Skip to main content

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ??
ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ ||
ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ
ಅಪಾರ್ಥವಾದರೆ ಗತಿಯು ಕೋದಂಡರಾಮ ||

ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .

ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳುತ್ತಿದ್ದೀರಾ ??... ಆಗಿದ್ದಿಷ್ಟೆ .....ಓದಿ ಮತ್ತು ಹೀಗಾದರೆ ನಾನೇನು ಮಾಡ್ಲಿ ನೀವೇ ಹೇಳಿ ??

ಮೊದಲನೆಯವಳು ಐಶ್ವರ್ಯ . ನನ್ನ ಪಂಚಪ್ರಾಣದಲ್ಲಿ ಆರನೇಯವಳಾಗಿದ್ದಳು. ಎರಡು ಜೀವ ಒಂದು ದೇಹ .. ಕ್ಷಮಿಸಿ .. ಎರಡು ದೇಹ ಒಂದು ಜೀವ ಅನ್ನೋ ಥರ ಇದ್ವಿ . ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೆ .ಒಂದು ಸುಂದರ ಸಂಜೆ ಭೇಟಿ ಮಾಡಿದಾಗ ಲೋ.. ಸುಮ್ಮು .. ನಂಗೆ ಕಬ್ಬನ್ ಪಾರ್ಕ್ ನಲ್ಲಿ ಕಬ್ಬಿನ್ ಜ್ಯೂಸ್ ಕುಡಿಸು ರಾತ್ರಿ " ಮುಂಗಾರು ಮಳೆ " ಕರೆದುಕೊಂಡು ಹೋಗು ಅಂದಳು . ಅವಳು ಕೇಳುವ ಮೊದಲೇ ಬೆಳಿಗ್ಗೆ ರಂಜಿತ್ ಹತ್ರ ಬೈಕ್ arrange ಮಾಡಿದ್ದೆ ಹಾಗೂ ನನ್ನ ಜೇಬಿನಲ್ಲಿ ಬ್ಲಾಕ್ ನಲ್ಲಿ 250/- ಕೊಟ್ಟು ತಂದ ಎರಡು ಟಿಕೆಟ್ ಇತ್ತು . ಸುಮ್ಮನೆ ಕಾಲೆಳೆಯೋಣ ಅಂಥ " ನೋಡೇ .. ಜ್ಯೂಸ್ ಎಲ್ಲ ಕುಡಿಸಲ್ಲ ನಾನು ಕಂಜೂಸು ,,,,, ಮತ್ತೆ ಏನು ?? ಮುಂಗಾರು ಮಳೆನಾ ?? ಈಗ ಆಷಾಡಿ ಮಳೆ ಕೆಟ್ಟದಾಗಿ ಬರ್ತಾ ಇದೆ 8 ಗಂಟೆ ಬೇರೆ ಆಗಿ ಹೋಗಿದೆ . ರಿಕ್ಷಾ ದವನು ಒಂದೂವರೆ ಮೀಟರ್ ಚಾರ್ಜ್ ಕೇಳುತ್ತಾನೆ ... ಯಾಕೆ ಸುಮ್ನೆ ?? ನೋಡು ಪ್ರೀತಿಯಲ್ಲಿ ತಾಳ್ಮೆ ಇರಬೇಕು . ಇನ್ನು ಒಂದೆರಡು ತಿಂಗಳಿನಲ್ಲೇ ಉದಯ ಟೀವಿ ಯಲ್ಲಿ ಸೂಪರ್ ಹಿಟ್ ಚಲನಚಿತ್ರವಾಗಿ ಬರುತ್ತೆ ಆಗ ಒಟ್ಟಿಗೆ ಕೂತು ನೋಡೋಣ ಎಂದೆ . ಅವಳು ಏನೂ ಹೇಳಲಿಲ್ಲ ..... ಕೂಗಿದರೂ ತಿರುಗದೆ ನಾಗಮ್ಮನಂತೆ ಬುಸುಗುಡುತ್ತ ಓಡಿ ಹೋದಳು . ಮರುದಿನ ನನ್ನ ಕಪಾಳಕ್ಕೆ ಹೊಡೆದಂತೆ ಕಣ್ಣ ಮುಂದೆ ಆ ಶೆಟ್ರ ಮಗ ಸುಪ್ರೀತ್ ಜೊತೆ ಬೈಕ್ ನಲ್ಲಿ ಕೂತು ಹೋಗ್ತಾ ಇದ್ದಳು . ನಾನೇನು ಮಾಡ್ಲಿ ನೀವೇ ಹೇಳಿ??

ಇನ್ನು ಎರಡನೆಯವಳು ಶಶಿಕಲ . ಇವಳ ಬಗ್ಗೆ ಏನು ಹೇಳಲಿ ..... ಪ್ರೀತಿಯಿಂದ ನನ್ನನ್ನು 'ಸು ' ಎನ್ನುತ್ತಿದ್ದಳು ನಾನೂ ಕೂಡ ಪ್ರೀತಿಯಿಂದ 'ಶ್ಶ...' ಎಂದು ಕರೆಯುತ್ತಿದ್ದೆ . ಒಂದು ದಿನ " ಏನೋ ಸು ... ರೈಲು , ಹೋಟ್ಲು ಅಂಥ ಏನೇನೋ ಲೇಖನ ಬರೀತೀಯ . ನನ್ನ ಮೇಲೆ ಒಂದು ಕವನ ಬರೀಬಾರ್ದ ?? ಅಂದಳು . ಸರಿ ತೊಂಡೆ ಬೆಂಡೆ ಎಂದು ಒಂದು ನಾಲ್ಕು ತರಕಾರಿ ಹಾಕಿ ಕವನ ಬರೆದ್ರೆ ಆಯಿತು ಅಂದುಕೊಂಡೆ .ನೋಡು .. ಬರೆದ್ರೆ ಒಂದು ಥರಾ Different ಆಗಿ ಇರಬೇಕು ಅಂಥ Condition ಹಾಕಿದಳು .ಸರಿ 'ಶ್ಶ...' ನಾಳೆ ಕೊಡ್ತೀನಿ ಎಂದೆ . ರಾತ್ರಿಯಿಡೀ ಯೋಚಿಸಿ ಈ ಕವನ ಬರೆದೆ...

ಓ ನನ್ನ ಶನೀ.... ( ಅದು 'ಶ್ಶ.. + Honey = ಶನಿ ----> ಕಪಾಳಮೋಕ್ಷ ಸಂಧಿ )
ನಾನು ನಿನ್ನ ಪ್ರೇಮದ ಅಭಿಮಾನಿ
ಹಗಲಿರುಳೂ ಇರಲಿ ನಿನ್ನ ಒಲುಮೆ
ಅದೇ ನನ್ನ ಪಾಲಿನ ಜೀವ ವಿಮೆ ||

ನಿನ್ನ ನಡೆಯೋ ದಸರಾದ ಆನೆ |
ಕುಣಿತ ಮಂಗನಿಂದ ಕಲಿತಿದ್ದು ತಾನೆ ??
ಹಾಡಿದರೆ ಸತ್ತೆ ಓಡುವುದು ಕತ್ತೆ
ಹಾಡು ಕೇಳಿದ ಕೆಪ್ಪ ಇಂದು ನಾಪತ್ತೆ ||

ನಿನ್ನ ತುಟಿಯು ಮಟ್ಟಿಗುಳ್ಳ
ನಿನ್ನ ನಡುವೋ ಬೂದು ಗುಂಬ್ಳ ||
ಕಪ್ಪೆಯಂತೆ ನಿನ್ನ ಕಣ್ಣು
ನಿನ್ನ ಮುಖವೋ ಹಲಸಿನ ಹಣ್ಣು ||


ಮತ್ತೆ ನೋಡಿ ಆ ದಿನ ಮಾರ್ಕೆಟ್ ನಲ್ಲಿ ತೊಂಡೆಕಾಯಿ 5/- Kg ಮಟ್ಟಿಗುಳ್ಳ 30/- Kg . ಯಾಕೆ ನನ್ನವಳನ್ನು Cheap ತರಕಾರಿಗೆ ಯಾಕೆ ಹೋಲಿಸಲೆಂದು ತಮಾಷೆಗೆ ಮಟ್ಟಿಗುಳ್ಳಕ್ಕೆ ಹೋಲಿಸಿದೆನು .ಮತ್ತೆ ಮೀನಾಕ್ಷಿ ಎಂದು ಎಲ್ಲ ಕಡೆ ಕರೀತಾರೆ ಮೀನು ಮತ್ತು ಕಪ್ಪೆ ನೀರಿನಲ್ಲಿ ಅಕ್ಕ -ತಂಗಿ ಅಲ್ವಾ ?? ಅದಕ್ಕೆ ಹೀಗೆ ಬರೆದೆ .ನೀವು ಯಾರದ್ರೂ ಇಂಥ ಕವನ ಬರೆದಿದ್ರಾ ?? ಹೇಗೆ different ಆಗಿಲ್ವಾ ?? ಆದರೆ ಇಲ್ಲ .. ಮುಖ ಅರ್ಧ ಬೆಂದ ಆಲೂಗಡ್ಡೆ ಥರ ಮಾಡಿಕೊಂಡು ಅಡ್ರೆಸ್ ಕೂಡ ಕೊಡದೆ ಓಡಿ ಹೋದಳು . ನಾನೇನು ಮಾಡಲಿ ನೀವೇ ಹೇಳಿ??? .....

ಇನ್ನು ಮೂರನೆಯವಳು orkut ನಲ್ಲಿ ಸಿಕ್ಕಿದಳು . ಲತಾ ..... ಮೊದಲು ಸ್ವಲ್ಪ tragedy ಅನ್ನಿಸಿತು . ಎರಡನೇ ವಾರಕ್ಕೆ ಆಕೆಯಿಂದ "Dear" "Honey" ಸಂಬೋಧನೆ ಶುರುವಾಯಿತು . ಆಮೇಲೆ ಲವ್ ಅಂಥಾ ಏನೂ ಇಲ್ಲದಿದ್ದರೂ ಮಾತಿನಲ್ಲಿ ಸ್ವಲ್ಪ ಸಲುಗೆ ಬೆಳೆಯಿತು . ಒಮ್ಮೆ ಹೀಗೆ ಭೇಟಿ ಮಾಡೋಣ ಎಂದು ಅವಳ ಮನೆಗೆ ಹೋದೆನು . ಲತಾ .. ಬಂದಳು .... ಉಡುಪಿಯಲ್ಲಿ ರಥಬೀದಿ ತುಂಬಾ ರಂಪಾಟ ಮಾಡಿದ "ಲಕ್ಷ್ಮೀಶ " ನ ( ಆನೆ ) ಅಪರಾವತಾರದಂತಿದ್ದಳು. ಮನೆಯ ಗೋಡೆ ತುಂಬ ಇವಳ solo photo ಇತ್ತು . ಯಾಕೆ ಸರ್ ಎಲ್ಲ ಫೋಟೋ ದಲ್ಲಿ ಒಬ್ಳೇ ಇದ್ದಾಳೆ ಎಂದು ಅವಳ ಅಪ್ಪನನ್ನು ಕೇಳಿದೆ . ಇಲ್ಲಪ್ಪ ಅದು ಗ್ರೂಪ್ ಫೋಟೋ ನೆ ಆದ್ರೆ ಒಂದೇ ಫ್ರೇಮ್ ನಲ್ಲಿ ಎಲ್ಲರು ಬಂದಿಲ್ಲ , ಎಂಟು ಮಂದಿ ಅವಳ ಹಿಂದೆ ನಿಂತಿದ್ದಾರೆ ಅಂದರು . Corner ನಲ್ಲಿ ಅವಳ ಮತ್ತು ಅವಳ ತಾಯಿಯ ಫೋಟೋ ನೋಡಿ ಅದು ಹೇಗೆ ಸರ್ ... ಕೇಳಿದೆ.... ಅದಾ ?? adobe Photoshop ನಲ್ಲಿ edit ಮಾಡಿ ಪ್ರಿಂಟ್ ಹೊಡೆಸಿದ್ದು ಅಂದರು . ಇವಳ ತಾಯಿ ಗರ್ಭಿಣಿ ಇರಬೇಕಾದರೆ ಬಸ್ಸಿನಲ್ಲಿ ಒಂದೂವರೆ ಟಿಕೆಟ್ ತೆಗೊತಿದ್ರಂತೆ . ಸರಿ ಎಂದು ಅವಳ ಅಪ್ಪನಿಗೆ ಕಿಟ್ಟೆಲ್ ಡಿಕ್ಷನರಿ ಗಿಫ್ಟ್ ಕೊಟ್ಟು (ಕೂಷ್ಮಾಂಡ ಅಂಥ ಹೆಸರಿಡೋದು ಬಿಟ್ಟು ಲತಾ ಅಂಥ ಹೆಸರು ಇಟ್ಟಿದ್ದಾನೆ ) ಅವಳಿಗೆ ಮನದಲ್ಲೇ ಒಂದು ಸೌತೆಕಾಯಿ ಬೆಲ್ಲದ ಅಚ್ಚು ಮತ್ತು ಐದು ರುಪಾಯಿ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆದು ಹೊರಡಲನುವಾದೆ . ಕೂರಪ್ಪ ..... ಮೊದಲನೆ ಬಾರಿ ಬಂದಿದ್ದೀಯಾ ಮನೆಗೆ.... ಏನು ತೆಗೊತೀಯಾ ?? ಎಂದರು . ಸರ್ ನಿಮ್ಮ ಮಗಳನ್ನ ಬಿಟ್ಟು ಬೇರೆ ಏನು ಕೊಟ್ರು ತೆಗೊತೀನಿ ಎಂದು ಹೇಳಿ ಕಹಿ ಕಾಪಿ ಕುಡಿದು ಗೂಡು ಸೇರಿಕೊಂಡೆ . ನಾನೇನು ಮಾಡಲಿ ನೀವೇ ಹೇಳಿ?? .....

ಇರಲಿ ಈಗ ಫೆಬ್ರವರಿ ೧೪ ಹತ್ರ ಬರುತ್ತಿದೆ . ನನ್ನ ಜಾತಕ ನೋಡಿದ ಪುರೋಹಿತರು " ಈ ವರ್ಷ ಚಾನ್ಸ್ ಇದೆ " ಎಂದಿದ್ದಾರೆ.ಮನಸ್ಸು ಕನಸಿನ ಗೋಪುರ ಕಟ್ಟಲು ಆರಂಭಿಸಿದೆ . ಕಾತರ ಕಳವಳಗಳೊಂದಿಗೆ ಫೆಬ್ರವರಿ 14 ನ್ನು ಎದುರು ನೋಡುತ್ತಿದ್ದೇನೆ .ಸಲಹೆಗೆ ನಿಮ್ಮನ್ನು ಸಂಪರ್ಕಿಸುತ್ತೇನೆ ಆಗ ನಾನೇನು ಮಾಡ್ಲಿ ನೀವೇ ಹೇಳಿ ಹಾಗೆ ಮಾಡುತ್ತೇನೆ ಆಯ್ತಾ ??
==========================ವಿಕಟಕವಿ =======================

Comments

Anonymous said…
ಚೆನ್ನಾಗಿದೆ ಸರ್‍..

ನೀವು ದೇವದಾಸನ ಕಾದಂಬರಿ ಬರೆದರೆ ಅದರಲ್ಲಿ ಬಾರಿನಲ್ಲಿ ಬಿಯರ್ ಕುಡಿಯುವ ಸನ್ನಿವೇಶಗಳಿರಲ್ಲ.ಪ್ರೇಮ ಭಗ್ನವಾದಾಗ ಮಜವಾಗಿ ಜ್ಯೂಸ್ ಕುಡಿಯುತ್ತಾ ಶಾಸ್ತ್ರಿ ಪಾರ್ಕಿನಲ್ಲಿ ಅಡ್ಡಾಡುವ ಭಂಡಾರ್ಕರ್ಸ್ ಕಾಲೇಜಿನ ಯುವತಿಯರಿಗೆ ಲೈನ್ ಹೊಡೆಯುವ ದೃಶ್ಯಗಳಿರಬಹುದೇನೋ ಅನ್ನಿಸುತ್ತದೆ..;)
Unknown said…
good,kapalamoksha sandhi concept was too good,but never heard about "sutta aloogadde" till now
ಮಛಾ.. ಹಾಸ್ಯ ಅಂದರೇ ಏನು ಅಂಕಾ ತೋರಿಸಿದ್ದೀಯಾ. ಈ ಸಲಾ ನಿನ್ನ ಗದ್ಯದ ಜೂಡಿ ಪದ್ಯ ಸುದೇಕ್ ಅರ್ಥ ಆತು. ನಮಗ ಸಾಲಿ ಪಠ್ಯ ಪುಸ್ತಕದಾಗ ಹಿಂತಾ ಪಾಠ ಇದ್ದಿದ್ರ ಖಂಡಿತ ಕನ್ನಡಾ ಕ್ಲಾಸಿಗೇ ಓಡೋಡಿ ಹೋಗ್ತಿದ್ವಿ.

ಇದನ್ನ ಓದುಮುಂದ ನಾ ಅಂತ್ರೂ ಬಿದ್ದ ಬಿದ್ದ ನಗ್ಲಿಕತ್ತಿದ್ದೇ.

ಕಪಾಲಮೋಕ್ಷ ಸಂಧಿ ಅಂತ್ರೂ ಎಂದೂ ಮರಿಯುದಿಲ್ಲಾ. ಹಿಂಗೇ ಬರೀತಿರು ಮಛಾ.

ಇವನ್ನ ಯಾವುದರೇ ಮ್ಯಾಗಝಿನ್ ಅಥವಾ ಯಾವುದರೇ ಪತ್ರಿಕೇಗೋ ಕಳಸ್ತೀ ಏನ್ ನೋಡು. ಅಷ್ಟು ಲಾಯಕ್ ಅದ ಈ ಲೇಖನಿ.
ಥ್ಯಾಂಕ್ಸ್ ರಂಗಾ .... ಆಸ್ಕರ್ ಸಿಕ್ಕಷ್ಟು ಖುಷಿ ಆಯಿತು . ನಿಮ್ಮ ಸಲಹೆ ಹಾಗೋ ಪ್ರೋತ್ಸಾಹ ಹೀಗೆ ಇರಲೆಂದು ಕೋರಿಕೆ .
ಧನ್ಯವಾದಗಳೊಂದಿಗೆ
ವಿ . ಸುಮಂತ ಶ್ಯಾನುಭಾಗ್
Ravi K S said…
ಕಪಾಳಮೋಕ್ಷ ಸಂಧಿ !! He He He...
ಸೂಪರ್ ಆಗಿದೆ..

I second Ranga's thougths.. You should publish these in some magazine.. It should reach more people than now...

raviks.livejournal.com

Popular posts from this blog

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...

ದಿಬ್ಬಣ

ಕೇಳಿದಳು ಕನಸಿನಲಿ ಕತ್ರಿನಾ ಕೈಫು ಆಗಲೇ ಸುಮಂತಾ ನಾ ನಿನ್ನ ವೈಫು ಹೇಳಿದೆನು ನೀನೊಂದು ಕೆಲಸವನು ಮಾಡು ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು|| ಸೈಫ ಅಲಿ ಖಾನಲ್ಲಿ ಇಲ್ಲವೊ ದಮ್ಮು ನನ್ನವನಾಗೋ ಓ  ನನ್ನ ಸುಮ್ಮು!!!! ಬೇಡುತ್ತ ನಿಂತಿಹಳು ನೋಡು ಕರೀನಾ ಬಕರಾ ಆಗಲು ನಾನೇನು ಕುರಿ ನಾ ?? ಬಹುಕಾಲದಿಂದ ನಾ ಮೆಚ್ಚಿಹೆನು ನಿನ್ನ ತಪ್ಪು ಮಾಡಿದೆ ವರಿಸಿ ಸಣ್ಣ ’ಬಚ್ಚಾ’ನನ್ನ ( SMALL  ' B' ) ಓಡಿ ಬರುವೆ ನಾ ಹಿಡಿದು ನಿನ್ನ ಕೈ ತುದಿಗಾಲ ಮೇಲಿಹಳು ಐಶ್ವರ್ಯ ರೈ|| ನಮ್ಮೂರ ಗಂಡಿವನು ನನಗೆ ಪ್ರಿಫರೆನ್ಸು ಕ್ವೀನು ನಾನು ನೀನೇ ನನ್ನ ಪ್ರಿನ್ಸು ಇಲ್ಲ ಅಂದರೆ ನಿನಗೆ ನನ್ನ ಮೇಲಾಣೆ ಹಕ್ಕು ಚಲಾಯಿಸುತ್ತಿಹಳು ಪಡುಕೋಣೆ|| ಸೌತ್  ಇಂಡಿಯನ್ನರದ್ದು ಸಪರೇಟು ಸಾಲು ನಾನೇ ಬೇಕೆಂದು ಎಲ್ಲರದು ಗೋಳು ಒಲ್ಲೆನೆಂದರೆ ನಾನು  ಕುಡಿಯುವೆನು ವಿಷ ಎಂದು ಬೆದರಿಸುತ್ತಿದ್ದಾಳೆ ತ್ರಿಷಾ ಜಾನ್ ಹೈ ತು ಎನ್ನುತ್ತಾಳೆ  ಜೆನಿಲಿಯಾ ಛತ್ರ 'ಪತಿ' ಯಾಗೋ ಎಂದೆನುವ ಶ್ರೀಯಾ ನನ್ನೊಳಗೆ ನೀನು ನಿನ್ನೊಳಗೆ ನಾನು ಲಲ್ಲೆಗರೆಯುತ್ತಿರುವಳು ಆಸೀನು|| ಬಿಪಾಷಾ ಮಲ್ಲಿಕಾರನ್ನು ಮಾಡಿದೆ ಅವೈಡು ರಾಖೀ ಸಾವಂತು ಡಿಸ್ ಕ್ವಾಲಿಫೈಡು ಬೋಲ್ಡು ಮಾಡಲು ಎಸೆದಿಹಳು ಬಾಲನ್ನು ವಿದ್ಯಾ ಪ್ರಿಯಾಂಕ ಬರೆದು ಕಳಿಸಿರುವಳು ಪ್ರೇಮ ಪದ್ಯ || ಓದಿ ಕವನವ ಶಾಂತಿಗೆ ನೆತ್ತಿಗೇರಿತು ಪಿತ್ತ ಹುಡುಕಿದಳು ...