Skip to main content

ಕುಂಭಕರ್ಣನ ಡೈರಿಯಿಂದ

ಲೋ ಪಚ್ಚು ನೀನು ಮೂಲತಃ ಯಾವ ಊರಿನವನೋ ??ಬೆಳಿಗ್ಗೆ ಎದ್ದವನೇ ಪ್ರಶಾಂತನಿಗೆ ಕೇಳಿದೆ . ಯಾಕೋ ಏನಾಯ್ತು ?? ಎಂದ. ಏನಿಲ್ಲ ಗುರುವಾರ ರಾತ್ರಿ ನಿದ್ರೆಯಲ್ಲಿ ನೀನು ಕೂಚಿಪುಡಿ ಮಾಡ್ತಾ ಇದ್ದೆ ಆಗ ನೀನು ಆಂಧ್ರದವ ಎಂದುಕೊಂಡೆ . ಮೊನ್ನೆರಾತ್ರಿ ಕಥಕ್ಕಳಿಯಲ್ಲಿ ನಿನ್ನ talent ನೋಡಿ ನೀನು ಪಕ್ಕ ಮಲ್ಲು ಅಂದು ಡಿಸೈಡ್ ಮಾಡಿದೆ .ಆದರೆ ನಿನ್ನೆ ನೀನು ಮಾಡಿದ ಯಕ್ಷಗಾನ ನೋಡಿ full confuse ಆದೆ . ಏನ್ Performance ಲೇ ಅದು . ಗಣಪತಿ ಪೂಜೆ ಮುಗಿದು ಇನ್ನೇನು ಕೋಡಂಗಿ ಪ್ರವೇಶ ಮಾಡಬೇಕೆನ್ನುವಾಗ ನಿಲ್ಲಿಸಿಬಿಟ್ಟೆ . ಅದನ್ನು ನೋಡಿ ನೀನು ಕನ್ನಡಮ್ಮನ ಕಣ್ಮಣಿ ಎಂದು conclude ಮಾಡಿದ್ದೇನೆ ಸರೀನಾ?? ಏನೇ ಹೇಳು ನಿನ್ನದು ಬಹುಮುಖ ಪ್ರತಿಭೆ ಕಣೋ ಎಂದೆನು. ಏನ್ ಮಾಡ್ಲೋ ?? ಅಪ್ಪನದು Job Transfer ಆಗುತ್ತಾ ಇರುತ್ತೆ ಅದಕ್ಕೆ ಹೀಗೆ ಆಗ್ತಾ ಇದೆ ಎಂದ . ಸ್ವಲ್ಪ ದಿನದ ನಂತರ "ಲೋ ಪಚ್ಚು ನಿಮ್ಮಪ್ಪಂಗೆ ಇಂಗ್ಲೆಂಡ್ Transfer ಆಯ್ತಾ ?? ಎಂದು ಕೇಳಿದೆ . "ಯಾಕೋ ???" ಎಂದ . ಏನಿಲ್ಲ ನಿನ್ನೆ ರಾತ್ರಿ ನೀನು Brake Dance ಮಾಡ್ತಾ ಇದ್ದೆ ಅದಕ್ಕೆ Doubt ಬಂತು ಎಂದೆನು .

ನಿದ್ದೆ !!!!! ಅದರ ಸವಿಯನ್ನು ನಾನು ವರ್ಣಿಸಬೇಕೆ?? ತುರಿಕೆ ಮತ್ತು ನಿದ್ದೆ ಮಾಡಿದಷ್ಟು ಹೆಚ್ಚಾಗುವುದಲ್ಲದೆ ಇನ್ನೂ ಸ್ವಲ್ಪ ಮಾಡಿದರೆ ಹಾಯಾಗಿರುತ್ತದೆ ಎಂದೆನಿಸುತ್ತದೆ . ಎಲ್ಲಾ ದೇವರ ಅನುಗ್ರಹವಿದ್ದವನೊಡನೆ ನಿದ್ರಾದೇವಿ ಮುನಿಸಿಕೊಂಡರೆ ಅವನಿಗೆ ಜೀವನದಲ್ಲಿ ಸುಖ ಶಾಂತಿ ಉಂಟೆ ?? ಅದಕ್ಕೆ ಭಾರೀ ಕಷ್ಟಜೀವಿಯನ್ನು "ನಿದ್ದೆ ಬಿಟ್ಟು ಕೆಲಸ ಮಾಡುತ್ತಾನೆ " ಅನ್ನುತ್ತಾರೆ . "ನಿದ್ರಾಭಂಗಂ ಮಹಾಪಾಪಂ " ಎಂಬ ಮಾತು ಜೀವನದಲ್ಲಿ ನಿದ್ರೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ .ಚಳಿಗಾಲದಲ್ಲಿ ಮೆತ್ತನೆಯ ಹಾಸಿಗೆ ಮತ್ತು ತಲೆದಿಂಬು ,ದಪ್ಪನೆಯ ಹೊದಿಕೆ ಇದ್ದು ಫ್ಯಾನನ್ನು 2 ರಲ್ಲಿಟ್ಟು ಬೋರಲು ಮಲಗಿ ಮುಸುಕು ಹಾಕಿಕೊಂಡರೆ !!!!!! ಏನು ಸುಖ !!! ಅದರಲ್ಲೂ ಮರುದಿನ ಪರೀಕ್ಷೆ ಇದ್ದು , ತಯಾರಿ ಶೂನ್ಯವಾಗಿದ್ದು ಅನಿವಾರ್ಯವಾಗಿ ಓದಲೇ ಬೇಕೆಂಬ ಹಠ ತೊಟ್ಟು ಕೂತಿರಬೇಕಾದರೆ ಕರೆದವರಂತೆ ಬಂದು ಕಣ್ಣ ಮಂಟಪವನ್ನು ಅಲಂಕರಿಸುವ "ಮಂಪರು ನಿದ್ದೆ " !!! ಅದರ ಸವಿಯನ್ನು ವರ್ಣಿಸಲು ಶಬ್ದ ಭಂಡಾರ ಸಾಲದು . ನಿಮಗಿದರ ಅನುಭವವಿಲ್ಲದಿದ್ದರೆ ಯಾವುದಾದರೂ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ಹುಡುಗನನ್ನು ಕೇಳಿ .

ಇನ್ನು ನನ್ನ ಇನ್ನೊಬ್ಬ roommate ಗುನ್ನು ಅಲಿಯಾಸ್ Garbage ಗಿರೀಶ . ಪರಮ ದೈವಭಕ್ತ . ರಾತ್ರಿಬೆಳಗಾಗುವುದರೊಳಗೆ ಅಷ್ಟ ದಿಕ್ಪಾಲಕರಿಗೆ ಹಾಸಿಗೆ ಮೇಲಿನಿಂದಲೇ ಸಾಷ್ಟಾಂಗ ನಮಸ್ಕಾರ ಹಾಕಿ ಪ್ರಾತಃ ಕಾಲದಲ್ಲಿ ಸೂರ್ಯನಮಸ್ಕಾರಕ್ಕೆ ತಯಾರು. ನಿದ್ದೆಗಣ್ಣಲ್ಲೂ ಬಾಬಾ ರಾಮದೇವರ ಎಲ್ಲಾ ಆಸನಗಳನ್ನೂ ಹೇಳಿಕೊಟ್ಟವಂತೆ ಮಾಡಿ ಮುಗಿಸುವವ . ಅದೂ ಸ್ವಾತಿ ಮಳೆಹನಿಗೋಸ್ಕರ ತೆರೆದುಕೊಂಡಿರುವ ಚಿಪ್ಪಿನಂತೆ ಬಾಯ್ತೆರೆದು ಎದ್ದೋಡಿ ರಾಗದಲ್ಲಿ 3D Sound effect ನಲ್ಲಿ "ಗೊರ್ರ್........ ಸ್ಸ್ಸ್ಸ್ ಸ್ಸ್ಸ ...... ಎಂಬ ಸಿಂಹ ಘರ್ಜನೆಯೊಂದಿಗೆ .(ಎಂಥ ಕಿವುಡನಾದರೂ ಎದ್ದೊಡಬೇಕು ). ಒಂದು ದಿನ ಗುನ್ನು ಮತ್ತು ಪಚ್ಚು ಭರತನಾಟ್ಯದ ಜುಗಲ್ ಬಂಧಿ ಮಾಡುತ್ತಿದ್ದರು . ಮರುದಿನ ಗುನ್ನು ನ ಬಳಿ " ಅಲ್ವೋ ಪಚ್ಚುವಿನದ್ದು ನಿತ್ಯದ ಕಥೆ ಇದ್ದದ್ದೇ ....ನಿನ್ನೆ ನಿನಗೇನಾಯ್ತೋ ??" ಎಂದು ಕೇಳಿದೆ . ಎನಿಲ್ವೋ... ನಿನ್ನೆ ಆಪ್ತಮಿತ್ರ ಸಿನೆಮಾ ನೋಡಿದ್ನಲ್ವಾ ಅದ್ರಲ್ಲಿ ಆ ನಾಗವಲ್ಲಿ ಭರತನಾಟ್ಯ ಹಿಡಿಸ್ತು . ಅದಕ್ಕೆ ಹೀಗೆ ಆಗಿರಬಹುದು ಅಂದ . ಮರುದಿನ ರಾತ್ರಿ ಇವನು Football ನೋಡುತ್ತಿದ್ದದ್ದನ್ನು ಕಂಡು ರಾತ್ರಿ ಏನು ಕಾದಿದೆಯೋ ಎಂದು ಕಂಗಾಲಾದೆ. ಒಮ್ಮೆ ಶುಭ ಕಾರ್ಯನಿಮಿತ್ತ ಗುನ್ನುವಿನ ಮನೆಗೆ ಹೋದಾಗ ಎಲ್ಲರೂ ಸೇರಿ ಒಗಟು ಬಿಡಿಸುವ ಆಟ ಆಡುತ್ತಿದ್ದೆವು . ಆಗ 8 ವರ್ಷದ ಗುನ್ನುವಿನ ತಮ್ಮ " ರಾತ್ರಿ ಉಂಟು ಬೆಳಿಗ್ಗೆ ಇಲ್ಲ " ಎಂದು ಕೇಳಿದ . ನಾವೋ ಚಂದ್ರ -ನಕ್ಷತ್ರ -ಬಾವಲಿ-ಗೂಬೆ ಏನು ಹೇಳಿದರೂ ಇಲ್ಲ ಅನ್ನುತ್ತಿದ್ದಾನೆ . ಆಮೇಲೆ ಸರಿ ನೀನೆ ಹೇಳಪ್ಪ ... ಎಂದಾಗ "ಗಿರೀಶಣ್ಣನ ಲುಂಗಿ " ಎನ್ನುವುದೇ ?? ಇವನ ವಿಷಯ ಇಷ್ಟೇ ಅಲ್ಲ . ನಡುರಾತ್ರಿ ಬುದ್ಧನಂತೆ ಎದ್ದು ಕುಳಿತು 360* ಕತ್ತು ತಿರುಗಿಸಿ " ಬಾ ಮಚ್ಚಾ .... ಹೋಗೋಣಾ .... " ಎನ್ನುತ್ತಾನೆ . ಎಲ್ಲಿ ?? ಏನು?? ಎತ್ತ ?? ಗೊತ್ತಿಲ್ಲ... ನೀವೇನಾದರೂ ಆಗಲ್ಲ - ಹೋಗಲ್ಲ ಅಂದ್ರೆ ಇವನು ಪಾಗಲ್ಲಾಗಿ ಬಿಡ್ತಾನೆ . "ಇಲ್ಲ ಮಚ್ಚಾ .. ರಿಕ್ಷಾದವನು ಬರಲ್ವಂತೆ .. ನಾಳೆ Local train ನಲ್ಲಿ ಹೋಗೋಣ . ಅಂದ್ರೆ ಸುಮ್ಮನೆ ಮಲಗುತ್ತಾನೆ .

"ಸಮಾನ ಗುಣದವರು ಮಿತ್ರರಾಗುತ್ತಾರೆ " ಎಂಬ ಮಾತಿನಂತೆ ನನ್ನ Roommates ನಂತೆ ನಾನೂ ಕೂಡ ನಿದ್ರೆಯಲ್ಲಿ "ಪ್ರಚೋದನಕಾರಿ " ಭಾಷಣ ಮಾಡುತ್ತೇನೆ . ನನ್ನದು ಕೇವಲ ಶ್ರವ್ಯ ಮಾಧ್ಯಮ ಪಚ್ಚುವಿನಂತೆ ದೃಶ್ಯ ಮಾಧ್ಯಮವಲ್ಲ . "ಆಚಾರವಿಲ್ಲದ ನಾಲಿಗೆ ರಾತ್ರಿ ಮುಚ್ಕೊಂಡು ಮಲಗೋ ನಾಲಿಗೆ " ಎಂದು ಎಷ್ಟು ಹೇಳಿದರೂ ಅದು ಕೇಳುವುದಿಲ್ಲ . ಸಣ್ಣ ಪ್ರಾಯದಿಂದಲೇ ನಾನು ನಿದ್ರೆಯಲ್ಲಿ ಮಾತಾಡುತ್ತಿದ್ದೆ ಅದಕ್ಕೆ ಕಾರಣವೂ ಇದೆ . ಕೇಳಿ ....

ಅಣ್ಣನೊಡನೆ ಆಟ ಆಡುವಾಗ ಆಟದ ಮಧ್ಯೆ ವಾಗ್ಯುದ್ಧ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುತ್ತಿದ್ದ ನಾವು ಹೇಗೋ ಅಮ್ಮನನ್ನು ಒಲಿಸಿಕೊಂಡು ಈ ವಿಷಯ ಅಪ್ಪನ ಬಳಿ ತಲುಪದಂತೆ ನೋಡಿಕೊಳ್ಳುತ್ತಿದ್ದೆವು. ಬೆಳಿಗ್ಗೆ ಅಪ್ಪನಿಂದ ತಪ್ಪಿಸಿಕೊಂಡರೂ ರಾತ್ರಿ ಕನಸಿನಲ್ಲಿ ಅಪ್ಪನ ಪಂಚಾಯ್ತಿ ಕಟ್ಟೆ ಶುರು " ಸುಮಂಥಾ ..... ಇಲ್ಲಿ ಬಾ !!!!! ಅಪ್ಪನ ಆವಾಜ್ ಗೆ ನಿದ್ದೆಯಲ್ಲೇ ಬಾಯೊಣಗುತ್ತಿತ್ತು . ಆದರೂ ಆ ಗಾಢ ನಿದ್ದೆಯಲ್ಲೂ ನನ್ನ 7th sense 6th sense ಗೆ ಹೇಳುತ್ತಿತ್ತು. " ನೋಡು ಸುಮಂತಾ ನೀನು ಮಲಗಿದ್ದೀಯಾ ಇದು ಬರೀ ಕನಸು ಬಾಯಿ ಬಿಟ್ಟು ಬಕ್ರಾ ಅನ್ನಿಸ್ಕೊಬೇಡ ತೆಪ್ಪಗೆ ಮಲಗು ಎಂದು " ಇದರ ಹಿಂದೆಯೇ " ಸುಮಂಥಾ ......ಬಂದ್ಯೋ ಹೇಗೆ ??? ಕಣ್ಣು ಕೆಂಪು ಮಾಡಿ ಅಪ್ಪನ ತಾರಕ ಸ್ವರ. ಅಂಥಾ ಸಮಯದಲ್ಲಿ ಮನಸ್ಸು ಅಪ್ಪನ ಪೆಟ್ಟಿನಿಂದ ಬದುಕಲು ಬೇರೆ ಎಲ್ಲ Sense ನ್ನು ಬದಿಗೊತ್ತುತ್ತಿತ್ತು ಹಾಗೂ ಅಪ್ರಯತ್ನವಾಗಿ ನಾನು " ಬಂದೇ....." ಎಂದು ಕೂಗಿ ಎದ್ದು ಕೂತರೆ ನೋಡುವುದೇನು ?? ಅಕ್ಕ - ಅಣ್ಣ ಇಬ್ಬರೂ ಒಳ್ಳೆ ದೊಂಬರಾಟ ನೋಡುತ್ತಿರುವಂತೆ ನನ್ನನ್ನೇ ಗುರಾಯಿಸುತ್ತಿದ್ದಾರೆ ಮುಸಿ ಮುಸಿ ನಗುತ್ತಿದ್ದಾರೆ. ಆದರೆ ಆ ಅವಮಾನದಲ್ಲೂ ನನಗೆ ಅಪ್ಪನ ಪೆಟ್ಟಿನಿಂದ ತಪ್ಪಿಸಿಕೊಂಡ ಸಂಭ್ರಮ . ಅಷ್ಟೆ ಅಲ್ಲ ರಾತ್ರಿ ರಾಮಾಯಣದಿಂದ ರಾಜಕೀಯದ ವರೆಗೆ ಎಲ್ಲ ಕಾನೂನು ಮಾತಾಡುವ ನಾನು ಕೊನೆಯಲ್ಲಿ " ಮಚ್ಚಾ ನಾನೇನು ನಿದ್ದೆಯಲ್ಲಿ ಮಾತಾಡ್ತಾ ಇದ್ದೀನಿ ಅಂದುಕೊಂಡ್ಯಾ ?? " ಎಂದು ಕೇಳುತ್ತೀನಂತೆ. ತಾನು ನಿದ್ದೆಯಲ್ಲಿದ್ದೀನ ?? ಅಥವಾ ಇವನು ನಿದ್ದೆಯಲ್ಲಿದ್ದಾನಾ ?? ಎಂದು ಅವನಿಗೇ confusion ಆಗಬೇಕು .

ಇನ್ನು ಕನಸುಗಳು . ಎಂತೆಂಥಾ ಕನಸು ಬೀಳುವುದಿಲ್ಲ ?? ಅಜ್ಜಿಗೆ ಕನಸಿನಲ್ಲಿ ಕೃಷ್ಣ ಬಂದರೆ ಮೊಮ್ಮಗನಿಗೆ ಬರೀ ಗೋಪಿಕಾ ಸ್ತ್ರೀಯರು ಬರುತ್ತಾರೆ . ಗಂಗಾವತಿಯ ಪ್ರಾಣೇಶ್ ಅವರು ಹೇಳುವಂತೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡವನಿಗೆ ಕನಸಿನಲ್ಲಿ ಬರೀ ನಾಯಿಯೇ ಬರುತ್ತದಂತೆ ( ನಾಯಿ - ಸಿಂಡಿಕೇಟ್ ಬ್ಯಾಂಕಿನ ಲೋಗೋ ) . ಸಮುದ್ರದ ಮಧ್ಯೆ ಸಿಕ್ಕಿಬಿದ್ದಿರುವಂತೆ ಕನಸು ಕಾಣುವ ನಮ್ಮ ಅಮ್ಮನ ಕನಸಿನ ಕೊನೆಯಲ್ಲಿ ಅಪ್ಪ ಸ್ಕೂಟರ್ ತೆಗೆದುಕೊಂಡು ಬಂದು ಅಮ್ಮನನ್ನು ಕರೆದುಕೊಂಡು ಹೋಗುತ್ತಾರಂತೆ !!!!! ಇನ್ನು ಎಷ್ಟು ಸುಂದರ ಹುಡುಗಿಯರ ಕನಸಿನಲ್ಲಿ ಬಂದು ನಾನು ಅವರ ನಿದ್ದೆಗೆಡಿಸಿದ್ದೇನೋ ನಾನರಿಯೆ . :)

ಕನಸ ಮಾರುತಿಹೆ ಬನ್ನಿ ಕನಸುಗಳ ಜಾತ್ರೆಗೆ
ಬಸಿದುಕೊಳ್ಳಿರಿ ಕನಸನು ನಿಮ್ಮ ನಿದ್ದೆಯ ಪಾತ್ರೆಗೆ
ಇದರಲ್ಲಿಹುದು ದೊಡ್ಡ ಕನಸುಗಳ ಗಂಟು
ಎಲ್ಲ ಬಗೆಯ ಜನರಿಗೂ ಕನಸು ಇದರಲ್ಲುಂಟು

ವಿದ್ಯಾರ್ಥಿಗೆ ಕಾಲೇಜಿನಲ್ಲಿ ಸೀಟು
ರಾಜಕಾರಣಿಗೆ ಜನಗಳ ಓಟು||
ಪ್ರೇಮಿಗೆ ಪ್ರೇಯಸಿಯೊಡನೆ ಪಾರ್ಕು
ಇಂಜಿನಿಯರಿಂಗ್ ವಿದ್ಯಾರ್ಥಿಗೆ 35 ಮಾರ್ಕು ||

ಕಷ್ಟಜೀವಿಗೆ ಹೊಸ ಮನೆಯ ಕಟ್ಟುವುದು
ತೆಂಡೂಲ್ಕರ್ ಗೆ ಚೆಂಡು ಹೊರಗಟ್ಟುವುದು ||
ಸೊಳ್ಳೆ ಗೆ ಜನರನ್ನು ಕಚ್ಚುವುದು
ಷೋಡಷಿಗೆ ಲಿಪ್ ಸ್ಟಿಕ್ಕು ಹಚ್ಚುವುದು ||

ಕುಡುಕನಿಗೆ ಸಂಜೆ ಬಿಟ್ಟಿ ಬೀರಿನದು
TATA ಗೆ NANO ಕಾರಿನದು .
ಮುದುಕನಿಗೆ ಕೃತಕ ಹಲ್ಲಿನದು
ನನಗೋ ಹೊಸ ಆರ್ಟಿಕಲ್ಲಿನದು . :)

ಕನಸ ಮಾರುತಿಹೆ ಬನ್ನಿ ಕನಸುಗಳ ಜಾತ್ರೆಗೆ
ಬಸಿದುಕೊಳ್ಳಿರಿ ಕನಸನು ನಿಮ್ಮ ನಿದ್ದೆಯ ಪಾತ್ರೆಗೆ

ನಮ್ಮ ಜೀವನದ ಸುಮಾರು 1/3 ಭಾಗವನ್ನು ನಾವು ಮಲಗುವುದರಲ್ಲೇ ಹಾಗೂ ಮಲಗಿ ಕನಸು ಕಾಣುವುದರಲ್ಲಿ ಕಳೆಯುತ್ತೇವೆ. ಬರೆಯಲಿಕ್ಕೆ ಇನ್ನೂ ತುಂಬಾ ಇದ್ದರೂ ಈಗ ನಿದ್ದೆ ಎಳೆಯುತ್ತಿದೆ . ಆಆ..... ಆಕಳಿಕೆ . ನಿಮಗೆಲ್ಲರಿಗೂ ಸಕಲ ಆಯಾಸ ಪರಿಹಾರಕಿ ನಿದ್ರಾದೇವಿ ಒಲಿಯಲಿ ಹಾಗೂ ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಹಾರೈಸುತ್ತಾ ಕುಂಭಕರ್ಣನ ಡೈರಿಯನ್ನು ಮುಚ್ಚುತ್ತಿದ್ದೇನೆ . ಏನು ?? ನಾನು ಈ ಲೇಖನ ನಿದ್ದೆಯಲ್ಲಿ ಬರೆದದ್ದು ಅಂದುಕೊಂಡ್ರಾ ??? !!! ಇಲ್ಲ ಸ್ವಾ.. ಮೀ .... ಎ .. ಚ್ಚ .. ರ ...ವಿ ... ದ್ದೀ ... ನಿ .... ಅಮ್ಮಾ ......ಆಆ .......
==================ವಿಕಟಕವಿ ==================

Comments

ನಮಸ್ತೆ ,
ಲೋ ಸುಮಂತಣ್ಣ ನಿನ್ನಲ್ಲಿ ನಿಜವಾದ ವಿಕಟಕವಿ ಇದ್ದಾನೆ, ನಿಮ್ಮ ಕನಸಿನ ಪುರಾಣ ಓದಿ ತುಂಬಾ ಖುಷಿ ಆಯಿತು..

ಕುಡುಕನಿಗೆ ಸಂಜೆ ಬಿಟ್ಟಿ ಬೀರಿನದು
TATA ಗೆ NANO ಕಾರಿನದು
ಮುದುಕನಿಗೆ ಕೃತಕ ಹಲ್ಲಿನದು
ನನಗೋ ಹೊಸ ಆರ್ಟಿಕಲ್ಲಿನದು

ಈ ಸಾಲುಗಳು ಚೆನ್ನಾಗಿದೆ ಇಷ್ಟವಾಯ್ತು :)
Unknown said…
the new get up of ur blog is nice.like the last line of ur poem not only u but we are also dreaming of ur article

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ