ ಈ ಲೇಖನಿ.
ಥ್ಯಾಂಕ್ಸ್ ರಂಗಾ .... ಆಸ್ಕರ್ ಸಿಕ್ಕಷ್ಟು ಖುಷಿ ಆಯಿತು . ನಿಮ್ಮ ಸಲಹೆ ಹಾಗೋ ಪ್ರೋತ್ಸಾಹ ಹೀಗೆ ಇರಲೆಂದು ಕೋರಿಕೆ .
ಧನ್ಯವಾದಗಳೊಂದಿಗೆ
ವಿ . ಸುಮಂತ ಶ್ಯಾನುಭಾಗ್
Ravi K S said…
ಕಪಾಳಮೋಕ್ಷ ಸಂಧಿ !! He He He...
ಸೂಪರ್ ಆಗಿದೆ..

I second Ranga's thougths.. You should publish these in some magazine.. It should reach more people than now...

raviks.livejournal.com

Popular posts from this blog

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಆಪೀಸಾಯಣ

ನವೆಂಬರ್ 22 ರಂದು ಆಪೀಸಿನಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಪೀಸಿನಲ್ಲಿರುವವರ ಹೆಸರನ್ನೆಲ್ಲ ಸೇರಿಸಿ ಹೊಸೆದ ಪದ್ಯ. ನೀಲಿ  ಬಣ್ಣದಲ್ಲಿ ಬರೆದವು ಅವರ ಹೆಸರುಗಳು. ದೇವಾದಿದೇವತೆಗಳು ಸಭೆಯನ್ನು ನಡೆಸಿ ಸಭೆಯೊಳಗೆ ಸು ಮಧು ರ ಕನ್ನಡವ ಬಡಿಸಿ || ಎಲ್ಲಾ ದೇವರಿಗೂ ಕನ್ನಡವು ಹಿಡಿಸಿ ಬಂದು ಕೂತಿಹರೆಲ್ಲ tatasky ODC ||               ಕೃಷ್ಣ ನಿಹನಿಲ್ಲಿ  ಇಹನು   ರಘು-ರಾಮ                     ಮಂಜುನಾಥ ರು ತ್ರಿಮೂರ್ತಿಯಲಿ ಹರಸಿರುವ ಧಾಮ ||                     ಪಾವನ-ಪುನೀತರಾಗಿ ಕೇಳಿ ಮೋಹನ ನ ಬಾನ್ಸುರಿ                     ಸ್ವಪ್ನ ದಲ್ಲಷ್ಟೇ ಸಿಗುವುದು ಇಂಥಹ ಚಾನ್ಸು ರೀ... || ವಿಘ್ನ ದಿಂ ಕಾಯುತಿಹ ದ್ವಾರದಲೇ ಬೆನಕ ಎಲ್ಲ ದೇವರಿಗೂ ಶರಣು ನಮ್ಮ ಗುರು ಗಳ ತನಕ ಸಂಕಟದಿ ಕರೆದೊಡನೆ ಸ್ವಾಮಿ ವೆಂಕಟೇಶ ಹರುಷ ದಲಿ ಕಳಿಸುವ...