Skip to main content

ಶಾಂತಿಮಂತ್ರ

**********************************************************
ಈ ಲೇಖನವನ್ನು ಓದುವ ಮೊದಲು ನನ್ನ "ನಾನು - ನನ್ನ ಸಂಸಾರ " ಲೇಖನ ಓದಿದರೆ ಇದರ ಹಾಸ್ಯದ ಹಿನ್ನೆಲೆಯ ಕುರಿತು ತಿಳಿಯಬಹುದು .
http://shanuisking.blogspot.com/2009/03/blog-post_17.html
**********************************************************
ಊಫ್ .. ಈ ಜನಕ್ಕೆ ಯಾವ್ ಟೈಮ್ ನಲ್ಲಿ ಏನ್ ಮಾತಾಡ್ಬೇಕು ಅನ್ನೋದೇ ಗೊತ್ತಾಗಲ್ಲ ....ಇಷ್ಟು ದಿನ ನಾನು ಶಾಂತಿ ಬಗ್ಗೆ ಬರೆದ ಎಲ್ಲ ಲೇಖನಗಳನ್ನು ಅವಳಿಗೆ ತಿಳಿಯದಂತೆ ಸೇಫ್ ಲಾಕರನಲ್ಲಿ ಇಟ್ಟಿದ್ದೆ . ಮೊನ್ನೆ ಶನಿವಾರ ಸಂತೆಗೆ ಇವಳನ್ನು ಕರೆದುಕೊಂಡು ಹೋದಾಗ ಭಾದ್ರಪದ ಮಾಸ ಬರದಿದ್ದರೂ ಸಡನ್ನಾಗಿ ಗಣೇಶ ವಕ್ಕರಿಸಿಕೊಂಡು ಬಿಟ್ಟ . "ಏನ್ ಅತ್ತಿಗೆ ?? ನುಗ್ಗೆಕಾಯಿ ಖರೀದೀನಾ ??? ಎಂದು ಕೇಳಿ ಬಿಡೋದೇ ??. ನನ್ನ ಕಣ್ಸನ್ನೆ ನೋಡ್ತಾನೆ ಇಲ್ಲ ....... ಯಾಕೋ ಗಣೇಶ ಹೀಗೆ ಯಾಕೆ ಕೇಳ್ತಾ ಇದ್ದೀಯಾ ?? ಎಂದು ಇವಳು ಕೇಳಿದಾಗ ಮಗ್ಗಿ ಕಂಠಪಾಠ ಹೊಡೆದಂತೆ ನನ್ನ ಲೇಖನದ ಎಲ್ಲ ಜೋಕುಗಳನ್ನು ಕಕ್ಕಿಬಿಟ್ಟ ..... ಏನ್ ಚೆನ್ನಾಗಿ ಬರೆದಿದ್ದಾರೆ ನಿಮ್ ಮನೆಯವರು ಅಂತ ಹೊಗಳಿಕೆ ಬೇರೆ . ನನಗೆ ನಗುವುದೋ ಅಳುವುದೋ ತಿಳಿಯಲಿಲ್ಲ . ಸಾಯಂಕಾಲ ಮನೆಯಲ್ಲಿ ನನಗೆ ನಡೆದ ಸತ್ಯನಾರಾಯಣ ಪೂಜೆಯ ಬಗ್ಗೆ ಇನ್ಯಾವತ್ತಾದರೂ ಬರೆಯುತ್ತೇನೆ . ಈಗ ಮುನಿಸಿಕೊಂಡ ಶಾಂತಿಯನ್ನು ಒಲಿಸಿಕೊಳ್ಳಲು ಈ ಶಾಂತಿಮಂತ್ರ .....

*************** ಓಂ !!!!! *************
ಮೌನ ಮುರಿದು ಮಾತನಾಡು
ನಗುತ ನನ್ನ ನಲ್ಲೆ
ಮಾತು ಬಿಟ್ಟು ಕೊಲುವೆ ಏಕೆ
ನೀನು ಮೌನದಲ್ಲೇ ??

ಸಿಟ್ಟಲ್ಲಿ ಯಾಕೆ ಮಾಡ್ಕೊಂಡಿದ್ದಿ
ನೀನ್ ಮೂತೀನ್ ಉಬ್ಬಿದ ಪೂರಿ
ನಿನ್ನೆಯಿಂದ್ ಹೇಳ್ತಿದ್ದೀನಿ
I am very sorry !!!!

ಉಹೂ ಇಲ್ಲ ... ಆ ಲೈನು ಕೆಲಸ ಮಾಡಲಿಲ್ಲ . ಕಪಾಟಿನ ಬಟ್ಟೆಗಳು ಸೂಟ್ ಕೇಸ ಒಳಗಡೆ ನುಗ್ಗುತ್ತಿವೆ . ಅದರ ಮಧ್ಯೆ ಇವಳು ಕಣ್ಣೀರು ತುಂಬಿಕೊಂಡು ಹೇಳಿದಳು ...

ಆಗ್ಲಿ ಏನೂ ನಾಳೆ ನಾನು
ಹೋಗ್ತೀನಿ ಶಿವಮೊಗ್ಗೆ
ಆಮೇಲೆ ನೀನು ತಂದುಕೊಂಡು ತಿನ್ನು
ಸೌತೆ - ಗುಳ್ಳ- ನುಗ್ಗೆ !!

ಇರಲಿ ಬತ್ತಳಿಕೆಯ ಬೇರೆ ಅಸ್ತ್ರ ಪ್ರಯೋಗ ಮಾಡಬೇಕಾಯ್ತು . ಸ್ವಲ್ಪ ಬೆಣ್ಣೆ ಹಚ್ಚಿದರೆ ಒಲಿಯುತ್ತಾಳೋ ನೋಡೋಣ ಅಂದುಕೊಂಡು ಈ ಸೆಂಟಿ ಡೈಲಾಗು ಹೊಡೆದೆ .

ತವರಿಗೆ ಹೋಗ್ತೀನಂತ ಮಾತ್ರ
ಹೇಳ್ಬೇಡ್ವೆ ನನ್
ರಾಣಿ ನೀನಿಲ್ದೆ ಬದುಕೊದಿಲ್ವೇ
ಈ ನಿನ್ ಗಂಡ ಅನ್ನೋ ಪ್ರಾಣಿ

ಅಬ್ಬಾ ... ಪರಿಸ್ಥಿತಿ ಕರ್ಫ್ಯೂನಿಂದ ಸೆಕ್ಷನ್ ೧೪೪ ಗೆ ಇಳಿಯಿತು . ಈಗ ಸೃಷ್ಟಿಯಾಗಿದ್ದ ಉದ್ವಿಗ್ನ ವಾತಾವರಣ ಹತೋಟಿಯಲ್ಲಿ ಬಂತು , ಬಟ್ಟೆಗಳು ಸೂಟ್ ಕೇಸ ನಿಂದ ಕಪಾಟು ಸೇರಿಕೊಂಡವು . ಆದರೆ ಬೆಳಿಗ್ಗೆಯಿಂದ ಒಳಗಡೆ ಜಪ್ತಿಯಾಗಿದ್ದ ಸಿಟ್ಟು ಒಮ್ಮೆಲೇ ಹೊರಬಂದಿತು .

ಊಟಕ್ಕೆ ನಾನು ಬಡ್ಸೋದಿಲ್ಲ
ಅನ್ನದ ಒಂದೂ ಅಗುಳು
ಇಲ್ಲಿವರ್ಗೂ ನನ್ನನ್ ಬೈಕೊಂಡ್
ನೀನ್ ಏನೇನ್ ಬರೆದೆ ಬೊಗಳು

ಇಷ್ಟು ಹೇಳಿ ಮುಖ ತಿರುಗಿಸಿ ಮತ್ತೆ ಮೌನವೃತ ಧಾರಣೆ ಮಾಡಿದಳು ಹೆದರಿಬಿಟ್ಟೆ !!! ಕಣ್ಣಿನಲ್ಲಿ ಜ್ವಾಲಾಮುಖಿ .... ನವರಾತ್ರಿಗೆ 3 ತಿಂಗಳು ಇರಬೇಕಾದ್ರೆನೆ ನನಗೆ ದುರ್ಗೆಯ ದರ್ಶನ. ಇರಲಿ ಇವಳ ಸಿಟ್ಟು ನನಗೆ ಗೊತ್ತಿಲ್ವೆ ??? ನಾನು ಮುಂದುವರಿಸಿದೆ .

ಶಾಂತಿ ಅನ್ನೋ ಹೆಸರಿದ್ರೂ
ನಿನಗ್ಯಾಕೆ ಇಷ್ಟೊಂದು ಕೋಪ ??
ಚಿಕ್ಕ ಪುಟ್ಟ ವಿಷಯಕ್ಕೆ ಯಾಕೆ ತಾಳ್ತಿ
ಮಾಂಕಾಳಿ ಸ್ವರೂಪ ??

ಸ್ವಲ್ಪ ಮುಂಚೆ ಕೂಗ್ತಿದ್ದೆ
ಈಗ್ಯಾಕೆ ಸೈಲೆಂಟ್ ಮೋಡು??
ಇವತ್ತಿಂದ ನಿನಗಾಗಿ ನಾನ್
ಏನೇನ್ ಮಾಡ್ತೀನಿ ನೋಡು

ರನ್ನ ಚಿನ್ನ ಬಂಗಾರಾಂತ
ಪ್ರೀತಿಯಿಂದಲೇ ಕರೀತೀನಿ
"ನನ್ ಹೆಂಡ್ತಿ ನನ್ ಪ್ರಾಣ " ಅಂತ
ಹೊಸ ಲೇಖನ ಬರೀತೀನಿ

ಉಪ್ಪೇ ಹಾಕದ ಉಪ್ಪಿಟ್
ಕೊಟ್ರು ಚಪ್ಪರಿಸ್ಕೊಂದು ತಿಂತೀನಿ
ಬೆಲ್ಲದ ನೀರಿಗೆ ಪಾಯಸ ಅಂದ್ರೂ
ಸೂಪರ್ ಅಂತ್ಲೇ ಅಂತೀನಿ

ಕಣ್ಣ ಸನ್ನೇಲೆ ಕುಣೀತೀನಿ
ನಾನ್ ನಿನ್ನ ಎಲ್ಲ ತಾಳಕ್ಕೂ
ಕಣ್ಣೀರ್ ಹಾಕದೆ ತಿಂತೀನಿ
ನೀ ಮಾಡಿದ ಪನ್ನೀರ್ ಪಾಲಕ್ಕು

ಮೈಸೂರ್ ಮಲ್ಲಿಗೆ ನಿತ್ಯ ತಂದು
ನಾ ನಿನ್ ತಲೆಗೆ ಮುಡಿಸ್ತೀನಿ
ಎಲ್ಲ ಹಬ್ಬಕ್ಕೂ ರೇಷ್ಮೆ ಸೀರೆ
ತಪ್ಪದೆ ನಾನು ಕೊಡಿಸ್ತೀನಿ

ಸಡನ್ನಾಗಿ ಇವಳಿಗೆ ಗಣೇಶನ ಮಾತುಗಳೆಲ್ಲ ನೆನಪಿಗೆ ಬಂದವೋ ಏನೋ ... ಮತ್ತೆ ಶುರು ಹಚ್ಚಿಕೊಂಡಳು

ಡ್ರೈವಿಂಗ್ ಬಗ್ಗೆ ಬರ್ದಿರೋದು
ನಂಗೆ ಚೆನ್ನಾಗಿ ಗೊತ್ತು
ಟ್ರಾಫಿಕ್ ಪೋಲಿಸ್ ಮಗಳನ್ನೇ
ನೀವ್ ಹುಡ್ಕೊಬೇಕಾಗಿತ್ತು .

ಟ್ರಾಫಿಕ್ ಪೋಲಿಸ್ ಮಗಳನ್ನ
ನಾನು ತುಂಬಾ ಪ್ರೀತಿಸ್ತಿದ್ದೆ
ನನ್ ಗ್ರಹಚಾರ ಹಾಳಾಗಿತ್ತು
ನೀನ್ ಬಂದು ನಂಗೆ ಗಂಟು ಬಿದ್ದೆ

ಅನ್ನೋಣ ಎಂದುಕೊಂಡೆ ಆಮೇಲೆ ತಮಾಷೆ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಕಷ್ಟ ಎಂದುಕೊಂಡು ಈ ಕವನ ಮತ್ತು ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಕೆಳಗಿನ ಸಾಲುಗಳನ್ನು ಹೇಳಿದೆ .

ನನಗೂ ನಿನಗೂ ಸೆಟ್ ಆಗೈತೆ
ಏಳೇಳು ಜನ್ಮದ ನಂಟು
offer expire ಆಗಲಿಕ್ಕೆ
ಇನ್ನೂ ಆರು ಜನ್ಮ ಉಂಟು !!

ಅಬ್ಬ !!! ತುಟಿಯಂಚಿನಲ್ಲಿ ಅಪ್ರಯತ್ನವಾಗಿ ಮುಗುಳ್ನಗು ಮಿಂಚಿ ಮರೆಯಾಯಿತು. ಪುನಃ ಸಿಟ್ಟಿನ ನಾಟಕ ಮಾಡತೊಡಗಿದಳು . ನಮ್ಮ ದೇವರ ಬುದ್ಧಿ ನಮಗೆ ಗೊತ್ತಿಲ್ವೆ ??? ಕಬ್ಬಿಣದಂತೆ ಇವಳ ಮುಖ ಕೂಡ ಕೆಂಪಾಗಿದೆ ಒಂದೆರಡು ಪ್ರೀತಿಯ ಮಾತಿನ ಪೆಟ್ಟು ಸಾಕಾಗುತ್ತದೆ ಎಂಬುದನ್ನು ಮನಗಂಡು ಡೈಲಾಗುಗಳನ್ನು ಮುಂದರಿಸಿದೆ.

ನಗಲು ನೀನು ಮರೆಯುವೆ ನಾನು
ಇರುವ ಎಲ್ಲ ನೋವು
ನಿನ್ನ ನಗುವೇ ನನ್ನ ಎದೆಗೆ
ಝಂಡು ಬಾಮು ಮುವೂ (moov )

ನಾನೂ ನಿಂಗೆ ಪ್ರಾಣ ಅನ್ನೋ
ಸತ್ಯಾನ್ನ ನೀನು ಒಪ್ಪಿಕೊ
ಸಿಟ್ಟನ್ ಬಿಟ್ಟು ಮುತ್ತ ನ್ ಕೊಟ್ಟು
ಒಮ್ಮೆ ನನ್ನನ್ನ ಅಪ್ಪಿಕೋ !!! :)

ಇಷ್ಟು ಹೇಳುತ್ತಲೇ ನಾಚಿ ನೀರಾಗಿ ನನ್ನವಳು slow motion ನಲ್ಲಿ ನನ್ನ ಬಳಿ ಬಂದಳು . ರೀ ..... ಏನೇ ಹೇಳಿ ಆರ್ಟಿಕಲ್ಲು ಚೆನ್ನಾಗಿತ್ತು . ನೀವು ಆಚೆ ಹೋದಾಗ ಮನಸ್ಸು ತುಂಬಿ ನಕ್ಕುಬಿಟ್ಟೆ ಅಂದಾಗ ನನ್ನ ಲೇಖನಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಯಿತು . ಹೀಗೆ ನನ್ನ ಸಮಸ್ಯೆ ದೂರವಾಯಿತು . ಒಂದು ನಿಮಿಷ ತಡೀರಿ ಈ ಗಣೇಶನ ಕುಶಲೋಪಚಾರ ಮಾಡಿ ಬರುತ್ತೇನೆ

*************** ಓಂ ಶಾಂತಿ ಶಾಂತಿ ಶಾಂತಿಃ******************** ****************************ವಿಕಟಕವಿ ********************

Comments

ಸೂಪರ್ ರೀ ಶಾನಭೋಗ ರೆ ...... ನಿಮ್ಮ ಕವನಗಳು ತುಂಬಾನೇ ಚೆನ್ನಾಗಿವೆ. ನಕ್ಕು ನಕ್ಕು ಸಾಕಾಯಿತು.
ಧನ್ಯವಾದಗಳು ಕುಲಕರ್ಣಿಯವರೇ
Anonymous said…
ಯಾವಾಗ ಮದುವೆ ಆಯಿತು ಸುಮಂತ್? ಕರೀಲೆ ಇಲ್ಲ! :ಪ
ಎಲ್ಲ ಲೇಖನಗಳೂ ಚೆನ್ನಾಗಿವೆ, ಜೇಸಿ ನೆನಪುಗಳು ಇನ್ನೂ ತಾಜಾ ಆಯಿತು :-)
ಬೊಂಬಾಟ್ ಚುಟುಕು ಕವನಗಳು.. ಸಂದರ್ಭಕ್ಕೆ ಸರಿಯಾಗಿವೆ.. ಇವನ್ನೆಲ್ಲ ಸೇರಿಸಿ ಕವನ ಸಂಕಲನ ಯಾಕೆ ಮಾಡಬಾರದು ನೀವು?

Popular posts from this blog

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...