Skip to main content

ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ .....

ಲೋ ಸುಮಂತಾ ...... ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ ಸುಧಾರಿಸಿಕೊಂಡು " ಹೌದೋ ನನ್ನ ತಲೆಯಲ್ಲಿ ಒಳ್ಳೆ ಬುದ್ಧಿ ತುಂಬಿದೆ ನಿನ್ನ ಥರ ಗೊಬ್ರ ಸಗಣಿ ತುಂಬಿದ್ದರೆ ನನ್ನ ಕೂದಲಿಗೂ ಪೋಷಣೆ ಸಿಕ್ಕಿ ಸೊಂಪಾಗಿ ಬೆಳೆದಿರೋದು" ಅಂಥ ಆವಾಜ್ ಹಾಕಿ ಅವನ ಬಾಯಿ ಮುಚ್ಚಿಸಿದೆ .ಇರಲಿ ಬಿಡಿ ಮೊದಮೊದಲು ಹೀಗೆ ಯಾರಾದರೂ ಹೇಳಿದರೆ ನನಗೆ ಸ್ವಲ್ಪ ಬೇಜಾರಾಗ್ತಿತ್ತು ಈಗ ಅಭ್ಯಾಸ ಆಗಿ ಹೋಗಿ ಬಿಟ್ಟಿದೆ . ಅದೇನೋ ಹೇಳ್ತಾರಲ್ಲ "ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಹಾಗೇನೆ . ದಿನಾ ಹೋಗೋ ನನ್ನ ಕೂದಲಿಗೆ ಬೇಜಾರ್ ಮಾಡ್ಕೋಳ್ಲೋದಕ್ಕೂ ಸಮಯ ಇಲ್ಲದಾಗಿದೆ .

ಮೊನ್ನೆ "ಥಟ್ ಅಂತ ಹೇಳಿ " ನೋಡ್ತಾ ಇದ್ದೆ ಅದರ ನಿರೂಪಕರು "ಪ್ರತಿದಿನ ಮನುಷ್ಯರ 40 ಕೂದಲು ಉದುರುತ್ತದೆ ಹಾಗೆ ಬೆಳೆಯುತ್ತದೆ "ಅಂಥ ಹೇಳಿದ್ರು . ನನ್ನ ವಿಷಯದಲ್ಲಿ ಇದು ಸ್ವಲ್ಪ ಎಡವಟ್ಟಾಗಿದೆ . ಬ್ರಹ್ಮನ Program ನ್ನು testing ಮಾಡದೆ production ಗೆ release ಮಾಡಿರಬೇಕು . ಉದುರೋ ವಿಷಯದಲ್ಲಿ ನಲವತ್ತಕ್ಕೆ ಒಂದು ಹತ್ತು ಸೇರಿಸಿಯೇ ಉದುರುತ್ತದೆ ಆದರೆ ಬೆಳೆಯೋ program ಕೆಲಸ ಮಾಡುತ್ತಿಲ್ಲ . ಇದು ತಪ್ಪಲ್ಲವೇ ??. ಈ ಕೂದಲಿನ ಮೇಲೆ ಕಾಮೆಂಟರಿ ಕೇಳಿ ಕೇಳಿ ಸುಸ್ತಾಗಿದ್ದೇನೆ .ಕೆಲವೊಮ್ಮೆ ಕೊಲೆ ಮಾಡುವಷ್ಟು ಸಿಟ್ಟು ಬರುತ್ತದೆ .ಈಗ ನೀವೇ ನೋಡಿ .....

ಮೊನ್ನೆ ನಮ್ಮ ಮನೆಯ rent Agreement renew ಮಾಡುವಾಗ ಕಾರ್ಯನಿಮಿತ್ತ ಬ್ರೋಕರ್ ಬಳಿ ಹೋಗಿದ್ದೆ . ಅವನು ಅವನ ಹೊಸ Client ಗೆ " ಇಲ್ಲಿ ಮತ್ತೊಂದು plot ಖಾಲಿ ಇದೆ " ಎಂದು ಹೇಳಿ ನನ್ನ ತಲೆಯನ್ನು ನೋಡುತ್ತಾ ಕೂತರೆ ??? ಸಿಟ್ಟು ಬರುವುದಿಲ್ಲವೆ ???ನಾನೇನು ಮಾಡಲಿ ?? ಹಣೆಯ ಮೇಲೆ "Not for sale" ಎಂದು ಬೋರ್ಡ್ ಹಾಕಿ ತಿರುಗಲೇ??

ಕ್ಷೌರಕ್ಕೆಂದು ಹೋದಾಗ " ಗುರೂ ... ಜೋನ್ ಅಬ್ರಾಹಂ ,ಶಾರುಕ್ ಖಾನ್ ಥರ Fomous personality ಗಳ Hair Style ಮಾಡೋ ಅಂದರೆ ಆ ಬಡ್ಡೀಮಗ " ಸಾರ್ .... Natural ಆಗಿ ನಿಮ್ಮದು ಘಜಿನಿ ಕಟ್ ಇದೆ ಇದು ಬಿಟ್ಟು ಬೇರೆ Fomous Personality ಬೇಕು ಅಂದರೆ ಗಾಂಧೀಜೀದು ಮಾಡಬಹುದು " ಅನ್ನೋದೇ ??? ಸಿಟ್ಟು ಬಂದು ಅಲ್ಲಿಂದ ಹೊರನಡೆದು ಬೇರೆ ಸೆಲೂನ್ ಗೆ ಹೋದೆ . ದೊಡ್ಡ ಕ್ಯೂ ಇತ್ತು . ಆದರೂ ನಾನೂ ಹೋಗುತ್ತಲೇ ಸೇಲೂನಿನವನು ಮೊದಲು ನಿಮಗೆ ಕಟ್ಟಿಂಗ್ ಮಾಡುತ್ತೇನೆ ಬನ್ನಿ ಸಾರ್ ... ಅಂದ . ಆಯ್ತೆಂದು ಕೂತು "ಏನಪ್ಪಾ ನಂಗೆ ಯಾಕೆ First Preference ಕೊಟ್ಟೆ ಎಂದು ಕೇಳಿದರೆ ಸಾರ್ ...ಅವರಿಗೆ ಕಟ್ಟಿಂಗ್ ಮಾಡ್ಲಿಕ್ಕೆ ಅರ್ಧ ಗಂಟೆ ಆಗುತ್ತೆ ನಿಮ್ಮದು ಎರಡು ನಿಮಿಷದಲ್ಲಿ ಮುಗಿಯುತ್ತಲ್ಲ ... ಅದಕ್ಕೆ ಅನ್ನುವುದೇ ??? ಅಷ್ಟಲ್ಲದೆ ಕಟ್ಟಿಂಗ್ ಆದ ಮೇಲೆ ನಿತ್ಯದಂತೆ 50/- ಕೊಟ್ಟೆ . ಸಾರ್ ... ನಾನು ಕೆಲಸಕ್ಕೆ ಸರಿಯಾಗಿ ಹಣ ತಗೊಳ್ಲೋನು. ಅಂಥ ಹೇಳಿ 20/- ವಾಪಾಸ್ ಕೊಡುವುದೇ ??? ಅವನ ನಿಯತ್ತಿಗೆ ಶಾಪ ಹಾಕುತ್ತ ಮನೆಗೆ ಹೋದೆ .

ಇತ್ತೀಚಿಗೆ ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬಂದ ನನ್ನ ಒಬ್ಬ ಗೆಳೆಯನೊಟ್ಟಿಗೆ ನಾನು ತಿರುಗುತ್ತಿದ್ದೆ . ಅಕಸ್ಮಾತ್ ಆಗಿ ದಾರಿಯಲ್ಲಿ ಸಿಕ್ಕಿದ ನಮ್ಮ ಗೆಳೆಯನೊಬ್ಬ ಏನೋ ಇಬ್ಬರೂ ಒಟ್ಟಿಗೆ ತಿರುಪತಿಗೆ ಹೋಗಿ ಬಂದಿರಾ ?? ನನ್ನನ್ನು ಕರೆಯಲೇ ಇಲ್ಲ ಎಂದರೆ ನಾನು ಏನು ಹೇಳಲಿ ?? ಇಲ್ವೋ ... ಇವನು ಮಾತ್ರ ತಿರುಪತಿಗೆ ಹೋಗಿ ಕೂದಲೊಪ್ಪಿಸಿ ಬಂದ ನನಗೆ ಹೋಗಲು ಟೈಮ್ ಇರಲಿಲ್ಲ ಅದಕ್ಕೆ ಆ ತಿಮ್ಮಪ್ಪ ಅವನೇ ಖುದ್ದಾಗಿ ನನ್ನ ಕೂದಲು ತೆಗೆದುಕೊಂಡ ಎಂದೆನು.

ನವೆಂಬರ್ ನಲ್ಲಿ ಕಾರ್ಯನಿಮಿತ್ತ ಬಿಜಾಪುರಕ್ಕೆ ಹೋಗಿದ್ದೆ . ಅಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಾಗ ಒಬ್ಬ ಮುದುಕ ನನ್ನನ್ನು ಕಂಡವನೇ ನನ್ನನ್ನು ಬಿಗಿದಪ್ಪಿಕೊಂಡು ಗೊಳೋ ಎಂದು ಅಳಲಾರಂಭಿಸಿದ. ನಾನು ಎಲ್ಲೋ ಅವರಿಗೆ ನನ್ನನ್ನು ಕಂಡು ಮನೆ ಬಿಟ್ಟು ಓಡಿ ಹೋದ / ಮನೆಯಿಂದ ದೂರ ಇರುವ ತಮ್ಮ ಮಗನ ನೆನಪಾಗಿರಬೇಕು ಎಂದು ಭಾವಿಸಿ, " ಏನ್ ಸಾರ್ ಇಷ್ಟಕ್ಕೆಲ್ಲ ಅತ್ತರೆ ಹೇಗೆ ?? ಹುಡುಗ್ರು ಪ್ರಾಯಕ್ಕೆ ಬಂದ ಮೇಲೆ ಕೆಲಸಕ್ಕಂತ ಊರೂರು ಅಲೆಯದೇ ಮನೆಯಲ್ಲೇ ಕೂತರೆ ಸಂಸಾರ ಸಾಗುವುದು ಹೇಗೆ ?? ಇವತ್ತೋ ನಾಳೆನೋ ಬರ್ತಾನೆ ಸಾರ್ ನಿಮ್ಮ ಮಗ .. ಖಂಡಿತ .... ಎಂದು ಸಮಾಧಾನ ಮಾಡಿದೆ . ಅದಕ್ಕವನು ರೀ ಯಪ್ಪಾ ... ನನ್ನ ಮಗ ನಮ್ ಜೊತೆಗೆ ಮನೆಯಾಗೆ ಅವ್ನೆ .... ಆದ್ರ ನಿನ್ ತಲಿ ನೋಡಿ ಈ ಸಾರಿ ಬರಗಾಲದಿಂದ ಒಣಗಿ ಹೋದ ನಮ್ ಕಬ್ಬಿನ ಗದ್ದೆ ಜ್ಞಾಪಕ ಬಂತ್ರಿ ..... ಎಂದು ಕಣ್ಣು ಮೂಗು ಒರೆಸಿಕೊಂಡು ಮತ್ತೆ ಅಳಲು ಶುರು ಮಾಡಿದರೆ ?? ಆ ರಾತ್ರಿ ನನಗೆ ನಿದ್ದೆ ಹೇಗೆ ಬರಬೇಕು ನೀವೇ ಹೇಳಿ .


ಈಗ ಈ ಉದುರೋ ಕೂದಲಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ . ಅಲೋಪತಿ ,ಹೋಮಿಯೋಪತಿ , ಆಯುರ್ವೇದ ,ವಿಜ್ಞಾನ , ಹಿಮಾನಿ , ಪ್ಯಾರಾಶೂಟ್, ನವರತ್ನ ತೈಲ, ತೆಂಗಿನೆಣ್ಣೆ ,ಹರಳೆಣ್ಣೆ ,ಸೀಗೆಕಾಯಿ ಪುಡಿ , ಕ್ಲಿನಿಕ್ ಪ್ಲಸ್ , ಆಲ್ ಕ್ಲೀಯರ್ ,ಅಪ್ನಾ ಖಯಾಲ್ ರಖ್ನಾ ಅನ್ನುತ್ತಾ ಗಾರ್ನೀರ್ , ತಲೆ ಮತ್ತು ಭುಜ (Head and shoulders) , ಯೋಗ, ಧ್ಯಾನ ಇವೆಲ್ಲದರ ಪ್ರಯೋಗ ನಡೆಸಿ ಸೋತು ಹೋದೆ . ಜಪ್ಪಯ್ಯ ಅಂದರೂ ಒಂದು ಕೂದಲು ಜನ್ಮ ಪಡೆಯಲಿಲ್ಲ . ಇನ್ನು Fevicol ಹಾಕಿ ಅಂಟಿಸಿ ಕೊಳ್ಳೋದು ಮತ್ತು ಯೂರಿಯಾ ಸುಫಲಾ ದಂತಹ ರಸಗೊಬ್ಬರ ಹಾಕಿಕೊಳ್ಳುವುದು ಮಾತ್ರ ಬಾಕಿ .ಅಥವಾ ಮೋಡ ಬಿತ್ತನೆಯಂತೆ ಕೇಶ ಬಿತ್ತನೆಯನ್ನು ಸರ್ಕಾರ ಹಮ್ಮಿಕೊಳ್ಳುತ್ತದೋ ಎಂದು ಕಾದು ನೋಡುತ್ತಿದ್ದೇನೆ .

"Dude.... ನಮ್ಮ ಮನೆಯ ಹತ್ರ ಒಬ್ರು ನಾಟಿ ವೈದ್ಯರಿದ್ದಾರೆ . ಅವರು ದನದ ಜೊಲ್ಲು ತಾಗಿದರೆ ಕೂದಲು ಬೆಳೆಯುತ್ತೆ ಅಂದ್ರು" ರಂಗ ಅರುಹಿದ . ಇಡೀ ಮುಳುಗಿದವನಿಗೆ ಚಳಿ ಏನು ?? ಇದೂ ಕೂಡ ನೋಡಿಯೇ ಬಿಡೋಣ .. ಎಂದು 2 ವಾರ ಬೆಳಿಗ್ಗೆ ಬೇಗ ಎದ್ದು ಪಕ್ಕದ ಮನೆಯವರ ಕೊಟ್ಟಿಗೆಗೆ ದೌಡಾಯಿಸಿದೆ . ದನವೋ .... ಸಿಕ್ಕಿದ್ದೇ ಛಾನ್ಸು ಎಂದು ನನ್ನ ತಲೆಯನ್ನು ನೆಕ್ಕಿದ್ದೇ ನೆಕ್ಕಿದ್ದು . ಉಹೂಂ .... ಅರ್ಧ ಕೂದಲು ಬರಲಿಲ್ಲ . ಸ್ವಲ್ಪ ದಿನದ ನಂತರ ಪಕ್ಕದ ಮನೆಯ ಅಂಕಲ್ ಮನೆಗೆ ಕರೆದರು . ಹೋದ ತಕ್ಷಣ ಕಾಫಿ ಕೊಟ್ಟು . "ಏನ್ ತಲೆ ಸಾರ್ ನಿಮ್ಮದು .... ಅಂದರು . ನಾನು ಇವರೆಲ್ಲೋ ನನ್ನ ಲೇಖನಗಳನ್ನು ಓದಿ ಮೆಚ್ಚಿರಬೇಕು ಎಂದುಕೊಂಡು ಧನ್ಯವಾದ ಅನ್ನುವುದಕ್ಕೆ ಮೊದಲೇ .... ಒಂದು ವಾರದಿಂದ ನಮ್ಮ ಹಸು ಒಂದೂವರೆ ಲೀಟರ್ ಹಾಲು ಹೆಚ್ಚಿಗೆ ಕರೀತಾ ಇದೆ ಎನ್ನುವುದೇ ??? ಬಿಸಿ ಇಲ್ಲದಿದ್ದರೂ ಕಾಫಿ ಲೋಟ "ತಡಾಲ್"... ಎಂದು ಕೆಳಗೆ ಬಿತ್ತು.

"ಮಚ್ಚಾ .. ಮಚ್ಚಾ ....ಮೊನ್ನೆ ನಾನು ಕುಂದಾಪುರಕ್ಕೆ ನಮ್ಮಜ್ಜಿ ಮನೆಗೆ ಹೋಗಿದ್ದೆ . ಕರಡಿ ಕೈಯಲ್ಲಿ ಆಶೀರ್ವಾದ ಮಾಡಿಸಿಕೊಂಡರೆ ಕೂದಲು ಬರುತ್ತೆ ಅಂಥ ಅಜ್ಜಿ ಹೇಳಿದ್ರು " ಸೇಟು ಫರ್ಮಾಯಿಸಿದ. ಲೋ ....ಏನೋ ?? ಆನೆ ಕೈಯಲ್ಲಿ ಕೋಲೆ ಬಸವನ ಕೈಯಲ್ಲಿ ಆಶೀರ್ವಾದ ಮಾಡಿಸ್ಕೊಳ್ಳೋದು ಕೇಳಿದ್ದೀನಿ ಇದೇನೋ ಕರಡಿ ಕೈಯಲ್ಲಿ ?? ಮತ್ತೆ ಆಮೇಲೆ ಕರಡಿ ಥರಾ ಮೈತುಂಬಾ ಕೂದಲು ಬಂದ್ರೆ ಕಷ್ಟ ಎಂದೆ . ಏಯ್ ಗುಬಾಲು..... ಇಲ್ಲಿವರ್ಗೂ ಯಾವ್ದಾದ್ರೂ ಬೋಳು ತಲೆ ಕರಡಿಯನ್ನ ನೋಡಿದ್ದೀಯಾ ??? ಮತ್ತೆ ಅದು ಆಶೀರ್ವಾದ ಮಾಡೋವಾಗ ತಲೆ ಮೇಲೆ ಕೈ ಇಡುತ್ತೆ ತಾನೆ ?? ಅಲ್ಲಿ ಮಾತ್ರ ಕೂದಲು ಬರುತ್ತೆ ಅಂಥ ಹೇಳಿದ . ಸರಿ ... ಇರಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಧಾರ ಅಂತೆ . ಹಾಗೆಯೇ ಊರಿಗೆ ಬಂದ ಕರಡಿ ಕುಣಿಸುವವನಿಗೆ ನೂರು ರುಪಾಯಿ ಕೊಟ್ಟು "ನೋಡು ಈ ಆಶೀರ್ವಾದ ತಲೆಗೆ ಮಾತ್ರ ಅಂಥ ನಿನ್ನ ಕರಡಿಗೆ ಹೇಳು " ಎಂದು ತಾಕೀತು ಮಾಡಿ ಆಶೀರ್ವಾದ ಮಾಡಿಸಿಕೊಂಡೆ.ಕರಡಿ ತಲೆ ಮೇಲೆ ಕೂದಲು ಬಂತೋ ಇಲ್ಲವೊ ತಿಳಿಯದು ನನ್ನ ತಲೆ ಮೇಲೆ ವಾರ ಕಳೆದರೂ ಕೂದಲು ಚಿಗುರಲಿಲ್ಲ .

ಈಗ ಇದೆಲ್ಲ ಬಿಟ್ಟು Root Cause analysis ಮಾಡಿ ಗೋಳಿ ಮರದಡಿ ಕೂತು ಧ್ಯಾನ ಮಾಡಿದಾಗ "ಕೂದಲಿರುವುದೇ ಕೂದಲುದುರಲು ಮೂಲ " ಎಂಬ ಜ್ಞಾನೋದಯವಾಗಿದೆ . ಇನ್ನು ಸ್ವಲ್ಪ ದಿನ ಕಳೆದ ಮೇಲೆ ತಲೆಯ ಮೇಲೆ ಒಂದೂ ಕೂದಲು ಇಲ್ಲದಂತಾದಾಗ ಕೂದಲು ಹೇಗೆ ಉದುರುತ್ತದೆ ಎಂದು ನಾನೂ ನೋಡುತ್ತೇನೆ . ಆದರೂ ಎಲ್ಲ ದೇವಸ್ಥಾನಗಳಿಗೆ ಹೋದಾಗ ನಾನು ಬೇಡುವುದೊಂದೇ " ನಾ ನಿನಗೇನೂ ಬೇಡುವುದಿಲ್ಲ ಹೃದಯ ಮಂಟಪದೊಳು ನೆಲೆಸಿರು ಹರಿಯೇ.... ಮತ್ತು ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ ..... ಎಂದು .

***********************ವಿಕಟಕವಿ *****************

Comments

Unknown said…
article ತುಂಬಾ ಚೆನ್ನಾಗಿದೆ .ಆದರೆ ಅದರ title ಗುಡಿಯೊಳಗೆ ಬದಲಿಗೆ ಗುಡಿ ಮೇಲೆ ಎಂದು ಮಾಡಿದ್ದರೆ ಕೂದಲು ಬೆಳೆಯುತಿತ್ತೋ ಏನೋ . ಪಾಪ ಕೂದಲಿಗೆ ಸಹ confuse ಆಗಿರಬೇಕು
ಅಲ್ಲಲ್ಲಿ ಪಂಚ್ ಚೆನ್ನಾಗಿದೆ. Famous Personality ಅಂದ್ರೆ ಗಾಂಧಿ, ಮತ್ತೇ "ಕೇಶ"ವಾ ಎರಡೂ ಭಾಳ ಸೇರಿತು.

ಕ್ಯಾರಿ ಆನ್. ಹೊಡದಾಡು.
Arun vasushetty said…
Nice one dude....full maza banthu.......Keep it up!!!!
ಚಕೋರ said…
ತಲೆನಲ್ಲಿ ೩೦x೪೦ ಸೈಟ್ ಆಗೋ ಮೊದಲು ಮದ್ವೆ ಆಗ್ಬಿಡಿ ಸರ್.
Ravi K S said…
ROFL.. Too good ಆಗಿದೆ..
"ಕೇಶ "ವಾ ....." is just too good..
Keep it going !!

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ