Skip to main content

ನಾನು --ನನ್ನೂರು --ನನ್ನ ಜನ

***********************************DISCLAIMER***********************
ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ.ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ .
***************************************************************************


ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ.

This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನೇಶನ dialogbaazi ಖತರ್ನಾಕ್ಕಾಗಿ ಸಾಗಿತ್ತು .ನನಗೋ ನಗಬೇಕೋ ಅಳಬೇಕೋ ತಿಳಿಯಲಿಲ್ಲ . ಅಯ್ಯೋ ದೇವ್ರೇ ........450 ರೂಪಾಯಿ entry fee ಕೊಟ್ಟು ಒಳಗೆ ಬಂದಿದ್ದಲ್ಲದೆ 5ft ಆಳದ ನೀರಿಗೆ 2ft ಮೇಲಿಂದ ಹಾರಿದ್ದಕ್ಕೆ ಹೀಗೆ ಕುಣಿದಾಡುವ ಇವನು ಇನ್ನು ನಮ್ಮ ಶಿವಮೊಗ್ಗಕ್ಕೆ ಬಂದು free-flow ತುಂಗೆಯಲ್ಲಿ ನಮ್ಮ ದೇವಿ ಕಟ್ಟೆ ಮೇಲಿಂದ 4 ಡುಬ್ಕಿ ಹೊಡೆದರೆ ಏನು ಹೇಳಿಯಾನು ಅಂದು ಯೋಚಿಸತೊಡಗಿದೆ .ನನ್ನ ಗೆಳೆಯರು "ಮಚ್ಚಾ....ನೀನು Mango Tree ಹತ್ತಿದ್ದೀಯಾ ??River ನಲ್ಲಿ ಈಜಿದ್ದೀಯಾ ?? ಒಬ್ರಿಗೆ ಈಜೋದಕ್ಕೆ ಟಿಕೆಟ್ ದರ ಎಷ್ಟು ?? Dude.... Jackfruit Tree ನಲ್ಲಿ ಆಗುತ್ತ ಅಥವಾ Groundnut ಥರ Underground ಆಗುತ್ತಾ ??" ಇಂಥ ಪೆದಂಬು ಪ್ರಶ್ನೆಗಳನ್ನು ಕೇಳುವಾಗ ನಾನು ಶಿವಮೊಗ್ಗದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಲೋ ಅಥವಾ ಬೆಂಗಳೂರಿನ ವ್ಯಾಪಾರೀಕರಣದ ಮಾಡರ್ನ್ ಪರಿಸರದಲ್ಲಿ ಬೆಳೆದ ಇವರ ದೌರ್ಭಾಗ್ಯಕ್ಕೆ ಕನಿಕರಿಸಲೋ ಅಂದು ತಿಳಿಯುವುದಿಲ್ಲ . ಆದರೆ ಏನೇ ಹೇಳಿ ಇಂಥಾ ವಿಷಯಗಳು ನನ್ನನ್ನು ನನ್ನ ಬಾಲ್ಯಕ್ಕೆ ಸೆಳೆದೊಯ್ಯುತ್ತವೆ .

ತುಂಗಾ ನೀರು, ಜೋಗ ಫಾಲ್ಸ್ , ಆಗುಂಬೆ ಮಳೆ ,ತೀರ್ಥಹಳ್ಳಿ ಅಡಕೆ,ಗೋಪಿ ಸರ್ಕಲ್ ಫ್ರೈಡ್ ರೈಸ್ , ಮೀನಾಕ್ಷಿ ಭವನದ ದೋಸೆ ,ಡಿವಿಎಸ್ ಸರ್ಕಲ್ ಪಾನಿಪುರಿ ,ಪವನ್ ಗೋಬಿ ,ಕೋಟೆ ರೋಡ್ ಮಸಾಲ ಮುಂಡಕ್ಕಿ ,ಬ್ರೈಟ್ ನ ಪರೋಟ , ವೆಂಕಟೇಶ್ವರ ಸ್ವೀಟ್ಸ್ ನ ಸ್ಪೆಷಲ್ ಮೈಸೂರ್ ಪಾಕ್ ,ನಮ್ಮ ಸಹ್ಯಾದ್ರಿ , ಭಟ್ರ ಪಾನಿಪುರಿ ,ಪ್ರಾಣ ಕೊಡೊ ಫ್ರೆಂಡ್ಸು , ಅಹಾ .. ಇದೆ ನನ್ನ ಶಿವಮೊಗ್ಗ ,ಇದೆ ನನಗೆ ಸ್ವರ್ಗ .ಮುಂದಿನ ನನ್ನ ಜನ್ಮ ಬರೆದಿಡಲಿ ಬ್ರಹ್ಮ ... ಇಲ್ಲಿಯೇ ... ಇಲ್ಲಿಯೇ .. ಎಂದಿಗೂ ನಾನಿಲ್ಲಿಯೇ ......

ಅಂತೂ -ಇಂತೂ ನಾನು ಕೂಡ decide ಮಾಡಿ ಬಿಟ್ಟಿದ್ದೇನೆ . ಮದುವೆ ಆದ್ರೆ ಶಿವಮೊಗ್ಗದ ಹುಡುಗಿಯನ್ನೇ ಮದುವೆ ಆಗೋದು ಅಂಥ .ಇಲ್ಲದಿದ್ರೆ ಆಮೇಲೆ ಉದ್ದಿನ ಬೇಳೆ ಯಾವ್ದು ?? ತೊಗ್ರಿ ಬೇಳೆ ಯಾವ್ದು ?? ತೆಂಗಿನ ಕಾಯಿ ಮರದಲ್ಲಿ ಆಗುತ್ತಾ?? ಬಳ್ಳಿಯಲ್ಲಿ ಆಗುತ್ತಾ?? ಎಂದು explain ಮಾಡೋ ಗ್ರಹಚಾರ ಯಾರಿಗೆ ಬೇಕು??.ಇವರು ನವಿಲು ,ಅಳಿಲು ,ಎಲ್ಲ ಫೋಟೋದಲ್ಲಿ ನೋಡಿ ಬಲ್ಲರು ಅಷ್ಟೆ .ಮತ್ತೆ ಇವರ ಆಟಗಳು ....... ಆಹಾಹಾ .... ಆಲಸ್ಯದ ಏಜನ್ಸಿ ಖರೀದಿ ಮಾಡಿದ್ದಾರೆ. ಇಸ್ಪೀಟು ಇವರಿಗೆ ದೊಡ್ಡ ಆಟ. 4 ಗೋಡೆ ಬಿಟ್ಟು ಹೊರಗೆ ಬರಲಾರರು . ನಾವೋ... ಬಿಡಿ .... ಮನೆಗೆ complaint ಬಂದು ಅಪ್ಪನ ಹತ್ರ ಹೊಡೆಸಿಕೊಂಡರೂ ಮರುದಿನ ಪುನಃ ಅಡಿಗರ ಹಿತ್ತಲಿನಲ್ಲಿ ಆಡಿದ ಮರಕೋತಿ ಲಗೋರಿಗಳು ಮರೆಯಲು ಸಾಧ್ಯವೇ ?? ನರಪೇತಲ ನಾರಾಯಣನಾಗಿದ್ದರೂ ಪಂಥ ಕಟ್ಟಿ ಆ ಪೈಲ್ವಾನ್ ಬಾಬುವಿನ ಕಾಲು ಎಳೆದು ಬೀಳಿಸಿ ಗೆದ್ದ ಕಬಡ್ಡಿ ಆಟದ ಸುಖವನ್ನು ಇವರೇನು ಬಲ್ಲರು?? ಆ ದಿನ ನನಗೋ ಸಾವಿರ ಯುದ್ಧ ಗೆದ್ದು ಬಂದ ಸೇನಾಧಿಕಾರಿಯ ಸಂತಸ .McDonald ನ Pizza ಗೆ ಲೊಟ್ಟೆ ಹೊಡೆಯುವ ಇವರಿಗೆ ಪೋಲಿಸ್ ಚೌಕಿಯ ಸ್ಪೆಷಲ್ ಮುಂಡಕ್ಕಿ ಉಪ್ಕರಿಯ ರುಚಿ ಏನು ಗೊತ್ತು ?? ಸಿಗರೇಟು ಸೇದದಿದ್ದರೂ ಸಂಜೆ ರಾಮ ನಾಯ್ಕನ ಪಾನ್ ಶಾಪ್ ಹತ್ತಿರ ಕಾಣಿಸಿ ಕೊಂಡಿದ್ದಕ್ಕೆ ರಾತ್ರಿ ಅಪ್ಪ ಕೊಟ್ಟ ಬಾಸುಂಡೆಗಳು ಇನ್ನೂ ಮನಸ್ಸಿನಲ್ಲಿ ಹಸಿರಾಗಿವೆ ( ಬೆನ್ನ ಮೇಲೆ ಕೆಂಪಾಗಿವೆ ... ) ಇಂದಿಗೂ ಬೆಂಗಳೂರಿನಲ್ಲಿ ಪಾನ್ ಶಾಪ್ ಎದುರು ನಡೆಯುವಾಗ ನನಗರಿವಿಲ್ಲದಂತೆ ನನ್ನ ಕಣ್ಣುಗಳು ಅಪ್ಪನನ್ನು ಹುಡುಕುತ್ತವೆ .ಆದರೆ ಇವರೋ... ಅಪ್ಪನ ಜೊತೆಯಲ್ಲಿ ಕುಳಿತು ಪೆಗ್ ಹೊಡೆಯುವಾಗ ಇದೇನಾ ಸಭ್ಯತೆ ?? ಇದೇನಾ ಸಂಸ್ಕೃತಿ ?? ಎಂದು ಅನಿಸುತ್ತದೆ .

ಇನ್ನು ನನ್ನ ಬಾಲ್ಯ . ಎಸ್ .ವಿ.ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ . ಕನ್ನಡ medium . 4 ನೆ ತರಗತಿಯಲ್ಲೇ ಹದಿನಾರ್ ಹತ್ಲಿ ವರೆಗಿನ ಮಗ್ಗಿ ಕಂಠಪಾಠ . ಇನ್ನು ಆಹಾಹಾ ಎಂಥ ಪದ್ಯಗಳು ನೋಡಿ ....
======================
ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ
ದಾರವ ಜಗ್ಗಿ ದೂರದಿ ಬಗ್ಗಿ
ತಾರೆಯ ನಗಿಸುವ ನನ್ನ ಪಟ
==================

ನನ್ನಯ ಬುಗುರಿ ಬಣ್ಣದ ಬುಗುರಿ
ಗುರುಗುರು ಸದ್ದನು ಮಾಡುವ ಬುಗುರಿ
ದಾರವ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ

ಕೆಲಸಕೆ ಅಂಜದೆ ಕೆಚ್ಚೆದೆಯಿಂದಲಿ
ಗಿರಿಗಿರಿ ತಿರುಗುವ ಮೆಚ್ಚಿನ ಬುಗುರಿ
ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ಬಣ್ಣದ ಬುಗುರಿ
=======================
ಯಾವ " Twincle Twincle little star " ಗೆ ಕಡಿಮೆ ಇದೆ ನೀವೇ ಹೇಳಿ .

ಇನ್ನು ನನ್ನ ದಿನಚರಿ . ಬೆಳಿಗ್ಗೆ 6 ಗಂಟೆಗೆ ಏಳುವುದು . ಎದ್ದ ಕೂಡಲೇ ಹಲ್ಲುಜ್ಜಿ ಸ್ತೋತ್ರ ಹೇಳುವುದು . ಆಮೇಲೆ ಪಾರ್ಲೇಜೀ ಬಿಸ್ಕೆಟ್ ಮತ್ತು ಖಾಲಿ ಚಾ . 8 ಗಂಟೆಗೆ ಸ್ನಾನ ಮಾಡಿ ಇಡ್ಲಿ/ದೋಸೆ/ಉಪ್ಪಿಟ್ಟು/ಗಂಜಿ ಯಾವುದಾದರೂ ಒಂದು . ಬೆಂಗಳೂರಿನವರ ಥರ ಬ್ರೆಡ್ಡು -ಬನ್ನು ಉಹೂಂ .... ಚಾನ್ಸೇ ಇಲ್ಲ ......ಜ್ವರ ಬಂದರೆ ಮಾತ್ರ ಕಲ್ಕೂರ ಡಾಕ್ಟರು ಕೊಟ್ಟ ಕೆಂಪು ಔಷಧ , ಬ್ರೆಡ್ಡು ಮತ್ತು 2 ಲೋಟ ಚಾ ( ಒಂದು ಬ್ರೆಡ್ಡನ್ನು ಮುಳುಗಿಸಿ ತಿನ್ನಲು ). 8:30 ಕ್ಕೆ ಪಚ್ಚು , ಮುನ್ನ, ಸೀನ , ಶಾಲಿನಿ ಅಕ್ಕ , ಮತ್ತು ಲಲ್ಲಿ ನಮ್ಮ ಮನೆ ಮುಂದೆ ಪ್ರತ್ಯಕ್ಷ . ಹೆಗಲ ಮೇಲೆ ಕೈ ಹಾಕಿಕೊಂಡು ಒಂದೂವರೆ ಕಿಲೋಮೀಟರ್ ನಡೆಯುವುದು . ಸ್ಕೂಲ್ ಬಸ್ - ರಿಕ್ಷಾ ಗೊತ್ತೇ ಇಲ್ಲ . ಮಧ್ಯಾನ್ನ ಊಟಕ್ಕೆ ಮನೆಗೆ ಬಂದು ಮತ್ತೆ ವಾಪಸ್ . ಸಂಜೆ 50 p ಕೊಟ್ಟು ಶಾಲೆಯ ಹೊರಗೆ ಅಜ್ಜಿ ಮಾರುತ್ತಿದ್ದ ಕಡ್ಲೇಕಾಯಿ ತೆಗೆದುಕೊಂಡು ತಿನ್ನುತ್ತಾ ಮನೆಗೆ ವಾಪಸ್ .ಮನೆ ಇನ್ನೇನು ಬಂತು ಅನ್ನುವಾಗ ಪಚ್ಚುವಿಗೆ " ಶಾಲೆ ಗುದ್ದು ,ಮನೆ ಗುದ್ದು " ಎಂದು ಎರಡು ಗುದ್ದು ಕೊಟ್ಟು ಮನೆಯ ಒಳಗೆ ಓಡುವುದು.ಬಂದವರೇ 10 ನಿಮಿಷದಲ್ಲಿ copy ಬರೆದು ಮುಗಿಸುವುದು. ( ಹಿಂದಿ ಟೀಚರ್ ಒಳ್ಳೆಯವರು ಬರೀ 3 line maatra , ಆದರೆ ಕನ್ನಡದ ಸುಶೀಲ ಟೀಚರ್ ಮತ್ತೆ ಇಂಗ್ಲಿಷ್ ನ ದಿವಾಕರ್ ಮಾಸ್ತರಿಗೆ ದಿನಕ್ಕೆ ಒಂದು ಪುಟ ಆಗಬೇಕಂತೆ . ಅದೂ neat ಆಗದಿದ್ದರೆ ಮರುದಿನ 2 ಪುಟ .). 5:30 ರಿಂದ 7 ರ ತನಕ ಗಾಂಧೀ ಮೈದಾನದಲ್ಲಿ ಆಟ. ಆಟದ ಮಧ್ಯೆ ಜಗಳ . ದೋಸ್ತಿ ಕಟ್ . ( ಕಣ್ಣ ಮುಚ್ಚಾಲೆ ಆಟದಲ್ಲಿ ನನ್ನ ಸರದಿ ಬಂದಾಗ ಕಣ್ಣು ಮುಚ್ಚಿ 50 ರ ತನಕ ಎಣಿಸುವಾಗ ನನ್ನದು 20 ಆದ ಮೇಲೆ 41 ಶುರು ಆಗುತ್ತಿತ್ತು .ಮೊದಲಿನಿಂದಲೂ ನನ್ನ ಗಣಿತ ಸ್ವಲ್ಪ weak ). ಸ್ವಲ್ಪ ಹೊತ್ತಿನ ನಂತರ ಪಚ್ಚು ಮಾತಾಡಿಸ್ಲಿಕ್ಕೆ ಬಂದರೆ " ದೋಸ್ತಿ ಇಲ್ಲದಿದ್ದವ ಆಸ್ತಿ ಮಾಡ್ತಾನೆ " ಎಂದು ಅನುನಾಸಿಕದಲ್ಲಿ ಲೇವಡಿ .ಆದರೆ ಮರುದಿನ ಬೆಳಿಗ್ಗೆ ಏನೂ ನಡೆದೇ ಇಲ್ಲವೋ ಎಂಬಂತೆ ಮತ್ತೆ ಜೋಡಿ . ಭಾನುವಾರ ಅಡಿಗರ ತೋಟದಲ್ಲಿ ಮರಕೋತಿ -ಲಗೋರಿ . ನಿಜವಾದ ಕೋತಿಗಳೇ ಅವರ ತೋಟಕ್ಕೆ ನಮ್ಮಷ್ಟು ಹಾನಿ ಮಾಡಿರಲಾರವು .

"ನಿಮ್ಮ ಮಾಣಿ ನಮ್ಮ ಹಿತ್ತಲಿನ ಕಟ್ಟೆ ಪೂರಾ ಹಾಳು ಮಾಡಿತು ". ಅಪ್ಪನ ಬಳಿ ಅಡಿಗರ complaint . ಆ ದಿನ ನಾಗರಬೆತ್ತಕ್ಕೆ full duty. 2-3 ದಿನ ಅಡಿಗರ ತೋಟಕ್ಕೆ ಗೈರುಹಾಜರಿ .4 ನೇ ದಿನ ಶಾಲೆಯಿಂದ ಬರ್ತಾ ಇರಬೇಕಾದ್ರೆ ಗಾಯತ್ರಿ ಮಾಮಿ (ಅಡಿಗರ ಹೆಂಡತಿ ) ಸಿಕ್ಕಿ " ಅಪ್ಪ ಹೊಡೆದ್ರ ಪುಟ್ಟಾ ?? ಜಾಣ ಮರೀ.... ನಾಳೆಯಿಂದ ಆಡಿಕೊಳ್ಳಿ ... ನಾನು ಇವರಿಗೆ ಹೇಳ್ತೀನಿ.... ಎಂಬ ಆಶ್ವಾಸನೆಯೊಂದಿಗೆ ಕೆನ್ನೆ ತುಂಬಾ ಮುತ್ತು ಮತ್ತು ಕಿಸೆ ತುಂಬಾ LactoKing ಚಾಕಲೇಟು ಕೊಟ್ಟು ಕಳಿಸುವರು. ನಮ್ಮ ಮುಷ್ಕರ ಅಂತ್ಯ . ಮರುದಿನದಿಂದ ಲಂಕೆಗೆ ಮತ್ತೆ ವಾನರಸೇನೆಯ ಧಾಳಿ . ಅಡಿಗರು ಹೈರಾಣ . ಮಳೆಗಾಲದಲ್ಲಿ ಗೋಲಿ-ಚಿನ್ನಿ ದಾಂಡು -ಚೆನ್ನೆಮಣೆ . ಎಲ್ಲ ಆಟದಲ್ಲೂ ಜಗಳ -ರಾಜಿ ಇದ್ದದ್ದೇ .

8 ನೇ ತರಗತಿಗೆ ಸೈಕಲ್ ಬಂದಿತು . Bathroom Toile ಬಿಟ್ಟು ಬಾಕಿ ಎಲ್ಲ ಕಡೆ ಸೈಕಲ್ ನಲ್ಲೆ ಸವಾರಿ. ಸೈಕಲ್ ಬಿಡೋ ಹುಚ್ಚಿನಿಂದ ಶಾಲೆಗೆ 100 % ಹಾಜರಿ . ಗಣಿತ ಪ್ರಮೇಯಗಳನ್ನು ನಡುನಿದ್ದೆಯಲ್ಲೂ ಹೇಳುವಂತೆ ಗಣಪತಿ ಮಾಷ್ಟ್ರು ಹೇಳಿ ಕೊಟ್ಟಿದ್ದರು . ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳ ಆಗಮನ . ಹೊಸ ಗೆಳೆಯರು , ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನಕ್ಕೆ ಸ್ಪರ್ಧೆ . ಗಣಿತ ನಾನು ಪ್ರಥಮ ಬಂದರೆ ಸಮಾಜದಲ್ಲಿ ಗಿರೀಶ . ಆದರೆ ಯಾವತ್ತೂ ಈ ವಿಷಯದಲ್ಲಿ ಜಗಳ ಮಾಡಿದ್ದಿಲ್ಲ .ಜೊತೆಯಲ್ಲೇ ಓದಿಕೊಳ್ಳುತ್ತಿದ್ದೆವು . ವಾರ್ಷಿಕೋತ್ಸವದಲ್ಲಿ ಆಟೋಟಗಳಲ್ಲಿ ಭಾಗವಹಿಸಿ ಭಾರೀ ಮುಖಭಂಗ . 800 ಮೀಟರ್ ಓಟವನ್ನು ಓಡಲಾಗದೆ ಅರ್ಧದಲ್ಲೇ ಬಿಟ್ಟರೆ ಹೈ ಜಂಪ್ ನಲ್ಲಿ ಪ್ರತೀ ಬಾರಿ foul .ಆದರೆ ಚೆಸ್ ನಲ್ಲಿ ಸೆಮಿಫೈನಲ್ ತನಕ ಹೋಗಿದ್ದೆ . ಚತುರ್ಥಿ , ರಾಮನವಮಿ ಸಮಯದಲ್ಲಿ ಪೇಟೆ ದೊಡ್ಡ ಗಣಪತಿ ದೇವಸ್ಥಾನದ ಎದುರು ಓಕುಳಿ ಆಡಿ " ಗಜಾನನ ವಾದ್ಯ ವೃಂದ ದವರ " ರಿದಂ ಗೆ ಪಕ್ಕಾ ಕುಣಿತ . ಎಲ್ಲರೂ ಮೆಚ್ಚಿ SONY TV ಯ BOOGIE_WOOGIE ಗೆ Reccommond ಮಾಡುವವರಿದ್ದರು .10ನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ಮುಖಂಡ . ಸಣ್ಣ ಪ್ರಾಯದಲ್ಲೇ ರಾಜಕೀಯ ಪ್ರವೇಶ . ಆಪ್ತರೊಂದಿಗೆ ದ್ವೇಷ .( ಶನಿವಾರ ಸ್ಪೆಷಲ್ ಕ್ಲಾಸ್ cancel ಮಾಡಿಸಲಿಲ್ಲವೆಂದು ). Public exam . 590/625. ತಾಲ್ಲೂಕಿಗೆ ಪ್ರಥಮ . ಅಭಿನಂದನೆಗಳ ಸುರಿಮಳೆ .

ಆಮೇಲೆ ಕಾಲೇಜು ಪ್ರವೇಶ . ವಿಜ್ಞಾನ ವಿಭಾಗದ ಆಯ್ಕೆ . ಅವಳೊಡನೆ ಪ್ರೇಮ ( ಈ "ಅವಳು" ಕೇವಲ ಕಾಲ್ಪನಿಕ ). ಯೌವನದ ಹುಮ್ಮಸ್ಸಿನಲ್ಲಿ ಕನಸಿನ ಗೋಪುರಗಳನ್ನು ಕಟ್ಟತೊಡಗಿದೆನು .ಅವಳ ಗಲ್ಲದ ಹೊಂಡದಲ್ಲೇ ಬಿದ್ದು ಹೋಗಿದ್ದೆ. ನನ್ನೊಳಗಿನ ಕವಿಯನ್ನು ಬಡಿದೆಬ್ಬಿಸಿದವಳು ಅವಳೇ . ನನ್ನ ತಲೆಗೆ ಜೆಲ್ಲು (Gel) ಕೈಯಲ್ಲಿ ಸೆಲ್ಲು ವೇಷಭೂಷಣಗಳಲ್ಲಿ ಸ್ಟೈಲು ಶುರುವಾಯಿತು. ಯಾವತ್ತೂ ಕಾಲೇಜ್ bunk ಮಾಡದ ನಾನು ರಕ್ಷಾಬಂಧನದ ದಿನ ಹೆದರಿ ಊರಿನ ಹೊರಗೆ ನದಿಯ ದಂಡೆಯ ಮೇಲೆ ಇಡೀ ದಿನ ಸುಮ್ಮನೆ ಕುಳಿತಿದ್ದು ಸತ್ಯ. Lab ನಲ್ಲಿ ಅವಳು ನನ್ನ Partner ಆದಾಗ ಸ್ವರ್ಗಕ್ಕೆ ಒಂದೇ ಗೇಣು ಅನ್ನಿಸಿತ್ತು .ಅವಳನ್ನು ಗುರಾಯಿಸುತ್ತಿದ್ದ ವಿಜಯನ ಸೈಕಲ್ ಚಕ್ರದಲ್ಲಿನ ಗಾಳಿಗೆ ಸ್ವಾತಂತ್ಯ್ರ ಕೊಟ್ಟಿದ್ದೆ . ಜಾಣ ಹುಡುಗ ಬೇಗನೆ ಅರ್ಥ ಮಾಡಿಕೊಂಡು ನನಗೆ side ಬಿಟ್ಟುಕೊಟ್ಟ . ಅವಳೂ ಕೂಡ ಸುತ್ತಿ ಬಳಸಿ ಸನ್ನೆ ಕೊಡುತ್ತಿದ್ದಳು . . ಒಟ್ಟಿಗೆ ತ್ಯಾವರೆಕೊಪ್ಪ ಅಭಯಾರಣ್ಯಕ್ಕೆ ಪ್ರವಾಸ ಹೋದಾಗ ಅಂತಾಕ್ಷರಿ ಆಡುವಾಗ ಅವಳು " ಎಲ್ಲೆಲ್ಲಿ ನೋಡಲಿ.. .....ನಿನ್ನನ್ನೇ ಕಾಣುವೆ..... " ಎಂದು ಹಾಡಿ ನನ್ನನ್ನು ನೋಡಿ ತುಟಿಯಂಚಿನಲ್ಲಿ ನಕ್ಕಾಗ ನಾನು ಕಂಡ ಕನಸುಗಳನ್ನು ಲೆಕ್ಕ ಹಾಕಲು 3 Scintific calculator ಬೇಕು. ನಾನೋ ನಮ್ಮ ಮಗನಿಗೆ LKG application form ತರುವುದೊಂದೇ ಬಾಕಿ . ಆದರೆ ಮನದ ಭಾವನೆಗಳನ್ನು ಹೇಳುವ ಧೈರ್ಯ ಕೊನೆಗೂ ಬರಲಿಲ್ಲ ಇಂದಿಗೂ ಆ ಧೈರ್ಯ ಇಲ್ಲ . ಮೊನ್ನೆ ( after 8 long years ) ಶಿವಮೊಗ್ಗದಲ್ಲಿ ಅವಳ ಮನೆಗೆ ಹೋದಾಗ "ಮಾಮಾ............." ಎಂದು ಅವಳ ಮಗ Slow motion ನಲ್ಲಿ ಬಂದು ನನ್ನ ಕಾಲ ಮೇಲೆ ಕುಳಿತಾಗ 10 ಜನ ಭಯೋತ್ಪಾದಕರು ನನ್ನ ಮೇಲೆ ಸಶಸ್ತ್ರ ಧಾಳಿ ಮಾಡಿದಂತೆ ಅನಿಸಿದ್ದು ನಿಜ .

ಆಮೇಲೆ CET ಪರೀಕ್ಷೆ . B.E ಗೋಸ್ಕರ ಮೈಸೂರು S.J.C.E. ನಲ್ಲಿ ಸೀಟು ಸಿಕ್ಕಿತು . ಮೊದಲ ಬಾರಿಗೆ
ಮನೆಯಿಂದ ದೂರ ಹೋಗುತಿದ್ದೆ . ಅಲ್ಲಿ ಹೋಗಿ ಮೊದಲಿಗೆ ಅಮ್ಮನ ನೆನಪು ,ಕಷ್ಟಕರ ಪಾಠಗಳು ಇದರಿಂದ ಕಂಗಾಲಾದ ನಾನು ಅಪ್ಪನಿಗೆ ಫೋನಾಯಿಸಿ "ಅಪ್ಪ ನಾನು ಇಂಜಿನಿಯರಿಂಗ್ ಬಿಟ್ಟು ನಿನ್ನ ಜೊತೆ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ "ಎಂದಿದ್ದೆ . ಆಮೇಲೆ ಅಲ್ಲಿನ ಹಾಸ್ಟೆಲು ವಾತಾವರಣ ಒಗ್ಗಿ ಹೋಯಿತು . ಪುನಃ ಹೊಸ ವಿಚಾರ, ಹೊಸ ಗೆಳೆಯರು . ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಕೆಲಸ ಕೂಡ ಸಿಕ್ಕಿತು . ಈಗ ಬೆಂಗಳೂರಿನಲ್ಲಿ ಕೆಲಸ ಈ ಸಂಸ್ಥೆಯಲ್ಲಿ ನಿಜಾರ್ಥದಲ್ಲಿ "ಹಗಲಿರುಳೂ " ಕೆಲಸ . ಹೇಳುತ್ತಾರಲ್ಲ "ಪ್ರಪಂಚವೇ ಮಲಗಿರಬೇಕಾದರೆ ಬುದ್ಧ ಎದ್ದ ". ಈಗ ನಾನು ಕೂಡ ಒಂದು ರೀತಿಯಲ್ಲಿ ಬುದ್ಧನೇ . ಗೆಳೆಯರೆಲ್ಲರೂ ಮನೆಯಲ್ಲಿ ಸುಖವಾಗಿ ಮಲಗಿರಬೇಕಾದರೆ ನಾನು ಆಫೀಸಿನಲ್ಲಿ Night Shift ಮಾಡುತ್ತಾ ಇರುತ್ತೇನೆ .ಕೆಲಸ ಸಿಕ್ಕಿದೆ . ಒಳ್ಳೆಯ ಸಂಬಳವಿದೆ .ಹಣಕ್ಕೆ ಯಾವ ಕೊರತೆಯೂ ಇಲ್ಲ . ಎಲ್ಲ ಸರಿ . ಆದರೆ " ಹರುಷ ಅಂಗಡಿ ಸರಕೇ ?? ಹೃದಯ ದೇಶ ಚಿಲುಮೆಯದು " ಎನ್ನುವಂತೆ , ಸುತ್ತಲೂ ನೂರು ಜನರಿದ್ದರೂ " ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು ?? ಎಂದು ಅನ್ನಿಸುವಾಗ ಪ್ರತೀ ದಿನ ಪ್ರತೀ ಕ್ಷಣ ನನ್ನೂರು ನನ್ನ ಜನರು ನನ್ನ ಕುಂದಾಪುರ Oops Sorry ನನ್ನ ಶಿವಮೊಗ್ಗ ನೆನಪಾಗುತ್ತದೆ

*********************************************
** ವಿಕಟಕವಿ *************************

Comments

NilGiri said…
Jackfruit ವಿಷ್ಯ ನೋಡಿ ನನಗೊಂದು ಪ್ರಸಂಗ ನೆನಪಿಗೆ ಬಂತು. ಇಲ್ಲಿ ಕೆಲವು ಸ್ನೇಹಿತರನ್ನು ಊಟಕ್ಕೆ ಕರೆದಿದ್ದೆವು. ಭಾರತೀಯ ಅದರಲ್ಲೂ ಸಸ್ಯಹಾರೀ ಊಟವೆಂದರೆ ಇಲ್ಲಿಯವರು ಬಾಯಿ ಬಾಯಿ ಬಿಡುತ್ತಾರೆ. ಅವರ ಪ್ರಕಾರ, ಸಸ್ಯಹಾರಿಗಳು ಅದೇನು ತಾನೆ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ ಎಂದು ಕುತೂಹಲವಂತೆ! ಚಪಾತಿಯನ್ನು ಚಿಕ್ ಪೀ(chick pea) ಯಿಂದ, ದೋಸೆಯನ್ನು ಮೈದಾದಿಂದ ಮಾಡುವುದಿಲ್ಲವೆಂದು ಬಿಡಿಸಿ ಹೇಳಿಕೊಟ್ಟೆ. " ಅಕ್ಕಿ ಹೇಗೆ ಬೆಳೆಯುತ್ತದೆ? ಗಿಡದಲ್ಲಿ ಬಿಡುತ್ತದೆ ಅಲ್ಲವೆ?" ಎಂದು ಅವರೇ ಉತ್ತರಿಸಿ ತಮ್ಮ ಪಾಂಡಿತ್ಯ ಪ್ರದರ್ಶನ ( ಇಂಗ್ಲೆಂಡಿನಲ್ಲಿ ಹೆಸರಾಂತ ವೈದ್ಯರಂತೆ!) ಮಾಡಿ ನನ್ನನ್ನು ತಬ್ಬಿಬ್ಬುಗೊಳಿಸಿದ ಮೇಲೆ, ಮತ್ತೆ ಬಿಡಿಸಿ ಹೇಳುವ ನನ್ನ ಪ್ರಯತ್ನ ಕೈ ಬಿಟ್ಟೆ.

"ನೀವು-ನಿಮ್ಮೂರು-ನಿಮ್ಮ ಜನ" ಓದುತ್ತಿದ್ದರೆ ನನಗೂ ನಮ್ಮೂರು (ಮೈಸೂರು)-ನಮ್ಮ ಜನರು- ಎಲ್ಲರೂ ನೆನಪಿಗೆ ಬಂದರು.
ಭಾವನೆಗಳಿಗೆ ಜೀವ ಬಿತ್ತಿ ಬರೆದಿದ್ದೀರಿ.. ಓದಿ ಊರಿನ, ಬಾಲ್ಯದ, ನೆನಪಾಯಿತು.
Unknown said…
lo magane... shivamogga dinda bengaloorige baruvaaga kengeri yellinda barathe guru.....
ಹಹ್ಹಹ್ಹ... ನಾನೂ ಹಾಗೆ ಅಂದ್ಕೊಂಡೆ ಗಿರೀಶ್... ಆದ್ರೆ ಬೇರೆ ಯಾವ್ದೋ ದಾರಿ ಹಿಡಿದು ಹೋಗಿರಬಹುದು ಅಂತ ಸುಮ್ನಾದೆ..
Hema Powar said…
ತುಂಬಾ ಚೆನ್ನಾಗಿದೆ ಸುಮಂತರೇ. ಆದರೆ ಬೆಂಗಳೂರಿನವರೆಲ್ಲ ನೀವು ಅಂದುಕೊಂಡಿರುವಷ್ಟು ಮೆಕಾನಿಕಲ್ ಅಲ್ಲ ನಾನು ಬೆಂಗಳೂರಿನವಳೇ, ಚಿಕ್ಕಂದಿನಲ್ಲಿ ನಾನೂ ಲಗೋರಿ, ಚಿನ್ನಿ ದಾಂಡು, ಗಲ್ಲಿ ಕ್ರಿಕೇಟು ಎಲ್ಲ ಆಡಿದ್ದೇನೆ. ಬಾಲ್ಯ ಎಲ್ಲರಿಗೂ ಬಾಲ್ಯವೇ ಸಿಟಿಯವರಿಗೂ ಹಳ್ಳಿಯವರಿಗೂ. ಆದರೆ ನಿಮ್ಮ ಹಾಗೆ ಮರಕೋತಿ ಒಂದು ಸರಿಯಾಗಿ ಆಡಲು ಆಗುತ್ತಿರಲಿಲ್ಲ, ಮರಗಳ ಬದಲು ಮನೆಗಳ ಮೇಲೆ ಹತ್ತಬೇಕಿತ್ತಷ್ಟೆ :)
ಪ್ರೀತಿಯ ಹರಿ /ಗಿರಿ,

ನಾನು ಮೊದಲೇ ಹೇಳಿರುವಂತೆ "ಕಲ್ಪನೆಯ ಕುದುರೆ " ಏರಿದ್ದೇನೆ . ಅದಕ್ಕೆ ಲಗಾಮೇ ಇಲ್ಲ . ಅದು ಮನಸ್ವೇಚ್ಚೆ ಎಲ್ಲ ಕಡೆ ಓಡುತ್ತದೆ . ಶಿವಮೊಗ್ಗದಿಂದ ಬೆಂಗಳೊರಿಗೆ ಬರಬೇಕಾದರೆ ಅದು ಕೆಂಗೇರಿ ಏನು ?? ಕಲಾಸಿಪಾಳ್ಯಕ್ಕೂ ಬರಬಹುದು U Turn ತೆಗೆದುಕೊಂಡು ಮೈಸೂರಿನ ಕುಕ್ಕರಹಳ್ಳಿ ಕೆರೆಗೂ ಹೋಗಬಹುದು . ಆದರೆ ಲೇಖಕನಿಗೆ ಓದುಗನೇ ದೇವರು . ನಿಮ್ಮನ್ನು ಸಂತೋಷಪಡಿಸಲು ಆ ಸಾಲನ್ನು ಬದಲಿಸಿದ್ದೇನೆ . ಅಂದ ಹಾಗೆ ಬೆಂಗಳೂರಿನಲ್ಲಿ ದುರ್ನಾತ ಬರಲು ಕೆಂಗೇರಿಯೇ ಬೇಕಾಗಿಲ್ಲ ಬಹಳ ಜಾಗಗಳುಂಟು .

ಅಮೂಲ್ಯ ಸಲಹೆಗೆ ಧನ್ಯವಾದಗಳೊಂದಿಗೆ
ನಿಮ್ಮವ ,
ವಿಕಟಕವಿ
ತುಂಬಾ ಚನ್ನಾಗಿ ಬರೆದಿದ್ದೀರ.. ಪಾತ್ರಗಳ ಸೃಷ್ಟಿ, ಬರವಣಿಗೆ ಶೈಲಿ ಇಷ್ಟವಾಯಿತು
ranjith said…
ಎಲ್ಲಾ ಕಾಲ್ಪನಿಕ ಅಂತ ಹೇಳಿ ಸೇಫ್ ಆಗಿದ್ದೀರಿ;-)

ಕಲ್ಕೂರ ಡಾಕ್ಟರನ್ನು ಕುಂದಾಪುರದಿಂದ ಶಿವಮೊಗ್ಗಕ್ಕೆ ಕಳಿಸಿದ್ದೀರಿ.ಹಾಗೆಯೇ ಈ ಅಡಿಗರ ಹಿತ್ತಲು ಕುತೂಹಲ ಹುಟ್ಟಿಸಿತು.(ನೀವು ಖಂಡತುಂಡವಾಗಿ ಕಾಲ್ಪನಿಕ ಅಂದಿದ್ದರೂ,ವಾಸ್ತವಕ್ಕೆ ಹೋಲಿಸಿಕೊಂಡು ಸಂತಸಪಡುತ್ತಿದೆ ನೋಡಿ ಮನಸ್ಸು!)

ಭಾಷೆ,ವಿವರಣೆ ನವಿರಾಗಿದೆ.ಚೆನ್ನಾಗಿ ಓದಿಸಿಕೊಂಡು ಹೋಯಿತು.

- ರಂಜಿತ್.
Anonymous said…
ನಮ್ಮ ಜೇಸಿ ಹುಡ್ಗ :)
ಸಕ್ಕತ್ತಾಗಿ ಬರ್ದಿದೀಯ ಗುರು. ನಾನು ಶಿವಮಗ್ಗದಲ್ಲಿ ಓದಿದ್ದು ಅಲ್ಲವಾದ್ರು ಶಿವಮೊಗ್ಗ ಜಿಲ್ಲೆಯ ಒಂದು ಊರಿನಲ್ಲಿ. ಶಿವಮೊಗ್ಗ ಪ್ರಯಾಣ ಆವಾಗಾವಾಗ ಆಗ್ತಾ ಇತ್ತು. ಓದ್ತಾ ಇದ್ರೆ ಫುಲ್ ಫ್ಲಾಶ್‍ಬ್ಯಾಕ್. ತುಂಬಾ ಥ್ಯಾಂಕ್ಸ್ ಈ ಬರಹಕ್ಕೆ
ತುಂಬಾ ಧನ್ಯವಾದಗಳು .... ಆದರೆ ತಾವು ಯಾರು ಅಂತ ತಿಳೀಲಿಲ್ಲ... ಕ್ಲಿಕ್ ಮಾಡಿದ್ರೆ ಬರೀ ಫೋಟೋ ಇದೆ... :) :)
Anonymous said…
ಅಲ್ಲೇ profile ಅಲ್ಲಿ ಕ್ಲಿಕ್ ಮಾಡಿದ್ರೆ ಹೆಸ್ರಾದ್ರು ಸಿಗೋದು.
ಮನೋಜ್ ಅಂತ. JCE CS 2004 ಬ್ಯಾಚ್
ಏನೋ ಕಚ್ಚಿದ್ದಿಯಾ.. ಮೆಚ್ಚಬೇಕಾದದ್ದೇ... ಕುಂದಾಪುರದವನಾಗಿ ಶಿವಮೊಗ್ಗಾ ಬಗ್ಗೇ ಹಿಂತಾಪರಿ ಕೊರದಿ ಅಂದ್ರ ಭಾರಿ ಆತ್..

ಇದನ್ನೇನು ಫುಲ್ ಓದಿಲ್ಲಾ.. ಆದ್ರು ಓದಿದಷ್ಟೂ ಛೊಲೋ ಇತ್ತು..
Anonymous said…
Sir kuch samjh me nahi aa raha hai ... fir bhi itni mehnat ki hai aapne to ... BRAVO !!!

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ