Skip to main content

ಕರ್ಣಕುಂಡಲ

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ . ಒಂದು ದಿನ ಎಡ ಕಿವಿಯ ಇಯರ್ ಪೋನ್ ನಲ್ಲಿ ಕಡಿಮೆ ಬಲ ಕಿವಿಯಲ್ಲಿ ಹೆಚ್ಚು ವೋಲ್ಯುಂ ಕೇಳಿಸತೊಡಗಿದಾಗ 4000/- ನ ಐಪೋಡ ನ ಮೇಲೆ ಎಳ್ಳಷ್ಟು ಸಂಶಯಪಡದೆ ನನ್ನ ಒಂದು ಕಿವಿ ಸ್ವಲ್ಪ ಡಮಾರ್ ಆಗಿದೆ ಎಂದು ಚಿಂತಿಸುತ್ತಿದ್ದೆ . ಹೇಳಿದರೆ ಕೆಪ್ಪ ಎನ್ನುತ್ತಾರೆ ಎಂದು ಹೆದರಿ ಯಾರಲ್ಲೂ ಹೇಳಿರಲಿಲ್ಲ . ಆಮೇಲೆ ಒಂದು ದಿನ ಅದರಲ್ಲಿ ಹಾಡು ಕೇಳಿದ ನನ್ನ ರೂಂ ಮೇಟ್ ಸುಮಂತ್ .. ಇದರ ಎಡ ಇಯರ್ ಫೋನ್ ಹಾಳಾಗಿದೆ ಅಂದಾಗ ನಾನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ .ನನ್ನ ಕರ್ಣದ್ವಯಗಳು ಸರಿಯಾಗಿವೆ ಎಂದು ಬೀಗುತ್ತಿದ್ದೆ . ಆದರೆ ಯಾವತ್ತೂ ಗೋಡೆಗೂ ಕಿವಿ ಇರುತ್ತೆ ಎಂದು ತುಂಬಾ ಜಾಗ್ರತೆಯಿಂದ ಇರುತ್ತಿದ್ದ ನನಗೆ ನನ್ನ ಅಕ್ಕಪಕ್ಕ ಎರಡು ಇರುವುದು ಮರೆತೇ ಹೋಗಿತ್ತು . ನಾನು ಹೆಮ್ಮೆ ಪಟ್ಟುಕೊಂಡಿದ್ದು ಅದಕ್ಕೆ ಕೇಳಿಸಿತೋ ಏನೋ. ಈಗೀಗ ಸ್ವಲ್ಪ ನಖರಾ ಮಾಡತೊಡಗಿದೆ.

ಸುಮಾರು 15 ದಿನ ಹಿಂದಿನಿಂದ ಈ ಕಿವಿ ನೋವಿ ಶುರು ಆಗಿದೆ. ಮೊದಲಿಗೆ ಇದು ಮಾಮೂಲಿ ಶೀತ ಎಂದುಕೊಂಡು ನಮ್ಮ "ಮಾತ್ರೆ ರಾಜನ " ಬಳಿ ಹೋದೆ .ಮಾತ್ರೆರಾಜ ಹೆಸರು ಯಾಕೆ ಎಂದು ಕೇಳಿದಿರಾ ?? ಏನಿಲ್ಲ ನೀವು ಅವರ clinic ನ ಒಳಗೆ ಹೋಗಿ ಹೊರಬರುವಷ್ಟರಲ್ಲಿ ನಿಮ್ಮ ತೂಕ 1/2kg ಮಾತ್ರೆಗಳಿಂದ ಹೆಚ್ಚಾಗಿರುತ್ತದೆ . ಕಂದು, ಬಿಳಿ ಕೆಂಪು ನೀಲಿ ಬಣ್ಣದ ನಾಲ್ಕು ಮಾತ್ರೆಗಳು ಪಕ್ಕ ಪರಿಸ್ಥಿತಿಯ ಸೂಕ್ಷ್ಮವನ್ನರಿತು ಹಸಿರು ಬಣ್ಣದ ಮಾತ್ರೆ ಬರಬಹುದು ಇಲ್ಲದೆ ಇರಬಹುದು . ಹೀಗೆ ಅವರ ಬಳಿ ಹೋಗಿ ಅವರು ಕೇಳುವ ಮೊದಲೇ ಆ ಆ ಆ ..... ಎಂದು ಬಾಯಿ ತೆರೆದು ನಿಂತೆ. ಆಮೇಲೆ ನೀವು ಕಷ್ಟ ತೆಗೊಬೇಡಿ ಸರ್ .. ನನಗೆ ಗೊತ್ತು .. ಮಾತ್ರೆ ನಾನೇ ತೆಗೊತೀನಿ ಅಂದರೂ ಕೇಳದೆ ನನ್ನ ನಿರೀಕ್ಷೆಯನ್ನು ಹುಸಿಮಾಡದೆ ಅರ್ಧ ಕಿಲೋ ರಂಗುರಂಗಿನ ಮಾತ್ರೆಗಳನ್ನು ಕೊಟ್ಟರು . 2 ದಿನದಲ್ಲಿ ಅದನ್ನು ಖಾಲಿ ಮಾಡಿದೆ . ಆದರೆ ಕಿವಿ ನೋವು ನಿಲ್ಲಲಿಲ್ಲ . ಮತ್ತೆ ಅವರ ಬಳಿ ಹೋದೆ ಈ ಬಾರಿ ಸ್ವಲ್ಪ ಬದಲಾವಣೆ ಎಂಬಂತೆ medicals ನ ಮಾತ್ರೆ ಬರೆದು ಕೊಟ್ಟರು . ಇವಿಷ್ಟರಲ್ಲಿ ಆರು ನೂರು ರೂಪಾಯಿಗಳಿಗೆ ಗ್ರಹಣ ಹಿಡಿದಿತ್ತು.

ಸತ್ಯವಾಗಿಯೂ ಹಣದ ಯೋಚನೆ ಇರಲೇ ಇಲ್ಲ . ಆದರೆ ಇದರ ಬಳಿಕವೂ ಕಿವಿನೋವು ಒಳ್ಳೆ ಷೇರು ಮಾರುಕಟ್ಟೆಯಂತೆ ನೋವಿನ ಸೂಚ್ಯಂಕ ಏರಿಳಿತ ಪಡೆಯುತ್ತಿತ್ತು . ನಮ್ಮಮ್ಮನ ಬೆಳ್ಳುಳ್ಳಿ ಎಣ್ಣೆ , ತುಳಸಿ ರಸ ಮುಂತಾದ Home made ಆಯುರ್ವೇದದ ಪ್ರಸ್ತಾಪಕ್ಕೆ ನಕಾರವಿತ್ತೆ . ಬಿಟ್ಟಿದ್ದರೆ castrol ,petrol ಕೂಡ ಹಾಕುತ್ತಿದ್ದರೋ ಏನೋ. ಅಂತೂ ಕೊನೆಗೆ ಕಿವಿ ಗಂಟಲು ಮೂಗು (ENT) ತಜ್ಞರ ಶರಣು ಹೋಗಲು ನಿರ್ಧರಿಸಿದೆ.

ಮರುದಿನ ಒಬ್ಬ ENT specialist ಹೋದೆ . ಸರ್ ಕಿವಿ ನೋವು ಎಂದೇನು . ಆ .. ಏನು ?? ಎಂದು ಕೇಳಿದರು . ಸ್ವಲ್ಪ ಜೋರಾಗಿ "ಸರ್ ಕಿವಿ ನೋಯ್ತಾ ಇದೆ ಒಂದು ವಾರದಿಂದ " ಪುನರುಚ್ಚರಿಸಿದೆ . ಆ ಆ ... ಏನು ?? ಎಂದರು . ಈ ಕೆಪ್ಪನ ಬಳಿ ಏನು treatment ಪಡೆಯುವುದು ಎಂದು ಅಲ್ಲಿಂದ ಪಲಾಯನ ಮಾಡಿದೆ . ಮತ್ತೊಬ್ಬರ ಬಳಿ ತೆರಳಿದೆ . 10-12 ಜನರ queue ಇತ್ತು . ಇರಲಿ ಒಳ್ಳೆ ವೈದ್ಯರಿರಬೇಕೆಂದುಕೊಂಡು ಸರದಿ ಬರುವವರೆಗೆ ಕಾಯುತ್ತ ಕುಳಿತು ಆಮೇಲೆ ವೈದ್ಯರನ್ನು ಭೇಟಿ ಮಾಡಿದೆನು .

ಏನಾಗಿದೆ ?? ಎಂದರು . ಸರ್ ಕಿವಿ ನೋವು ಎಂದರು . ಹ್ಮ.... ಎಷ್ಟು ದಿನದಿಂದ ಎನ್ನುತ್ತಾ ನನ್ನ ಮೂಗು ಮೇಲೆ ಮಾಡಿ ನೋಡತೊಡಗಿದರು . ಸರ್ ಇದು ಮೂಗು ... ಕಿವಿ ಇಲ್ಲಿ ಸೈಡ್ ನಲ್ಲಿ ಇದೆ ನೋಡಿ ..... ಎಂದೆನು. ಗೊತ್ತಪ್ಪಾ .... ಅದೆಲ್ಲ ಲಿಂಕ್ ಇರ್ತಾವೆ ಎಂದು . ಏಯ್ .. ಮೀನಾಕ್ಷಿ .. ನನ್ನ ಪೆನ್ ಎಲ್ಲಿ ಹೋಯ್ತು ಎಂದು ನರ್ಸನ್ನು ಕರೆದರು . ಮತ್ತೆ ಕಿವಿಯನ್ನು ಮೇಲೆ ಕೆಳಗೆ ಆಚೆ ಈಚೆ ಎಲ್ಲ ಎಳೆದು ಒಳಗೆ ಟಾರ್ಚ್ ಹೊಡೆದು ನೋಡತೊಡಗಿದರು . ಸರ್ ಖಂಡಿತವಾಗಿತೂ ನಿಮ್ಮ ಪೆನ್ ನನ್ನ ಕಿವಿಯ ಒಳಗೆ ಇಲ್ಲ ಎಂದೆನು . ಕೆಮ್ಮಿ ... ಎಂದರು ಒಮ್ಮೆ ಕೆಮ್ಮಿದೆನು . ಹ್ಮಂ ... ಎಂದು ಏನೋ ಕಂಡುಹಿಡಿದವರಂತೆ ಬರೆಯಲಾರಂಭಿಸಿದರು . ಒಂದು ಪುಟ ಮುಗಿಸಿ ಕೆಳಗಡೆ PTO ಎಂದು ಬರೆದು ಹಿಂದಿನ ಪುಟದಲ್ಲಿ ಬರೆಯಲಾರಂಭಿಸಿದರು . ಒಮ್ಮೆ ನಿಲ್ಲಿಸಿದರು ಅಬ್ಬ !!! ಮುಗಿಯಿತು ಎಂದುಕೊಂಡರೆ ಕೈ ಬೆರಳಿನ ನಟಿಕೆ ಮುರಿದು ಮತ್ತೆ ಬರೆಯಲು ಶುರು ಮಾಡುವುದೇ ?? ತಬ್ಬಿಬ್ಬಾದೆ .... ಸರ್ ಒಂದು typist appoint ಮಾಡಿಕೊಲ್ಲಬಹುದಲ್ಲ ಎನ್ನೋಣವೆಂದುಕೊಂಡೆ . ಆಮೇಲೆ ಒಂದು ಮೊದಲು ಹೆಸರು ಎಲ್ಲ ಬರೆದು 5-6 ಪ್ರಕಾರದ ಮಾತ್ರೆ ಬರೆದು ಕೊಟ್ಟರು .

ನಾನ್ನೂರು ರುಪಾಯಿ ಎಂದರು . ಪುಣ್ಯ !!!! ಅವರು ಕೆಮ್ಮಿ ... ಅಂದಾಗ ನಾನು ಒಂದೇ ಸಲ ಕೆಮ್ಮಿದೆ . ಎರಡು ಸಲ ಕೆಮ್ಮಿದ್ದಲ್ಲಿ 800 ಹೇಳುತ್ತಿದ್ದರೋ ಏನೋ ಎಂದು ನನ್ನ ಜಾಣ್ಮೆಗೆ ಶಹಬ್ಬಾಸ್ ಹೇಳಿದೆ . ಮತ್ತೆ ದೇವರಿಗೆ ಒಂದು ನಮಸ್ಕಾರ ಹಾಕಿದೆ . ಪುಣ್ಯಕ್ಕೆ ಅವನು ಮನುಷ್ಯರಿಗೆ ಎರಡೇ ಕಿವಿ ಕೊಟ್ಟಿದ್ದಾನೆ . ಹಲ್ಲಿನ ತರಹ 32 ಕೊಟ್ಟಿದ್ದರೆ ನಾನು ICICI ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಅಪ್ಲೈ ಮಾಡಬೇಕಾಗುತ್ತಿತ್ತು .

ಈಗ ಕಳೆದ ಹತ್ತು ದಿನಗಳಿಂದ ಅನ್ನಕ್ಕಿಂತ ಹೆಚ್ಚು ಮಾತ್ರೆ ತಿನ್ನುತ್ತಿದ್ದೇನೆ . ಕಿವಿ ನೋವು ಇನ್ನೂ ಹತೋಟಿಗೆ ಬಂದಿಲ್ಲ . ಇಂದು ಹೋಗಿ X-ray scanning ಮಾಡಿಸಿಕೊಂಡು ಬಂದಿದ್ದೇನೆ .ನೋಡೋಣ ಇನ್ನೊ ಸ್ವಲ್ಪ ದಿನದಲ್ಲಿ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ . ಮುಂದೆನಾಗುತ್ತೆಂದು ಕಾದು ನೋಡಿ ...

**************************************ವಿಕಟಕವಿ *****

Comments

Anonymous said…
ವಿಕಟ ಕವಿಗಳೇ,
ನೋವಿನಲ್ಲೂ ಹಾಸ್ಯವನ್ನು ಕಾಣುವ ನಿಮ್ಮ ಹಾಸ್ಯ ಪ್ರಜ್ಞೆ ಮೆಚ್ಚತಕ್ಕದ್ದೇ, ನಿಮ್ಮ ಕಿವಿ ನೋವು ಬೇಗ ಗುಣವಾಗಲಿ ಎಂದು ಹಾರೈಸುತ್ತೇನೆ.
-ಬಾಲ
Anonymous said…
ವಿಕಟಕವಿಗಳೆ,

"ಕಂದು, ಬಿಳಿ ಕೆಂಪು ನೀಲಿ ಬಣ್ಣದ ನಾಲ್ಕು ಮಾತ್ರೆಗಳು" ಅನ್ನೊದು ಓದಿದ ಕೂಡ್ಲೆ ಒಂಥರಾ ಖುಷಿ ಆಯ್ತು, ನಮ್ಮೂರಲ್ಲಷ್ಟೆ ಅಲ್ಲ ಬೇರೆ ಕಡೆನೂ ಹೀಗೆ ಅಂತ, ಆದ್ರೆ ನಿಮ್ಮ ಪ್ರೋಫೈಲ ಓದಿ ಬೆಜಾರಾಯ್ತು, ನಾನು ಮುಂಬಯಿಯಲ್ಲೆ ಇರೋದು (ನವಿಮುಂಬಯಿ) ಮತ್ತು ಟಿ.ಸಿ.ಎಸ್ಸ.ಲ್ಲೆ...!!!!

ಸಿಗೋಣ.

-ಶೆಟ್ಟರು
ಕಿವಿ ನೋವು ಸರಿ ಆಯ್ತಾ?
ಬಾಲು said…
ವಿಕಟ ಕವಿ ಮಹಾಶಯರೇ,
ಭರ್ಜರಿ ಬರವಣಿಗೆ.

ನಿಮ್ಮ ಕಾಪಿ ಪುರಾಣ ನಂಗೆ ಮೇಲ್ ಮೂಲಕ ತಲುಪಿ, ಆಮೇಲೆ ನನ್ನಿಂದ ಹಲವಾರು ಕಾಪಿ ಪ್ರೀಯರ inbox ಸೇರಿದ ಮೇಲೆ ನನಗೆ ನಿಮ್ಮ ಬ್ಲಾಗು ಕಂಡು ಹಿಡಿಯುವ ಮನಸ್ಸಾಯಿತು. ತಡ ಮಾಡದೆ ಗೂಗಲ್ ಮೊರೆ ಹೋದೆ. ಯಾವ ದೇವರ ಕೃಪೆಯೋ , ಹೋದ ಜನ್ಮ ದ ಪುಣ್ಯವೋ etc etc ... ನನಗೆ ನಿಮ್ಮ ಬ್ಲಾಗು ಸಿಕ್ಕಿತು.

ನಾಲ್ಕು ಕಾಪ್ಪು ಕಾಫಿ ಮತ್ತೆ ಟೀ ಸೇರಿಸಿ ಕುಡಿದರೆ ಕಿವಿ ನೋವು ಹೋಗುವುದು ಅಂತ ಅಶ್ವಿನಿ ದೇವತೆಗಳು, ಮಹಾಭಾರತ ಯುದ್ದದ ಸಮಯದಲ್ಲಿ ಅರ್ಜುನ ನಿಗೆ ಹೇಳಿದ್ದರಂತೆ. ನೀವು ಯಾಕೆ ಒಮ್ಮೆ ಪ್ರಯತ್ನಿಸಬಾರದು?

ಚಂದದ ಬರಹ.

Popular posts from this blog

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...