Skip to main content

WELCOME TO KUNDAPUR !!!!!! .


*********************************************************************************
ಕೋಟೇಶ್ವರ ಕುಂಭಕಾಶಿ ಕೋಟ ಕೋಡಿ ಕೋಣಿ
ನಮ್ಮ ಊರು ಕುಂದಾಪ್ರ ಎಷ್ಟು ಚಂದ ಕಾಣಿ
ಹೊಯ್ಕ ಬರ್ಕ್ ಭಾಷೆ ಕೇಂಡ್ರೆ ಕಿಮಿಗೆಷ್ಟ ಖುಶಿ
ಅರ್ಥ ಆಗದಿದ್ರೆ ಮಾಡ್ಕಬೇಡಿ ಮಂಡೆಬಿಶಿ||

ಹೋಯ್ ಹೇಂಗಿದ್ರಿ ಮಾರ್ರೆ ???ಬನಿ ಕೂಕಣಿ..... ಉಂಡ್ರಿಯಾ ??ಒಂದೈದ್ನಿಮಿಷ ಅಡ್ಡ ಒರಗಿ... ದಣು ಹೊಯ್ಲಿ  ಆಮೇಲೆ ನಾನ ಚೊರೆ ಮಾಡುಕ್ಕೆ ಶುರು ಮಾಡ್ತೆ ಅಕಾ ?? ಅಲ್ದೆ ಕುಂದಾಪುರದ್ ವಿಷಯ ಬರುದ್ ಅಂದ್ರೆ ಸಾನ್ ಸುಮಾರಾ  ??
ಎಂತಿಲ್ಲ ಅಂದ್ರೂ ಒಂದೆರಡ್ ಒಪ್ಪತ್ತಾರೂ ಬೇಕಾ ಬೇಡ್ದಾ ??





ಕಾಣಿ ..... ಬೋರ್ಡ್ ಸಮಾ ಕಾಣಿ ಖುಶಿ ಆತ್ತಾ ಇಲ್ದಾ ?? "ನಮ್ಮೂರೇ ನಮಗೆ ಸವಿಬೆಲ್ಲ" ಅಂದ ಹಾಂಗೆ ಯಾರಿಗೇ ಆಯ್ಲಿ ಅವರ ಊರಿನ ಬೋರ್ಡ್,ಊರಿಗೆ ಹೋಪು ಬಸ್ಸ ಕಂಡ್ರೆ  ಅಷ್ಟೆಲ್ಲ ಎಂತಕ್ಕೆ ದೊಡ್ಡ ದರೋಡೆ ಆಯಿತ್ತ ಅಂತ ಹೇಳಿ ಉದಯ ವಾರ್ತೆಯಲ್ಲಿ ನಮ್ಮೂರಿನ ಒಂದ್ ಓಣಿ ತೋರ್ಸಿದ್ರೂ ಬೇಜಾರಿನ್ ಮಧ್ಯಾನೂ ಸ್ವಲ್ಪ ಖುಷಿ ಆಯಿಯೇ ಆತ್ತ . ಊರಲ್ಲಿಪ್ಪತ್ತಿಗೆ ಮೇಳಿ ತಿರ್ಸಿ ಕಾಣ್ದಿರೂ ಬೇರೆ ಊರಿಗೆ ಹೋದಾಗಳಿಕೆ ನಮ್ಮೂರಿನ ಜನ್ರನ್ನ ಕಂಡ್ರೆ ಒಂದ್ ಥರಾ ಮನ್ಸಿಗೆ ಸಮಾಧಾನ. "ನಮ್ ಜನ" ಎಂಬ ಪ್ರೀತಿ ಬಳ್ಕಂಡ ಬತತ್ತ ಹೌದಾ ಅಲ್ದಾ ?

 ಮತ್ಸ್ಯಗಂಧಾ ಎಕ್ಸಪ್ರೆಸ್ಸ ನಲ್ಲಿ  ಪನ್ವೇಲ್ನಲ್ಲಿ ಕುಳಿತೊಡನೆ ಹದಿಮೂರು ಘಂಟೆ ಹೇಗೆ ಕಳೆಯಲೆಂಬ ಚಿಂತೆ.ರತ್ನಗಿರಿ ಬಂದೊಡನೆ ಹದಿಮೂರರಲ್ಲಿ ಎಷ್ಟು ಘಂಟೆ ಕಳೆಯಿತೆಂಬ ಲೆಕ್ಕ.ಗೋವಾ ಬಂದೊಡನೆ ಕುಂದಾಪುರ ತಲುಪಲು ಎಷ್ಟು ಸಮಯ ಉಳಿಯಿತೆಂಬ ಗುಣಾಕಾರ. ಗೋವಾ ಹೋದ ಮೇಲೆ ಕರ್ನಾಟಕ ಪಾದಾರ್ಪಣೆಯ ಸಂಭ್ರಮ.ಗೋಕರ್ಣ - ಕುಮಟಾದಲ್ಲಿ ಇನ್ನೂ ಯಾಕೆ ಕುಂದಾಪುರ ಬಂದಿಲ್ಲವೆಂಬ ತವಕ. ಭಟ್ಕಳ ದಾಟಿ ಗಂಗೊಳ್ಳಿ ಜೀವನದಿಯ ಬ್ರಿಜ್ ದಾಟುತ್ತಿರಬೇಕಾದರೆ ಸ್ವಲ್ಪ ಸಮಾಧಾನ. ಮುಂದಡಿಯಿಟ್ಟು ಬೋರ್ಡನ್ನು ಕಂಡೊಡನೆ ಮನಸ್ಸಿನಲ್ಲಿ ಡಿಂಗ್ಚಾಕ್ ಡಿಚಾಕ್!!!ಡಿಂಗ್ಚಾಕ್ ಡಿಚಾಕ್!!!.

ಬೆಳಿಗ್ಗೆ ನಾಲ್ಕು ಘಂಟೆಗೆ ಕುಂದಾಪುರಕ್ಕೆ ತಲುಪಿದ ನಾನು  ರಿಕ್ಷಾದವರು ಬಲುಪ್ರೀತಿಯಿಂದ ಕರೆದರೂ ಹೋಗದೇ ತಂದೆಯ ಬರುವಿಕೆಗೆ ಕಾಯತೊಡಗಿದೆ.ಕನ್ನಡ-ಹಿಂದಿ-ಇಂಗ್ಲೀಷ್-ತುಳು-ತೆಲುಗು-ತಮಿಳು ಯಾವ ಭಾಷೆಯಲ್ಲಿ ಮಾತನಾಡಿದರೂ ಪರ ಊರಿನವರೆಂದು ಮೋಸ ಮಾಡುವ ಜಾಯಮಾನದವರಲ್ಲ ನಮ್ಮೂರಿನ ರಿಕ್ಷಾದವರು. ಎಲ್ಲೇ ಇರಲಿ ಮೊದಲೇ ದರ ಹೇಳುತ್ತಾರೆಅಲ್ಲಿಗಾರೆ ಇಷ್ಟ್ ಆತ್ತ ಕಾಣಿ ಮಾರ್ರೆ ಎಂದು. ಬೇರೆ ಊರಿನವರಾದರೂ ಸನ್ನೆ-ನಟನೆ-ಏಕಪಾತ್ರಾಭಿನಯ -ಮೂಕಾಭಿನಯ ಹರಕು ಭಾಷೆ ಏನಾದರೂ ಮಾಡಿ ಜಾಗಕ್ಕೆ ಹಣ ಎಷ್ಟಾಗುತ್ತದೆ ಎಂದು ಕರಾರುವಾಕ್ಕಾಗಿ ಹೇಳುವಷ್ಟು ಪ್ರತಿಭಾವಂತರು ಇವರು. ಯಾಕೆಂದರೆ ನಾವು ಬಟ್ಟೆ ಅಂಗಡಿ ಬಿಟ್ಟರೆ ಬೇರೆ ಎಲ್ಲೂಮೀಟರ್ ಬಳಸುವವರಲ್ಲ. ಅದಕ್ಕೆ ಪ್ರೀ ಪೇಯ್ಡ್ ಪದ್ಧತಿ. ಇಷ್ಟಲ್ಲದೆ ಲಗೇಜ್ ತುಂಬಾ ಇದ್ದರೆ ಅದನ್ನು ಲೋಡ್ ಮಾಡುವುದರಲ್ಲೂ ಸಹಾಯಹಸ್ತ ಚಾಚುವ ಉದಾರ ಮನೋಭಾವದವರು.ಹೀಗೆ ರಿಕ್ಷಾದಲ್ಲಿ ಒಬ್ಬೊಬ್ಬರೆ ಹೋಗುತ್ತಿರಲು ದೂರದಲ್ಲಿ ವೋಲ್ಟೇಜಿಗಾಗಿ ಪರಿತಪಿಸುತ್ತಿರುವ ಒಂದು ಸ್ಕೂಟರ ಹೆಡ್ ಲೈಟ್ ಕಾಣಿಸಿತು. ನನ್ನ ನಿರೀಕ್ಷೆಯನ್ನು ಹುಸಿಮಾಡದೆ ಸ್ಕೂಟರ್ ನಮ್ಮ ಶ್ಯಾನುಭೋಗರನ್ನು ಕರೆತಂದಿತು ಹಾಗೂ ಮನೆಯತ್ತ ನನ್ನ ಪ್ರಯಾಣ ಮೊದಲುಗೊಂಡಿತು.

ಕಳೆದ ಬಾರಿ ರಸ್ತೆಯಲ್ಲಿ ಹೋಗಿ ಮನೆಗೆ ತಲುಪುವಷ್ಟರಲ್ಲಿ ಶರೀರದ ಇನ್ನೂರ ಆರು ಮೂಳೆಗಳ ಸ್ಥಾನಪಲ್ಲಟವಾಗಿತ್ತು. ಅದನ್ನೇ ನೆನಪಿಸಿಕೊಂಡು ಅಮ್ಮನಿಗೆ ಫೊನ್ ಮಾಡಿ ಅಮೃತಾಂಜನ್ ಝಂಡುಬಾಮ್ ತೆಗೆದಿಡಲು ಹೇಳೋಣ ಎಂದುಕೊಂಡರೆ ನಾನು ನೋಡಿದ್ದೇನು ??
ಕಳೆದ ಬಾರಿ ರಸ್ತೆ ತುಂಬ ಹೊಂಡ ದಿಣ್ಣೆ ಹಳ್ಳ
ಈಗ ಆಗಿ ಇಹುದು ನೋಡಿ ಕತ್ರಿನಾಳ ಗಲ್ಲ||
ರಸ್ತೆ ಪಕ್ಕ ಇತ್ತು ಮೊದಲು ಹಚ್ಚ ಹಸಿರು  ಗದ್ದೆ
ಈಗ ಕಾರುಬಾರು ಕಾಂಕರೀಟು ಮನೆಗಳದ್ದೆ.

ಕುಂದಾಪುರ!!! ಬೆಂಗಳೂರಿನಿಂದ ೪೫೦ ಕಿಲೋಮೀಟರ್ ಮಂಗಳೂರಿನಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಸುಂದರ ಕರಾವಳಿ ಪ್ರದೇಶ. ಕುಂದವರ್ಮನೆಂಬ ರಾಜ ಇಲ್ಲಿ ಆಳ್ವಿಕೆ ನಡೆಸಿದ್ದರಿಂದ ಊರಿಗೆ ಕುಂದಾಪುರವೆಂಬ ಹೆಸರು ಬಂದಿತೆಂದು ಒಂದು ಪ್ರತೀತಿಯಾದರೆ ಕುಂದೇಶ್ವರ ದೇವಾಲಯದಿಂದ ಹೆಸರು ಬಂದಿತೆಂದು ಇನ್ನು ಕೆಲವರ ಅಂಬೋಣ. ಶಿರೂರು ಉತ್ತರದ ಗಡಿಯಾದರೆ ದಕ್ಷಿಣದಲ್ಲಿ ತೆಕ್ಕಟ್ಟೆ. ಪೂರ್ವದಲ್ಲಿ ಬೆಳ್ವೆ-ಹೊಸಂಗಡಿ ತನಕ ನಮ್ಮ ಕುಂದಾಪುರ ಹಬ್ಬಿದ್ದರೆ ಪಶ್ಚಿಮದಲ್ಲಿ ಆಫ್ರಿಕಾದವರೆಗಿನ ಸಮುದ್ರ ನಮ್ಮದೇ.ಇಲ್ಲಿನವರ ಆಡುಭಾಷೆ "ಕುಂದಾಪುರ ಕನ್ನಡ" ತನ್ನದೇ ಆದ ವಿಶಿಷ್ಟ ಛಾಪನ್ನು ಹೊಂದಿದೆ.ಸಂಧಿ ಸಮಾಸ ಛಂದೋಪಾದಿಯಾಗಿ ಸಕಲ ವ್ಯಾಕರಣ ಬೀಜ ಮಾತ್ರೆಗಳನ್ನು ಕರತಲಾಮಲಕ ಮಾಡಿಕೊಂಡಿರುವ ಪ್ರಗಲ್ಫ ಪಂಡಿತರಿಗೂ ಬೆವರಿಳಿಸುವ ಭಾಷೆ ಇದು. ಅಂತಹ ಪಂಡಿತರು ಇಲ್ಲಿಗೆ ಬಂದಾಗ ಅವರ ಪ್ರತಿಭೆಗೆ ಮೆಚ್ಚಿ ನೀವು "ಮಹಾ ಸಮರ್ಥರಿದ್ದೀರಾ!!" ಎಂದು ಯಾರಾದರು ಕುಂದಾಪುರ ಕನ್ನಡದಲ್ಲಿ ಮೆಚ್ಚುಗೆಯ ಮಾತನ್ನಾಡಿದರೆ ಅವರಿಗೆ ಅದು "ನೀವು ಮಾಂಸ ಮಾರ್ತಿದ್ದೀರಾ ??? ಎಂದು ಕೇಳಿಸಿ ಸಿಟ್ಟು ಬಂದರೆ ಅಚ್ಚರಿಯೇನಿಲ್ಲ. ಹೀಗೆ ಗೊತ್ತಿಲ್ಲದವರು ಗತ್ತಿನಿಂದ ಮಾತನಾಡಲು ಹೋದರೆ ಅಭಾಸವಾಗಿ ಮರ್ಯಾದೆಗೆ ಕುತ್ತು ಬರುವುದು ಖಂಡಿತ.

ಕೆಲಕಾಲ ಹಿಂದೆ "ಇನ್ನೂ ನಗರದ ಹವೆ ತಟ್ಟಿಲ್ಲ"  ,"ಆಧುನಿಕ ಪ್ರಪಂಚದ ಬಿಸಿ ಮುಟ್ಟಿಲ್ಲ" ಎಂಬಂತ್ತಿದ್ದ ಕುಂದಾಪುರ ಕಳೆದ ಐದಾರು ವರ್ಷಗಳಲ್ಲಿ ಸಾಮಾಜಿಕವಾಗಿ,ಆರ್ಥಿಕವಾಗಿ,ಶೈಕ್ಷಣಿಕವಾಗಿ ವ್ಯಾಪಾರ ವಹಿವಾಟುಗಳಲ್ಲಿ ಭಾರೀ ಅಭಿವೃದ್ಧಿಯನ್ನು ಸಾಧಿಸಿದೆ.ತಾಲ್ಲೂಕು ಕೇಂದ್ರವಾಗಿರುವ ಇದು ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವೂ ಹೌದು. ಕಾರವಾರ ಭಟ್ಕಳ ಮಂಗಳೂರು ಸಿದ್ದಾಪುರ ಶಂಕರನಾರಾಯಣ ಮುಂತಾದ ದೂರದ ಪ್ರದೇಶದಿಂದ ಶನಿವಾರ ಸಂತೆಗೆಂದು ಬರುವ ವ್ಯಾಪಾರಿಗಳೇ ಇದಕ್ಕೆ ಸಾಕ್ಷಿ. ಸಂಜೆ ಹೊತ್ತಿನಲ್ಲಿ ಗಿಜಿಗುಟ್ಟುವ ಶಾಸ್ತ್ರಿ ಪಾರ್ಕು, ತಲೆ ಎತ್ತಿ ನಿಂತಿರುವ ಶೋರೂಮ್-ಶಾಪಿಂಗ್ ಮಾಲ್ ಗಳು ಅರೆಘಳಿಗೆಯೂ ಪುರುಸೊತ್ತಿಲ್ಲದ ಅಂಗಡಿಗಳು ತುಂಬಿ ಚಲಿಸುವ ಬಸ್ಸುಗಳು ಮುಂದುವರಿಯುತ್ತಿರುವ ಪ್ರಪಂಚದೊಂದಿಗೆ ಕುಂದಾಪುರವೂ ರಿದಂ ನಲ್ಲಿದೆ ಎಂಬ ಸತ್ಯವನ್ನು ಸಾರಿ ಹೇಳುತ್ತವೆ. ಸಾಮಾಜಿಕ ಪ್ರಗತಿಗೆ ಸಮಾನಾಂತರವಾಗಿ ಜನರ ಯೋಚನಾಲಹರಿಯಲ್ಲೂ ಬೆಳವಣಿಗೆ/ಬದಲಾವಣೆ ಕಾಣಿಸುತ್ತಿದೆ. ಕಾಲೇಜು ವ್ಯಾಸಂಗಕ್ಕೆ ಬರುವ ಹುಡುಗಿಯರು ಎನ್ನುವುದಕ್ಕಿಂತ ಅವರ ವಸ್ತ್ರ ವಿನ್ಯಾಸವೇ ಮಾನಸಿಕ ಬದಲಾವಣೆಗೆ ನಿದರ್ಶನ ಎನ್ನುವುದು ಹೆಚ್ಚು ಸಮಂಜಸ. ಸೊಂಟದ ಸುತ್ತಳತೆಗಿಂತ ಅರ್ಧ ಇಂಚು ಕಡಿಮೆ ಸುತ್ತಳತೆ ಇರುವ, ಡ್ರಾಗನ್-ಹಾವು-ಚೇಳು ಮುಂತಾದ ವಿಷಜಂತುಗಳ ಕಸೂತಿ ಹೊಂದಿರುವ ಜೀನ್ಸ್ ಪ್ಯಾಂಟ್ ಹಾಕಿರುವ ಎಲ್ ಕೆ ಜಿ ಪೋರನು ಮಾನಸಿಕ ಬದಲಾವಣೆಯ ಕೂಸಲ್ಲದೆ ಮತ್ತೇನು ??

ಹೀಗೆ ಭಾಷೆ ಜನರ ಜೀವನಕ್ರಮ ಎಲ್ಲದರಲ್ಲೂ ವೈವಿಧ್ಯ ಹೊಂದಿರುವ ಊರೇ ಕುಂದಾಪುರ. ಹಿಂದೂ - ಮುಸ್ಲಿಂ- ಕ್ರೈಸ್ತ ಎಲ್ಲ ಮತದ ಜನರನ್ನು ಹೊಂದಿರುವ ಎಲ್ಲರಲ್ಲೂ ಸಾಮರಸ್ಯ ಕಾಣಬಹುದಾದ ಊರು ಕುಂದಾಪುರ. ಆನೆಗುಡ್ಡೆ ವಿನಾಯಕ ಕೊಲ್ಲೂರು ಮೂಕಾಂಬಿಕೆ ಕೋಟಿಲಿಂಗೇಶ್ವರ ಮುಂತಾದ ದೇವರಿಂದ ಬೊಬ್ಬರ್ಯ ಜಟಕಾ ಹಾಯ್ಗುಳಿ ಮುಂತಾದ ದೈವಗಳಿಂದ ಅನುಗ್ರಹಿಸಲ್ಪಟ್ಟ, ಯೇಸು - ಅಲ್ಲಾ ಎಲ್ಲರಿಂದಲೂ ಆಶೀರ್ವಾದ ಪಡೆದಿರುವ ಪುಣ್ಯಭೂಮಿ ಕುಂದಾಪುರ.
                            
ಕೋಟಿಲಿಂಗ ಆನೆಗುಡ್ಡೆ ಕೋಟೆ ಆಂಜನೇಯ
ಕುಂದೇಶ್ವರ ಮೂಕಾಂಬಿಕೆ ವಿಠಲ ದತ್ತಾತ್ರೇಯ||
ಬೊಬ್ಬರ್ಯ ಕಲ್ಲುಕುಟಿಕ ಜಟಕಾ ಚರ್ಚು ದರ್ಗಾ
ಎಲ್ಲ ಇಲ್ಲೇ ಇರುವ ಇದುವೆ ಭೂಮಿಗಿಳಿದ ಸ್ವರ್ಗ||

ಮುಂದಿನ ಕೆಲವು ಲೇಖನಗಳಲ್ಲಿ ನಿಮಗೆ ಸ್ವರ್ಗದ ದರ್ಶನ ಮಾಡಿಸುತ್ತೇನೆ. ನಮ್ಮೂರ ಸವಿಬೆಲ್ಲದ ರುಚಿಯನ್ನು ಆಸ್ವಾದಿಸಲು ನೀವೂ ಬರುತ್ತೀರಿ ತಾನೇ?? ಒಬ್ಬ ಕುಂದಾಪುರದವನಾಗಿ ಸಮಸ್ತ ಕುಂದಾಪುರದ ಜನತೆಯ ಪರವಾಗಿ ನಿಮಗೆ ನಮ್ಮೂರಿಗೆ ತುಂಬು ಹೃದಯದ ಸ್ವಾಗತವನ್ನು ಕೋರುತ್ತೇನೆ.
"ನಿಮಗೆಲ್ಲರಿಗೂ  WELCOME TO KUNDAPUR"



Comments

ಲಾಯಕ್ಕಿತ್ತು ಮರ್ರೆ..............
PARAANJAPE K.N. said…
ಚಾಂಗ್ ಆಸ್ರೆ ?
ಥ್ಯಾಂಕ್ಸ್ ಮಾಮ್ಮಾ
PaLa said…
ಕುಂದಾಪ್ರ ಹತ್ರ ಇಪ್ಪು ಕುದ್ರುಗಳ ಬಗ್ಗೆ ಹೇಳ್ಲೇ ಇಲ್ಲ ಕಾಣಿ
Vishwanath said…
I had very cute and finest friend in Kundapura.
Unknown said…
ಹೋಯ್ ಚಂದಾ ಮಾಡಿ ಬರ್ದಿರಿ ಮರ್ರೆ... ಪುರ್ಸೊತ್ ಇದ್ದಲ್ ಓದುಕ್ ಖುಷಿ ಆತ್

Popular posts from this blog

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಆಪೀಸಾಯಣ

ನವೆಂಬರ್ 22 ರಂದು ಆಪೀಸಿನಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಪೀಸಿನಲ್ಲಿರುವವರ ಹೆಸರನ್ನೆಲ್ಲ ಸೇರಿಸಿ ಹೊಸೆದ ಪದ್ಯ. ನೀಲಿ  ಬಣ್ಣದಲ್ಲಿ ಬರೆದವು ಅವರ ಹೆಸರುಗಳು. ದೇವಾದಿದೇವತೆಗಳು ಸಭೆಯನ್ನು ನಡೆಸಿ ಸಭೆಯೊಳಗೆ ಸು ಮಧು ರ ಕನ್ನಡವ ಬಡಿಸಿ || ಎಲ್ಲಾ ದೇವರಿಗೂ ಕನ್ನಡವು ಹಿಡಿಸಿ ಬಂದು ಕೂತಿಹರೆಲ್ಲ tatasky ODC ||               ಕೃಷ್ಣ ನಿಹನಿಲ್ಲಿ  ಇಹನು   ರಘು-ರಾಮ                     ಮಂಜುನಾಥ ರು ತ್ರಿಮೂರ್ತಿಯಲಿ ಹರಸಿರುವ ಧಾಮ ||                     ಪಾವನ-ಪುನೀತರಾಗಿ ಕೇಳಿ ಮೋಹನ ನ ಬಾನ್ಸುರಿ                     ಸ್ವಪ್ನ ದಲ್ಲಷ್ಟೇ ಸಿಗುವುದು ಇಂಥಹ ಚಾನ್ಸು ರೀ... || ವಿಘ್ನ ದಿಂ ಕಾಯುತಿಹ ದ್ವಾರದಲೇ ಬೆನಕ ಎಲ್ಲ ದೇವರಿಗೂ ಶರಣು ನಮ್ಮ ಗುರು ಗಳ ತನಕ ಸಂಕಟದಿ ಕರೆದೊಡನೆ ಸ್ವಾಮಿ ವೆಂಕಟೇಶ ಹರುಷ ದಲಿ ಕಳಿಸುವ...