Skip to main content

ನೆನಪಿನ ಬುತ್ತಿಯಿಂದ........

ವಚನ ಬ್ರಹ್ಮ ಸರ್ವಜ್ಞ ಇಂದು ಬದುಕಿದ್ದು ಒಂದು ವೇಳೆ ನಮ್ಮ ಕಾಲೇಜಿನ ದರ್ಶನ ಮಾಡಿದ್ದಲ್ಲಿ
" ಜೇಸಿಯಲಿ ಸೀಟಿರಲು ಮೆಸ್ಸಿನಲಿ ಪ್ಲೇಟಿರಲು
ಹಾಸ್ಟೇಲಿನ ಬೆಡ್ಡಿನಲಿ ಮಲಗಿರಲು ಸ್ವರ್ಗವೂ
ಠುಸ್ಸ .... ಎಂದ - ಸರ್ವಜ್ಞ
ಎಂದು ಹೇಳುತಿದ್ದ ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ .ನನ್ನ ಜೀವನದ ಅವಿಸ್ಮರಣೀಯ ಕಾಲ ಯಾವುದೆಂದು ಯಾರಾದರೂ ಕೇಳಿದರೆ ಈ ನಾಲ್ಕು ವರ್ಷಗಳ ಹಾಸ್ಟೇಲ್ ಜೀವನ ಎನ್ನಲು ಬಹಳ ಸಂತೋಷಪಡುತ್ತೇನೆ .

ಈಗ ನೀವೇ ನೋಡಿ, ನಮ್ಮ ಕಾಲೇಜಿನ End-to-End ದರ್ಶನ ಮಾಡಬೇಕಾದರೆ ಬಲ ತುದಿಯ Boys Hostel ನಿಂದ ಎಡ ತುದಿಯ Girls Hostel ತನಕ ನೋಡಬೇಕು .ಹೀಗೆ ಹಾಸ್ಟೇಲ್ ನೋಡದೆ ಜೇಸಿಯ ದರ್ಶನ ಪರಿಪೂರ್ಣವಾಗದು. ನನ್ನ ಎಲ್ಲ ಅನುಭವಗಳನ್ನು ಬರೆಯುತ್ತ ಹೋದರೆ ಒಂದು ಸಂಪುಟ ರಚಿಸುವಷ್ಟು ವಿಷಯಗಳಿದ್ದರೂ ಬಹಳ ಕಷ್ಟಪಟ್ಟು 2 ಪುಟಗಳಿಗೆ ಭಟ್ಟಿ ಇಳಿಸಿ ನನ್ನ ಅನುಭವ ಹಾಗೂ ಹಾಸ್ಟೇಲಿನ ಹಿರಿಮೆಯನ್ನು ಹಂಚಿಕೊಳ್ಳುವ ಕಿರುಪ್ರಯತ್ನ ಮಾಡಿದ್ದೇನೆ .

"ಪುಷ್ಪ ಮಹಲ್ " ನಲ್ಲಿ ಕಳೆದ ಮೊದಲನೆ ವರ್ಷ ನಿಜಕ್ಕೂ ಅವಿಸ್ಮರಣೀಯ ನೆನಪಿನ ಬುತ್ತಿ . ಮೊದಲ ಎರಡು ವಾರ ಹೊಸ ಮುಖಗಳ ಪರಿಚಯದಲ್ಲೇ ಕಳೆದರೂ ,ಒಂದೇ ತಿಂಗಳಿನಲ್ಲಿ ಎಲ್ಲರೂ ಪರಸ್ಪರ ಅಡ್ಡ ಹೆಸರಿನ ಸಂಬೋಧನೆ ಶುರು ಮಾಡಿದ್ದೆವು .ಜೆ.ಎಸ್.ಎಸ್ ,ಕೋಳ್ಯ,ಅನ್ಯ ,ಸ್ಲಮ್,ಸೇಟು,ಸೈಕೋ,ಹೈವಾನ್ ,ಜಾಂಬೂ,ದೇಸಿ, ದೊಡ್ಡು,ಕುಮಟಾ ಎಲ್ಲ ಈ ಗರಡಿಯವರೇ. ಕಾರಿಡಾರ್ ಕ್ರಿಕೆಟ್ ನಿಂದ ಹಿಡಿದು ರೋಡ್ ಲಗೋರಿಯವರೆಗೆ ಎಲ್ಲ ಆಟಗಳನ್ನು ಆಡಿದ್ದೆವು . ನಮ್ಮ ಆಟಗಳಿಗೆ ವಿಘ್ನವಾಗಿ ಬರುತ್ತಿದ್ದ ಸೆಕ್ಯುರಿಟಿಗೆ ರಾತ್ರಿ ೧೨ ಗಂಟೆಗೆ " ತಾತಪ್ಪ ಕಾಪಾಡೀ ....." ಎಂದು ಚೀರಿ ಅವರು ಮೇಲೆ ಹತ್ತಿ ಬರುವುದರೊಳಗೆ ಲೈಟ್ ಆಫ್ ಮಾಡಿ ಮಲಗುತ್ತಿದ್ದೆವು .9:30 ಕ್ಕೆ ನಿದ್ರಾದೇವಿಯ ವಶವಾಗುವವರಿಂದ ಹಿಡಿದು 3 ಗಂಟೆಯ ತನಕ TV channel ತಿರುಗಿಸಿ ನಿರಾಶರಾಗಿ ಮಲಗುವವರೂ ಇದ್ದರು . ತಾನು ತಂದ Super focus Bynacular ನಿಂದ ತನ್ನ ರೂಮಿನಿಂದ 281/2* ದಕ್ಷಿಣಕ್ಕೆ Focus ಮಾಡಿ Girls Hostel ಎಂದು ಭಾವಿಸಿ ಮನಸ್ಸಿನ ಮಂಡಿಗೆ ತಿನುತ್ತಿದ್ದ ಕೊಳ್ಯನಿಗೆ ಅದು ತಿರುಮಲ ಟವರ್ಸ್ ಎಂದು ತಿಳಿದ ಮೇಲೆ ಭಾರೀ ರಸಭಂಗವಾಗಿದ್ದು ದೇವರಾಣೆಗೂ ನಿಜ . 2 ರೂಪಾಯಿ ಚಂದಾ ವಸೂಲಿ ಮಾಡಿ ತಂದು ನೋಡಿದ ಸಿನೆಮಾಗಳಿಗೆ ಲೆಕ್ಕವೇ ಇಲ್ಲ . ಪಾಪದ ಮನೋಹರನಿಗೆ ನಾಲ್ಕು ಜನ ಕಣ್ಣು ಕೆಂಪು ಮಾಡಿ ಡಾನ್ಸ್ ಮಾಡಿಸಿದ್ದೂ ನಿಜ .ಮಾತಿಗೆರಡು ನಗೆ ಚಟಾಕಿ ಹೇಳುತ್ತಿದ್ದ ನಾನು ಜಗದ್ಗುರು ಸುಮಂತ ಶ್ಯಾನುಭಾಗನಾಗಿ P.J. ಪೀಠ ಸ್ವೀಕಾರ ಮಾಡಿದ್ದೂ ಇಲ್ಲೇ .

ಎರಡನೇ ವರ್ಷ ಕ್ಯಾಂಪಸ್ ಹಾಸ್ಟೆಲಿಗೆ ಆಗಮನ . ಪಂಚತಾರಾ ಹೋಟೆಲಿನಂತೆ ಇದ್ದ "ಪುಷ್ಪ ಮಹಲ್ " ನಿಂದ ಇಲ್ಲಿಗೆ ಬಂದು ಇಲ್ಲಿನ bathroom - toilet ನೋಡಿ ಮೂಗುಮುರಿದ ಸ್ನೇಹಿತರಿಗೆ ಸೀನಿಯರ್ ಗಳು "ಏನೋ ಹಾಸ್ಟೆಲಿಗೆ ಓದಲಿಕ್ಕೆ ಬರ್ತೀಯಾ ?? ಅಥವಾ ಸುಸ್ಸು ಮಾಡಕ್ಕೆ ಬರ್ತೀಯಾ?? ಎಂದಿದ್ದರು . ನಮಗೋ Branch entry ಯಾ ಸಂಭ್ರಮ . "ಗುಬಾಲ್" - "ಪಂಟ" ಹೊಸ ಶಬ್ದಗಳ ಪರಿಚಯ .ಪತ್ರಿಕೆಗಳಲ್ಲಿ ಪ್ರಕಟವಾದಂತೆ ಯಾವುದೇ ರೀತಿಯ ಅಹಿತಕರ Ragging ಘಟನೆಗಳು ಇಲ್ಲಿ ಎಂದಿಗೂ ನಡೆದಿಲ್ಲ .ಮೆಸ್ಸಿನ ಊಟಕ್ಕೆ ಲೊಟ್ಟೆ ಹೊಡೆದ ನಮಗೆ "ಹೊಸದರಲ್ಲಿ ಎಲ್ಲ ಹೀಗೆ .... ಎಂದು seniours ಎಚ್ಚರಿಸಿದ್ದರು .

"ಏಯ್ ...... ಒಂದ್ ಅತ್ನಿಮಿಸ ಕಾಯ್ಬೇಕು...... ನಾಗರಾಜನ ಆವಾಜ್ ಗೆ ಎದುರು ಮಾತಿಲ್ಲ . ಹೌದು ..... ಈಗ ನಾವಿರಿವುದು ಹಾಸ್ಟೆಲಿನ ಮೆಸ್ಸ್ ನಲ್ಲಿ . ಒಳಗೆ ಬರುತ್ತಿದ್ದಂತೆ ಸಿದ್ದಮಲ್ಲಪ್ಪ ಕಾಣುತ್ತಾರೆ . Long Account Book ನಲ್ಲಿ 24><7 ಲೈನ್ ಹೊಡೆಯುವುದೇ ಇವರ ಕೆಲಸ . ಅದು ಬಿಟ್ಟರೆ ನಾಗರಾಜನದ್ದೆ ದರ್ಬಾರು . "First Come First Serve" ಇವನ Principle . ಆದರೆ ಕೆಂಪ ಬಂದರೆ ಆವಾಜ್ ಹಾಕಿದವರಿಗೆ ಮೊದಲು ಚಪಾತಿ . ಇವರೊಂದಿಗೆ ಕೆಲಸದಲ್ಲಿ ಮಲ್ಲಪ್ಪನದ್ದೂ ಒಂದು ಪಾಲು . ಆದರೆ ಗಿರೀಶ ಮಹೇಶ ಶಾರುಕ್ ಇವರಿಗೆ ಮೆಸ್ಸ್ ಕೆಲಸಕ್ಕಿಂತ Mobile RingTone ಕೆಲಸಗಳೇ ಹೆಚ್ಚು .ಇನ್ನು ಮೆಸ್ಸಿನಿಂದ ಹೊರಗೆ ಬಂದರೆ ಪ್ಲೇಟ್ ಗೋಸ್ಕರ ಕಾಯುತ್ತಿರುವವರ ದಂಡು . ದಿನಕ್ಕೊಂದು ಪ್ಲೇಟ್ ನಲ್ಲಿ ಊಟ ಮಾಡುವವರು ಕೆಲವರಾದರೆ ತಮ್ಮ ಮೊದಲ ವರ್ಷದ ಪ್ಲೇಟನ್ನೇ ಧರ್ಮಪತ್ನಿಯಂತೆ ಕಾಪಾಡಿಕೊಂಡು ಬರುವವರೂ ಇದ್ದಾರೆ . ಇವರು ತಮ್ಮ Room Number ,Address ಎಲ್ಲಾ ಕೊಟ್ಟೂ ಪ್ಲೇಟ್ ಹಿಂದಿರುಗಿ ಬರದಿದ್ದಾಗ Police Complaint/Paper Advertisement ಬಿಟ್ಟು ಬಾಕಿ ಎಲ್ಲಾ ರೀತಿಯ Enquiry ಮಾಡುತ್ತಿದ್ದರು .

ಇನ್ನು ಮೂರನೇ ವರ್ಷ ಎಲ್ಲರಿಗೂ Placement ಗರ್ಮಿ ಹತ್ತಿತ್ತು . 5 ನೇ ಸೆಮ್ ಕೊನೆಯಲ್ಲಿ mini .micro,major Project ಶುರು ಮಾಡಿದವರು ಕೆಲವರಾದರೆ CAT/CRT ಎಂದು ಟೈಮ್ ಕ್ಲಾಸಿಗೆ ಇನ್ನೊಂದು ಪಾಳಿ . Project ಶುರು ಮಾಡಿದವರು Complete ಮಾಡಿದ್ದನ್ನು ನಾನು ಇದುವರೆಗೂ ಕಂಡಿಲ್ಲ . ಮೆಸ್ಸಿನಲ್ಲಿ ನಾವೇನು Junior ಗಳನ್ನೇ ತಿನ್ನಲು ಹೋಗುತ್ತೇವೋ ಎಂಬಂತೆ ನಾಗರಾಜ್ &Co ಇವರಿಂದ Junior ಗಳಿಗೆ ಸರ್ಪಗಾವಲು . ನಾವೋ "ಮೆಸ್ಸಿಗೆ ಬಂದವನು ಡೌನ್ಸ ಗೆ ಬರದೆ ಇರ್ತಾನಾ ...?? " ಎಂದು ಮನಸ್ಸಿನಲ್ಲೇ ನಗುತ್ತಿದ್ದೆವು . ಹೀಗೆ ಜೇಸಿಯಾನ, "ಮಂಡೇಲಾ ..... ಓಹೋಹೋ ..... " "ಅಷ್ಟೆ ಅಷ್ಟೆ " ,"ಆಗ್ ಹೋಗ್ಲಿ ",ಲಕಾ ರೆ ಲಕಾ ಲಕಾ ಲಕಾ ... ಹೂ ಹಾ ಹೂ ಹಾ ..... ಕೇಕೆಗಳ ನಡುವೆ ,Trip ,Placement.Treat ಗಳೊಂದಿಗೆ 3 ನೇ ವರ್ಷವೂ ಕಳೆಯಿತು .

ಈಗ ಕೊನೆಯ ವರ್ಷ ಇಂಜಿನಿಯರಿಂಗ್ ಜೀವನದ ಸನ್ಯಾಸಾಶ್ರಮ . ಕಾಲೇಜಿನಲ್ಲಿ ಸೀನಿಯರ್ ಪಟ್ಟ . IEEE, CSI, Student Council ಗಳಲ್ಲಿ ಸ್ಥಾನ ಗಳಿಸಿ Stud ಗಳಾಗುವ ಬಯಕೆ ಕೆಲವರಿಗಾದರೆ Dream Job ನ ಕನಸಿನಲ್ಲಿ ಕೆಲವರು . ಉಳಿದವರೋ " ಏನ್ ಮಚ್ಚಾ .... 4 ವರ್ಷ ಆಯ್ತು ಇನ್ನೂ ಒಂದ್ ಹುಡುಗೀನ್ನ ಪಟಾಯ್ಸಿಲ್ಲ" ಎಂದು ನಿಟ್ಟುಸಿರಿಟ್ಟು ಯಂಪಾ ದಲ್ಲಿ ಒಂದು ಛೊಟಾ ಟೀ ಹೇಳಿ 3 ಗಂಟೆ ಅಲ್ಲೇ ಕೂತು ಅಲ್ಲಿಗೆ ಬರದೆ ಇರುವವರನ್ನು ಕಾಯುತ್ತಿದ್ದರು .

ಹೀಗೆ ನಮ್ಮ seniour ಗಳಿಗೆ ವಿದಾಯ ಹೇಳಿದ ನೆನಪು ಹಸಿರಾಗಿರುವಾಗಲೇ ನಮ್ಮ Ticket Ready ಆಗಿದೆ. ತುಂಬು ಉತ್ಸಾಹದಿಂದ ಬರೆಯಲು ಶುರುಮಾಡಿದ ನನ್ನ ಹೃದಯ ಏಕೋ ಭಾರವಾಗಿದೆ . ಗೇಟು ದಾಟಿದ ಮೇಲೆ ಒಮ್ಮೆ ಹಿಂದಿರುಗಿ ನೋಡಿದರೆ ಹಾಸ್ಟೇಲಿನ ಸಿಹಿ ನೆನಪುಗಳಿಂದಲೇ ಕಣ್ಣು ಮಂಜಾಗುವುದು . ಈ ನಾಲ್ಕು ವರ್ಷಗಳ ಕಾಲ ನಮಗೆ ಆಶ್ರಯ ನೀಡಿದ ಹಾಸ್ಟೆಲ್ ಗೂ ವಿದ್ಯೆ ನೀಡಿದ ಕಾಲೇಜು ಹಾಗೂ ಅಧ್ಯಾಪಕರಿಗೂ ಪ್ರೀತಿ -ವಿಶ್ವಾಸ ತೋರಿದ ನನ್ನ ಗೆಳೆಯ ಗೆಳತಿಯರಿಗೂ ಭಾವಪೂರ್ಣ ವಿದಾಯ ಹಾಗೂ ಎಲ್ಲರಿಗೂ ನನ್ನ Jadoo Ki Chappi .

---ವಿಕಟಕವಿ ----

Comments

Unknown said…
akatakata ivanu vikatakavi anthe..... matka kavi spelling mistake maadirbeku.... nways bhahala channagidhe dude....[:)full senti......
Anonymous said…
ಛೊಲೋ ಬರ್ದಿ.. ಎಲ್ಲಾ ೪ ವರ್ಷಕ್ಕ ಒಂದೇ ಪೋಸ್ಟ ಸಾಕಾಗುದಿಲ್ಲಾ.. ಟೈಂ ಸಿಕ್ಕಾಗ ಒಂದೊಂದು ವರ್ಷಕ್ಕ ಒಂದು ಪೋಸ್ಟ್ ಹಾಕು.. ಇನಾ ಡಿಟೇಲಾಗಿ ಬರಿ.. ನಿನ್ನ ಕಡೇ ರೂಂ ಸೊಚ್ಚ ಮಾಡ್ಸಿದ್ದು, ಮುಂದಿನ ಸಲಾ ನಾವು ಮಾಡ್ತಿವಿ ಅಂತ ಹೇಳಿ escape ಆಗಿದ್ದು, ನೀನು ಕೆಟ್ಟ ಮಾತುಗಳನ್ನ ಕೇಳಿ ಕಲೂಶಿತನಾಗಿದ್ದು, ಮತ್ತ ಮುಂದ ನೀನೇ ಆ ಮಾತುಗಳನ್ನ ಎಲ್ಲಾರ್ಗು ಕಲಸಿದ್ದು.. ಹಿಂಗೇ ಎಲ್ಲಾ ಬರಿ... ;)

ಎಲ್ಲಾನು ನಾ ಓದ್ತೀನಿ ಅಂತಲ್ಲಾ.. ಸುಮ್ಮ ನಿನಗೂ ಖುಷ್ ಮಾಡುನಂತ ಹೇಳಿನಿ.

ಹಿಂಗೇ ಬರಿತಿರು, ಆಗಾಗ ಓದ್ತಿರ್ತೀನಿ.
Unknown said…
Excellent article, expecting much more from you, keep posting.

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ