Skip to main content

ಶಾಂತಿಮಂತ್ರ

**********************************************************
ಈ ಲೇಖನವನ್ನು ಓದುವ ಮೊದಲು ನನ್ನ "ನಾನು - ನನ್ನ ಸಂಸಾರ " ಲೇಖನ ಓದಿದರೆ ಇದರ ಹಾಸ್ಯದ ಹಿನ್ನೆಲೆಯ ಕುರಿತು ತಿಳಿಯಬಹುದು .
http://shanuisking.blogspot.com/2009/03/blog-post_17.html
**********************************************************
ಊಫ್ .. ಈ ಜನಕ್ಕೆ ಯಾವ್ ಟೈಮ್ ನಲ್ಲಿ ಏನ್ ಮಾತಾಡ್ಬೇಕು ಅನ್ನೋದೇ ಗೊತ್ತಾಗಲ್ಲ ....ಇಷ್ಟು ದಿನ ನಾನು ಶಾಂತಿ ಬಗ್ಗೆ ಬರೆದ ಎಲ್ಲ ಲೇಖನಗಳನ್ನು ಅವಳಿಗೆ ತಿಳಿಯದಂತೆ ಸೇಫ್ ಲಾಕರನಲ್ಲಿ ಇಟ್ಟಿದ್ದೆ . ಮೊನ್ನೆ ಶನಿವಾರ ಸಂತೆಗೆ ಇವಳನ್ನು ಕರೆದುಕೊಂಡು ಹೋದಾಗ ಭಾದ್ರಪದ ಮಾಸ ಬರದಿದ್ದರೂ ಸಡನ್ನಾಗಿ ಗಣೇಶ ವಕ್ಕರಿಸಿಕೊಂಡು ಬಿಟ್ಟ . "ಏನ್ ಅತ್ತಿಗೆ ?? ನುಗ್ಗೆಕಾಯಿ ಖರೀದೀನಾ ??? ಎಂದು ಕೇಳಿ ಬಿಡೋದೇ ??. ನನ್ನ ಕಣ್ಸನ್ನೆ ನೋಡ್ತಾನೆ ಇಲ್ಲ ....... ಯಾಕೋ ಗಣೇಶ ಹೀಗೆ ಯಾಕೆ ಕೇಳ್ತಾ ಇದ್ದೀಯಾ ?? ಎಂದು ಇವಳು ಕೇಳಿದಾಗ ಮಗ್ಗಿ ಕಂಠಪಾಠ ಹೊಡೆದಂತೆ ನನ್ನ ಲೇಖನದ ಎಲ್ಲ ಜೋಕುಗಳನ್ನು ಕಕ್ಕಿಬಿಟ್ಟ ..... ಏನ್ ಚೆನ್ನಾಗಿ ಬರೆದಿದ್ದಾರೆ ನಿಮ್ ಮನೆಯವರು ಅಂತ ಹೊಗಳಿಕೆ ಬೇರೆ . ನನಗೆ ನಗುವುದೋ ಅಳುವುದೋ ತಿಳಿಯಲಿಲ್ಲ . ಸಾಯಂಕಾಲ ಮನೆಯಲ್ಲಿ ನನಗೆ ನಡೆದ ಸತ್ಯನಾರಾಯಣ ಪೂಜೆಯ ಬಗ್ಗೆ ಇನ್ಯಾವತ್ತಾದರೂ ಬರೆಯುತ್ತೇನೆ . ಈಗ ಮುನಿಸಿಕೊಂಡ ಶಾಂತಿಯನ್ನು ಒಲಿಸಿಕೊಳ್ಳಲು ಈ ಶಾಂತಿಮಂತ್ರ .....

*************** ಓಂ !!!!! *************
ಮೌನ ಮುರಿದು ಮಾತನಾಡು
ನಗುತ ನನ್ನ ನಲ್ಲೆ
ಮಾತು ಬಿಟ್ಟು ಕೊಲುವೆ ಏಕೆ
ನೀನು ಮೌನದಲ್ಲೇ ??

ಸಿಟ್ಟಲ್ಲಿ ಯಾಕೆ ಮಾಡ್ಕೊಂಡಿದ್ದಿ
ನೀನ್ ಮೂತೀನ್ ಉಬ್ಬಿದ ಪೂರಿ
ನಿನ್ನೆಯಿಂದ್ ಹೇಳ್ತಿದ್ದೀನಿ
I am very sorry !!!!

ಉಹೂ ಇಲ್ಲ ... ಆ ಲೈನು ಕೆಲಸ ಮಾಡಲಿಲ್ಲ . ಕಪಾಟಿನ ಬಟ್ಟೆಗಳು ಸೂಟ್ ಕೇಸ ಒಳಗಡೆ ನುಗ್ಗುತ್ತಿವೆ . ಅದರ ಮಧ್ಯೆ ಇವಳು ಕಣ್ಣೀರು ತುಂಬಿಕೊಂಡು ಹೇಳಿದಳು ...

ಆಗ್ಲಿ ಏನೂ ನಾಳೆ ನಾನು
ಹೋಗ್ತೀನಿ ಶಿವಮೊಗ್ಗೆ
ಆಮೇಲೆ ನೀನು ತಂದುಕೊಂಡು ತಿನ್ನು
ಸೌತೆ - ಗುಳ್ಳ- ನುಗ್ಗೆ !!

ಇರಲಿ ಬತ್ತಳಿಕೆಯ ಬೇರೆ ಅಸ್ತ್ರ ಪ್ರಯೋಗ ಮಾಡಬೇಕಾಯ್ತು . ಸ್ವಲ್ಪ ಬೆಣ್ಣೆ ಹಚ್ಚಿದರೆ ಒಲಿಯುತ್ತಾಳೋ ನೋಡೋಣ ಅಂದುಕೊಂಡು ಈ ಸೆಂಟಿ ಡೈಲಾಗು ಹೊಡೆದೆ .

ತವರಿಗೆ ಹೋಗ್ತೀನಂತ ಮಾತ್ರ
ಹೇಳ್ಬೇಡ್ವೆ ನನ್
ರಾಣಿ ನೀನಿಲ್ದೆ ಬದುಕೊದಿಲ್ವೇ
ಈ ನಿನ್ ಗಂಡ ಅನ್ನೋ ಪ್ರಾಣಿ

ಅಬ್ಬಾ ... ಪರಿಸ್ಥಿತಿ ಕರ್ಫ್ಯೂನಿಂದ ಸೆಕ್ಷನ್ ೧೪೪ ಗೆ ಇಳಿಯಿತು . ಈಗ ಸೃಷ್ಟಿಯಾಗಿದ್ದ ಉದ್ವಿಗ್ನ ವಾತಾವರಣ ಹತೋಟಿಯಲ್ಲಿ ಬಂತು , ಬಟ್ಟೆಗಳು ಸೂಟ್ ಕೇಸ ನಿಂದ ಕಪಾಟು ಸೇರಿಕೊಂಡವು . ಆದರೆ ಬೆಳಿಗ್ಗೆಯಿಂದ ಒಳಗಡೆ ಜಪ್ತಿಯಾಗಿದ್ದ ಸಿಟ್ಟು ಒಮ್ಮೆಲೇ ಹೊರಬಂದಿತು .

ಊಟಕ್ಕೆ ನಾನು ಬಡ್ಸೋದಿಲ್ಲ
ಅನ್ನದ ಒಂದೂ ಅಗುಳು
ಇಲ್ಲಿವರ್ಗೂ ನನ್ನನ್ ಬೈಕೊಂಡ್
ನೀನ್ ಏನೇನ್ ಬರೆದೆ ಬೊಗಳು

ಇಷ್ಟು ಹೇಳಿ ಮುಖ ತಿರುಗಿಸಿ ಮತ್ತೆ ಮೌನವೃತ ಧಾರಣೆ ಮಾಡಿದಳು ಹೆದರಿಬಿಟ್ಟೆ !!! ಕಣ್ಣಿನಲ್ಲಿ ಜ್ವಾಲಾಮುಖಿ .... ನವರಾತ್ರಿಗೆ 3 ತಿಂಗಳು ಇರಬೇಕಾದ್ರೆನೆ ನನಗೆ ದುರ್ಗೆಯ ದರ್ಶನ. ಇರಲಿ ಇವಳ ಸಿಟ್ಟು ನನಗೆ ಗೊತ್ತಿಲ್ವೆ ??? ನಾನು ಮುಂದುವರಿಸಿದೆ .

ಶಾಂತಿ ಅನ್ನೋ ಹೆಸರಿದ್ರೂ
ನಿನಗ್ಯಾಕೆ ಇಷ್ಟೊಂದು ಕೋಪ ??
ಚಿಕ್ಕ ಪುಟ್ಟ ವಿಷಯಕ್ಕೆ ಯಾಕೆ ತಾಳ್ತಿ
ಮಾಂಕಾಳಿ ಸ್ವರೂಪ ??

ಸ್ವಲ್ಪ ಮುಂಚೆ ಕೂಗ್ತಿದ್ದೆ
ಈಗ್ಯಾಕೆ ಸೈಲೆಂಟ್ ಮೋಡು??
ಇವತ್ತಿಂದ ನಿನಗಾಗಿ ನಾನ್
ಏನೇನ್ ಮಾಡ್ತೀನಿ ನೋಡು

ರನ್ನ ಚಿನ್ನ ಬಂಗಾರಾಂತ
ಪ್ರೀತಿಯಿಂದಲೇ ಕರೀತೀನಿ
"ನನ್ ಹೆಂಡ್ತಿ ನನ್ ಪ್ರಾಣ " ಅಂತ
ಹೊಸ ಲೇಖನ ಬರೀತೀನಿ

ಉಪ್ಪೇ ಹಾಕದ ಉಪ್ಪಿಟ್
ಕೊಟ್ರು ಚಪ್ಪರಿಸ್ಕೊಂದು ತಿಂತೀನಿ
ಬೆಲ್ಲದ ನೀರಿಗೆ ಪಾಯಸ ಅಂದ್ರೂ
ಸೂಪರ್ ಅಂತ್ಲೇ ಅಂತೀನಿ

ಕಣ್ಣ ಸನ್ನೇಲೆ ಕುಣೀತೀನಿ
ನಾನ್ ನಿನ್ನ ಎಲ್ಲ ತಾಳಕ್ಕೂ
ಕಣ್ಣೀರ್ ಹಾಕದೆ ತಿಂತೀನಿ
ನೀ ಮಾಡಿದ ಪನ್ನೀರ್ ಪಾಲಕ್ಕು

ಮೈಸೂರ್ ಮಲ್ಲಿಗೆ ನಿತ್ಯ ತಂದು
ನಾ ನಿನ್ ತಲೆಗೆ ಮುಡಿಸ್ತೀನಿ
ಎಲ್ಲ ಹಬ್ಬಕ್ಕೂ ರೇಷ್ಮೆ ಸೀರೆ
ತಪ್ಪದೆ ನಾನು ಕೊಡಿಸ್ತೀನಿ

ಸಡನ್ನಾಗಿ ಇವಳಿಗೆ ಗಣೇಶನ ಮಾತುಗಳೆಲ್ಲ ನೆನಪಿಗೆ ಬಂದವೋ ಏನೋ ... ಮತ್ತೆ ಶುರು ಹಚ್ಚಿಕೊಂಡಳು

ಡ್ರೈವಿಂಗ್ ಬಗ್ಗೆ ಬರ್ದಿರೋದು
ನಂಗೆ ಚೆನ್ನಾಗಿ ಗೊತ್ತು
ಟ್ರಾಫಿಕ್ ಪೋಲಿಸ್ ಮಗಳನ್ನೇ
ನೀವ್ ಹುಡ್ಕೊಬೇಕಾಗಿತ್ತು .

ಟ್ರಾಫಿಕ್ ಪೋಲಿಸ್ ಮಗಳನ್ನ
ನಾನು ತುಂಬಾ ಪ್ರೀತಿಸ್ತಿದ್ದೆ
ನನ್ ಗ್ರಹಚಾರ ಹಾಳಾಗಿತ್ತು
ನೀನ್ ಬಂದು ನಂಗೆ ಗಂಟು ಬಿದ್ದೆ

ಅನ್ನೋಣ ಎಂದುಕೊಂಡೆ ಆಮೇಲೆ ತಮಾಷೆ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಕಷ್ಟ ಎಂದುಕೊಂಡು ಈ ಕವನ ಮತ್ತು ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಕೆಳಗಿನ ಸಾಲುಗಳನ್ನು ಹೇಳಿದೆ .

ನನಗೂ ನಿನಗೂ ಸೆಟ್ ಆಗೈತೆ
ಏಳೇಳು ಜನ್ಮದ ನಂಟು
offer expire ಆಗಲಿಕ್ಕೆ
ಇನ್ನೂ ಆರು ಜನ್ಮ ಉಂಟು !!

ಅಬ್ಬ !!! ತುಟಿಯಂಚಿನಲ್ಲಿ ಅಪ್ರಯತ್ನವಾಗಿ ಮುಗುಳ್ನಗು ಮಿಂಚಿ ಮರೆಯಾಯಿತು. ಪುನಃ ಸಿಟ್ಟಿನ ನಾಟಕ ಮಾಡತೊಡಗಿದಳು . ನಮ್ಮ ದೇವರ ಬುದ್ಧಿ ನಮಗೆ ಗೊತ್ತಿಲ್ವೆ ??? ಕಬ್ಬಿಣದಂತೆ ಇವಳ ಮುಖ ಕೂಡ ಕೆಂಪಾಗಿದೆ ಒಂದೆರಡು ಪ್ರೀತಿಯ ಮಾತಿನ ಪೆಟ್ಟು ಸಾಕಾಗುತ್ತದೆ ಎಂಬುದನ್ನು ಮನಗಂಡು ಡೈಲಾಗುಗಳನ್ನು ಮುಂದರಿಸಿದೆ.

ನಗಲು ನೀನು ಮರೆಯುವೆ ನಾನು
ಇರುವ ಎಲ್ಲ ನೋವು
ನಿನ್ನ ನಗುವೇ ನನ್ನ ಎದೆಗೆ
ಝಂಡು ಬಾಮು ಮುವೂ (moov )

ನಾನೂ ನಿಂಗೆ ಪ್ರಾಣ ಅನ್ನೋ
ಸತ್ಯಾನ್ನ ನೀನು ಒಪ್ಪಿಕೊ
ಸಿಟ್ಟನ್ ಬಿಟ್ಟು ಮುತ್ತ ನ್ ಕೊಟ್ಟು
ಒಮ್ಮೆ ನನ್ನನ್ನ ಅಪ್ಪಿಕೋ !!! :)

ಇಷ್ಟು ಹೇಳುತ್ತಲೇ ನಾಚಿ ನೀರಾಗಿ ನನ್ನವಳು slow motion ನಲ್ಲಿ ನನ್ನ ಬಳಿ ಬಂದಳು . ರೀ ..... ಏನೇ ಹೇಳಿ ಆರ್ಟಿಕಲ್ಲು ಚೆನ್ನಾಗಿತ್ತು . ನೀವು ಆಚೆ ಹೋದಾಗ ಮನಸ್ಸು ತುಂಬಿ ನಕ್ಕುಬಿಟ್ಟೆ ಅಂದಾಗ ನನ್ನ ಲೇಖನಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಯಿತು . ಹೀಗೆ ನನ್ನ ಸಮಸ್ಯೆ ದೂರವಾಯಿತು . ಒಂದು ನಿಮಿಷ ತಡೀರಿ ಈ ಗಣೇಶನ ಕುಶಲೋಪಚಾರ ಮಾಡಿ ಬರುತ್ತೇನೆ

*************** ಓಂ ಶಾಂತಿ ಶಾಂತಿ ಶಾಂತಿಃ******************** ****************************ವಿಕಟಕವಿ ********************

Comments

ಸೂಪರ್ ರೀ ಶಾನಭೋಗ ರೆ ...... ನಿಮ್ಮ ಕವನಗಳು ತುಂಬಾನೇ ಚೆನ್ನಾಗಿವೆ. ನಕ್ಕು ನಕ್ಕು ಸಾಕಾಯಿತು.
ಧನ್ಯವಾದಗಳು ಕುಲಕರ್ಣಿಯವರೇ
Anonymous said…
ಯಾವಾಗ ಮದುವೆ ಆಯಿತು ಸುಮಂತ್? ಕರೀಲೆ ಇಲ್ಲ! :ಪ
ಎಲ್ಲ ಲೇಖನಗಳೂ ಚೆನ್ನಾಗಿವೆ, ಜೇಸಿ ನೆನಪುಗಳು ಇನ್ನೂ ತಾಜಾ ಆಯಿತು :-)
ಬೊಂಬಾಟ್ ಚುಟುಕು ಕವನಗಳು.. ಸಂದರ್ಭಕ್ಕೆ ಸರಿಯಾಗಿವೆ.. ಇವನ್ನೆಲ್ಲ ಸೇರಿಸಿ ಕವನ ಸಂಕಲನ ಯಾಕೆ ಮಾಡಬಾರದು ನೀವು?

Popular posts from this blog

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...

ನಾನು ನನ್ನ ಸಂಸಾರ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . " ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ ..... ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು ... ಹೌದು ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ ನನ್ನವಳ "ಹಸ್ತಗುಣದ" ಬಲಿಪಶುವಾಗಿದ್ದ ರಮೇಶಣ್ಣ ... ಲೋ Insurance Premium ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ . ಒಹ್ ..... ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಸುಶಾಂತಿ . ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ "ಪಾರ್ವತಿಯ " ತರಹ ಇವಳು ಕೂಡ "ಮುದ್ದಿನ ಮನೆಮಗಳು ". " ಆ...